ಪುಲ್ವಾಮ ದಾಳಿಯಲ್ಲಿ ಜೆಇಎಂ ಕೈವಾಡಕ್ಕೆ ಸ್ಪಷ್ಟ ಪುರಾವೆ: ಭಾರತ
ಹೊಸದಿಲ್ಲಿ, ಮಾ.13: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಪಾಕಿಸ್ತಾನ ಮೂಲದ ಜೈಷೆ ಮುಹಮ್ಮದ್ (ಜೆಇಎಂ) ಸಂಘಟನೆಯ ಕೈವಾಡವಿರುವುದಕ್ಕೆ ಸ್ಪಷ್ಟ ಪುರಾವೆ ದೊರೆತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಯ ಹೊಣೆಯನ್ನು ಜೆಇಎಂ ಈಗಾಗಲೇ ಹೊತ್ತುಕೊಂಡಿದೆ. ಪಾಕಿಸ್ತಾನದ ರಾವಲ್ಪಿಂಡಿಯ ಸ್ಥಳವೊಂದರಿಂದ ಜೆಇಎಂ ಸಂಘಟನೆಯ ಸದಸ್ಯರು ಬಳಸುವ ಇಂಟರ್ನೆಟ್ ಪ್ರೊಟೊಕಾಲ್ (ಐಪಿ) ವಿಳಾಸದಿಂದಲೇ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆಸಿದ್ದ ಆತ್ಮಹತ್ಯಾ ಬಾಂಬರ್ ಅದಿಲ್ ದಾರ್ ತನ್ನ ಹೇಳಿಕೆಯನ್ನು ಅಪ್ಲೋಡ್ ಮಾಡಿದ್ದ. ಈ ಬಗ್ಗೆ ಸಾಕ್ಷ್ಯದ ಜೊತೆಗೆ, ಸಂಘಟನೆಯ ವಕ್ತಾರ ಮುಹಮ್ಮದ್ ಹಸನ್ ಹೇಳಿಕೆಯನ್ನು ಪುರಾವೆಯಾಗಿ ಪಾಕಿಸ್ತಾನಕ್ಕೆ ಹಾಗೂ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸದಸ್ಯ ರಾಷ್ಟ್ರ ಸೇರಿದಂತೆ ಇತರ ರಾಷ್ಟ್ರಗಳಿಗೆ ಭಾರತ ನೀಡಿದೆ. ಆದರೆ ಭಾರತ ಹಸ್ತಾಂತರಿಸಿದ ಪುರಾವೆಯ ಕುರಿತು ಪಾಕಿಸ್ತಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಅಲ್ಲದೆ ಮುಹಮ್ಮದ್ ಹಸನ್ ಬಳಸುವ 7006250771 ವಾಟ್ಸಾಪ್ ನಂಬರ್ ಫೆ.14ರಂದು(ಪುಲ್ವಾಮ ದಾಳಿ ನಡೆದ ದಿನ) ಸಂಜೆ 4:42ರವರೆಗೆ ಸಕ್ರಿಯವಾಗಿತ್ತು ಮತ್ತು ಇದು 103.255.7.0 ಎಂಬ ಐಪಿ ವಿಳಾಸಕ್ಕೆ ಸಂಪರ್ಕಿಸಿತ್ತು. ಈ ಐಪಿ ಸಂಖ್ಯೆಯ ಮೂಲ ಪಾಕಿಸ್ತಾನದ ರಾವಲ್ಪಿಂಡಿ ಬಳಿಯ ಪ್ರದೇಶದಲ್ಲಿದೆ.
ಈಗ ದೊರೆತ ಸಾಕ್ಷಿಯಂತೆ , ಪುಲ್ವಾಮಾ ದಾಳಿಯ ಯೋಜನೆಯನ್ನು ಜೆಇಎಂ ಮುಖ್ಯಸ್ಥ ಮಸೂದ್ ಅಝರ್ ಹಾಗೂ ಆತನ ಕಿರಿಯ ಸಹೋದರ ಅಬ್ದುಲ್ ರವೂಫ್ ಅಸ್ಘರ್ ರೂಪಿಸಿದ್ದು, ಅಝರ್ನ ಬಾವ ಅಬ್ದುಲ್ ರಶೀದ್ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಉದ್ದೇಶ ಇವರದಾಗಿತ್ತು. ಅಲ್ಲದೆ 2018ರ ಡಿಸೆಂಬರ್ 9ರಂದು ಸ್ಫೋಟಕ ತಜ್ಞನಾಗಿದ್ದ ಅಪಘಾನಿಸ್ತಾನ ಮೂಲದ ಜೈಷೆ ಉಗ್ರ ಅಬ್ದುಲ್ ರಶೀದ್ ಗಾಝಿ ಭಾರತದ ಗಡಿ ನುಸುಳಿ ಕಾಶ್ಮೀರಕ್ಕೆ ಬಂದಿದ್ದು ಇಲ್ಲಿ ಸ್ಥಳೀಯ ಯುವಕರಿಗೆ ತರಬೇತಿ ನೀಡಿದ್ದ. ಪಾಕ್ ಪ್ರಜೆ ಕಮ್ರಾನ್ ಪುಲ್ವಾಮಾ ದಾಳಿಯನ್ನು ಕಾರ್ಯಗತಗೊಳಿಸಿದ್ದು, 2019ರ ಫೆ.18ರಂದು ಭಾರತೀಯ ಸೇನೆಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಈತ ಹಾಗೂ ಮತ್ತೊಬ್ಬ ಪಾಕ್ ಪ್ರಜೆ ಹೈದರ್ ಸಾವನ್ನಪ್ಪಿದ್ದರು.
ವಾಟ್ಸಾಪ್, ಟೆಲಿಗ್ರಾಂ ಹಾಗೂ ಫೇಸ್ಬುಕ್ಗಳಲ್ಲಿ ಪಾಕಿಸ್ತಾನದ ನಂಬರ್ಗಳನ್ನು ಬಳಸಿಕೊಂಡು ಅಪ್ಲೋಡ್ ಮಾಡಿರುವ ವೀಡಿಯೊಗಳು, ಪ್ಯಾಂಪ್ಲೆಟ್ಗಳು, ಹಾಗೂ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಭಾರತ ಸಂಗ್ರಹಿಸಿದ ಪುರಾವೆಗಳಲ್ಲಿದೆ. ಒಂದು ವಿಡಿಯೋ ಸಂದೇಶದಲ್ಲಿ ಮಸೂದ್ ಅಝರ್, ಕಾಶ್ಮೀರದ ಮುಸ್ಲಿಮರು ಒಗ್ಗೂಡಿ ಕಾರ್ಯ ನಿರ್ವಹಿಸಿದರೆ ತಮ್ಮ ಗುರಿಯನ್ನು ತಿಂಗಳೊಳಗೆ ತಲುಪಬಹುದು ಎಂದು ಹೇಳಿದ್ದ.
ಅಲ್ಲದೆ, ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಸುಳ್ಳು ಹೆಸರು ಹೇಳಿಕೊಂಡು ಭಾರತದ ಆಸ್ಪತ್ರೆಗಳು, ಸಿಆರ್ಪಿಎಫ್ ಕಚೇರಿ, ಪೊಲೀಸ್ ಕಂಟ್ರೋಲ್ ರೂಂ, ಹಾಗೂ ಸ್ಥಳೀಯರಿಗೆ ಕರೆ ಮಾಡಿ ದಾಳಿಯಿಂದಾದ ಜೀವಹಾನಿ ಹಾಗೂ ಆ ಬಳಿಕ ಭಾರತದ ಸೇನಾಪಡೆಯ ಚಲನವಲನದ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನಿಸಿರುವುದೂ ತಿಳಿದು ಬಂದಿದೆ. ಅಲ್ಲದೆ 2016ರಲ್ಲಿ ಪಠಾಣ್ಕೋಟ್ ವಾಯುನೆಲೆಯ ಮೇಲೆ ಜೆಇಎಂ ಉಗ್ರರು ನಡೆಸಿದ್ದ ದಾಳಿ, ಅಪಘಾನಿಸ್ತಾನದಲ್ಲಿ ಭಾರತೀಯ ದೂತಾವಾಸದ ಮೇಲೆ ನಡೆಸಿದ್ದ ದಾಳಿ ಸಹಿತ ಪ್ರಮುಖ ಆರು ದಾಳಿಗಳ ವಿವರವನ್ನೂ ಭಾರತ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸದಸ್ಯರಿಗೆ ಹಸ್ತಾಂತರಿಸಿದೆ.
ಜೊತೆಗೆ, ಭಾರತ- ಪಾಕ್ ಗಡಿಭಾಗದಲ್ಲಿ ಸುಮಾರು 80 ಜೆಇಎಂ ಉಗ್ರರು ಪಾಕಿಸ್ತಾನದ ಆಶ್ರಯದಲ್ಲಿ ಸಕ್ರಿಯರಾಗಿದ್ದಾರೆ ಎಂಬ ಪುರಾವೆಯನ್ನೂ ಭಾರತ ಸಂಗ್ರಹಿಸಿ ಪಾಕಿಸ್ತಾನಕ್ಕೂ ಇದನ್ನು ಹಸ್ತಾಂತರಿಸಿದೆ. ಆದರೆ ಇಷ್ಟೆಲ್ಲಾ ಪುರಾವೆ ಒದಗಿಸಿದರೂ ಪಾಕಿಸ್ತಾನದ ಇಮ್ರಾನ್ಖಾನ್ ಸರಕಾರ ಮಾತ್ರ ಸಂಪೂರ್ಣ ಮೌನಕ್ಕೆ ಶರಣಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.