ಹೋಲಿ ಸಂಭ್ರಮದಲ್ಲಿ ಮಾತಿನ ಚಕಮಕಿ: ಬಿಜೆಪಿ ಶಾಸಕನ ಮೇಲೆ ಗುಂಡಿನ ದಾಳಿ
Update: 2019-03-21 17:22 GMT
ಹೊಸದಿಲ್ಲಿ, ಮಾ.21: ಉತ್ತರಪ್ರದೇಶದ ಲಕ್ಷ್ಮೀಪುರದಲ್ಲಿ ಗುರುವಾರ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಹೋಲಿ ಸಂಭ್ರಮಾಚರಣೆಯ ಸಂದರ್ಭ ಮಾತಿನ ಚಕಮಕಿ ಉಂಟಾಗಿ ಬಿಜೆಪಿ ಶಾಸಕ ಯೋಗೇಶ್ ವರ್ಮರ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ.
ಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಯೋಗೇಶ್ ವರ್ಮರ ಕಾಲಿಗೆ ಗುಂಡೇಟು ತಗುಲಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಹೋಲಿ ಸಂಭ್ರಮ ನಡೆಯುತ್ತಿದ್ದಾಗ ಯೋಗೇಶ್ ವರ್ಮರೊಂದಿಗೆ ಮಾತನಾಡಲೆಂದು ಕೆಲವು ವ್ಯಕ್ತಿಗಳು ಆಗಮಿಸಿದರು. ಅವರೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಅವರೊಳಗೆ ವಾಗ್ವಾದ ನಡೆದು ಆ ವ್ಯಕ್ತಿಗಳು ಶಾಸಕರತ್ತ ಗುಂಡು ಹಾರಿಸಿದ್ದಾರೆ.
ಕಾಲಿಗೆ ಗುಂಡೇಟು ತಗುಲಿದ್ದು ಶಾಸಕರು ತೀವ್ರ ಆಘಾತಗೊಂಡಿರುವ ಕಾರಣ ಆರೋಪಿಗಳ ಬಗ್ಗೆ ಯಾವುದೇ ಹೇಳಿಕೆ ನೀಡಲು ಸಾಧ್ಯವಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.