ನಟ ಸಿದ್ಧಾರ್ಥ್ ರಿಂದ ಮೋದಿ ಸರಕಾರದ ವಿರುದ್ಧ ಸರ್ಜಿಕಲ್ ದಾಳಿ!

Update: 2019-03-05 08:35 GMT

ಮುಂಬೈ, ಮಾ.5: ಬಾಲಿವುಡ್ ನಟ ಸಿದ್ಧಾರ್ಥ್ ತಮ್ಮ ನೇರಾನೇರ ನಿಷ್ಠುರ ಅಭಿಪ್ರಾಯ ಹೇಳುವಲ್ಲಿ ಯಾವತ್ತೂ ಎತ್ತಿದ ಕೈ. ಯಾವುದೇ ವಿಚಾರದ ಬಗ್ಗೆ, ಅದು ಕಾಲಿವುಡ್ ಮುಷ್ಕರ ಅಥವಾ ಕೇರಳ ಪ್ರವಾಹದ ವಿಚಾರವಿರಲಿ ತಮ್ಮ ಮನಸ್ಸಿಗೆ ತೋಚಿದ್ದನ್ನು ಟ್ವಿಟ್ಟರ್ ನಲ್ಲಿ ಹೇಳಿಕೊಳ್ಳಲು ಹಿಂದೆ ಮುಂದೆ ನೋಡದ ನಟ ಅವರಾಗಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆಯ ವಾತಾವರಣವಿರುವ ಸಂದರ್ಭದಲ್ಲಿ  ಮತ್ತೆ ಸಿದ್ಧಾರ್ಥ್ ತಮ್ಮ  ಅಭಿಪ್ರಾಯ ವ್ಯಕ್ತಪಡಿಸಿ ಮೋದಿ ಸರಕಾರದ ವಿರುದ್ಧವೇ ಸರ್ಜಿಕಲ್ ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ ಇತ್ತೀಚೆಗೆ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ಕೆಲ ಜನರು ವಾಯು ದಾಳಿಗೆ ಪುರಾವೆ ಕೇಳುತ್ತಿರುವುದಕ್ಕೆ ಆಘಾತ ವ್ಯಕ್ತಪಡಿಸಿ ಜನರೇಕೆ ನಮ್ಮ ಸೇನಾ ಪಡೆಗಳನ್ನು ನಂಬುತ್ತಿಲ್ಲ ಎಂಬುದು ನೋವಿನ ಸಂಗತಿ ಎನ್ನುವ ಮೂಲಕ ವಿಪಕ್ಷಗಳನ್ನು ಟಾರ್ಗೆಟ್ ಮಾಡಿದ್ದರು.

``ಮೊದಲು ಸರ್ಜಿಕಲ್ ದಾಳಿಗೆ ಪುರಾವೆ ಕೇಳಿದರು ಹಾಗೂ ಈಗ ವಾಯು ದಾಳಿಗೆ ಪುರಾವೆ  ಕೇಳುತ್ತಿದ್ದಾರೆ. ಕಾಂಗ್ರೆಸ್ ಮತ್ತದರ ಮಿತ್ರ  ಪಕ್ಷಗಳು ನಮ್ಮ ಸೇನಾ ಪಡೆಗಳ ನೈತಿಕ ಸ್ಥೈರ್ಯ ಕುಸಿಯುವಂತೆ ಏಕೆ ಮಾಡುತ್ತಿವೆ?, ನಮ್ಮ ವೈರಿಗಳಿಗೆ ಲಾಭವಾಗುವಂತಹ ಹೇಳಿಕೆಗಳನ್ನು ಅವರೇಕೆ ನೀಡುತ್ತಿದ್ದಾರೆ?'' ಎಂದು ಪ್ರಧಾನಿ ಪ್ರಶ್ನಿಸಿದ್ದರು.

ಇದಕ್ಕೆ ಟ್ವೀಟ್  ಮೂಲಕ ಉತ್ತರ ನೀಡಿದ ಸಿದ್ಧಾರ್ಥ್ ``ನಮ್ಮ ಜನರು ನಮ್ಮ ಸೇನಾ ಪಡೆಗಳನ್ನು ನಂಬುತ್ತಾರೆ ಹಾಗೂ ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಅದರೆ ಅವರು ನಿಮ್ಮನ್ನು ಹಾಗೂ ನಿಮ್ಮ ಗ್ಯಾಂಗ್ ಅನ್ನು ನಂಬುವುದಿಲ್ಲ, ಪುಲ್ವಾಮ ದಾಳಿಯ ರಾಜಕೀಕರಣವನ್ನು ನಿಲ್ಲಿಸಿ. ನಿಜವಾದ ಹೀರೋಗಳ  ಬೆನ್ನ ಹಿಂದೆ ನಿಂತು ಹೀರೋಗಳಂತೆ ತೋರ್ಪಡಿಸಿಕೊಳ್ಳಬೇಡಿ. ನೀವು ಸೇನೆಯನ್ನು ಗೌರವಿಸಬೇಕು. ನೀವು ಸೈನಿಕರಲ್ಲ. ಸೈನಿಕರಂತೆ ಜನರು ನಿಮ್ಮನ್ನು ನೋಡಬೇಕೆಂದು ನಿರೀಕ್ಷಿಸಬೇಡಿ. ಜೈ ಹಿಂದ್,'' ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News