ಗುಂಪಿನಿಂದ ಥಳಿಸಿ ಹತ್ಯೆಯ ವಿರುದ್ಧದ ಕಾನೂನಿನ ಪ್ರಸ್ತಾವ ಪ್ರಣಾಳಿಕೆಯಲ್ಲಿರಲಿ
ಹೊಸದಿಲ್ಲಿ, ಮಾ. 27: ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಗುಂಪಿನಿಂದ ಥಳಿಸಿ ಹತ್ಯೆಯ ವಿರುದ್ಧ ಕಾನೂನು ಪ್ರಸ್ತಾಪಕ್ಕೆ 10 ರಾಜ್ಯಗಳ ಮುಸ್ಲಿಂ ಮಹಿಳೆಯರ ಗುಂಪು ಆಗ್ರಹಿಸಿದೆ.
ಎಪ್ರಿಲ್-ಮೇಯಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಗುಂಪಿನಿಂದ ಹತ್ಯೆಗೀಡಾದ ಉಮರ್ ಖಾನ್ ಅವರ ಪತ್ನಿ ಖಾಲಿದಾ ಸಹಿತ ಹಲವು ಮಹಿಳೆಯರು ತಮ್ಮ ಬೇಡಿಕೆಗಳ ಪ್ರಣಾಳಿಕೆಯನ್ನು ಪ್ರಕಟಿಸಿದ್ದಾರೆ. ದ್ವೇಷದ ವಿರುದ್ಧ, ಮಹಿಳೆಯರು, ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳನ್ನು ಮರು ಸ್ಥಾಪಿಸಲು ರಾಜಕೀಯ ಪಕ್ಷಗಳನ್ನು ಆಗ್ರಹಿಸುವ ಚಳವಳಿ ಅಡಿಯಲ್ಲಿ ಈ ಮಹಿಳೆಯರು ಸಂಘಟಿತರಾಗಿದ್ದಾರೆ.
‘‘ನಾವು ನಿರಂತರ ಬೆದರಿಕೆಯಲ್ಲಿ ಬದುಕುತ್ತಿದ್ದೇವೆ. ವಿಚಾರಣೆ ಎದುರಿಸಲು ನ್ಯಾಯಾಲಯಕ್ಕೆ ಹಾಜರಾಗಲು ಕೂಡ ಕಷ್ಟವಾಗುತ್ತಿದೆ. ಯಾಕೆಂದರೆ, ಕೆಲವು ಗುಂಪುಗಳಿಂದ ನಾವು ಬೆದರಿಕೆ ಕರೆ ಸ್ವೀಕರಿಸಿದ್ದೇವೆ.’’ ಎಂದು ಖಾಲಿದಾ ಹೇಳಿದ್ದಾರೆ. ‘‘ನನ್ನ ಕುಟುಂಬ ಏನನ್ನು ಎದುರಿಸುತ್ತದೆಯೋ, ಅದನ್ನು ಇತರ ಕುಟುಂಬಗಳು ಎದುರಿಸಬಾರದು ಎಂದು ನಾನು ಬಯಸುತ್ತೇನೆ. ಆಯ್ಕೆಯಾಗಿ ಅಧಿಕಾರಕ್ಕೆ ಬರುವ ಪಕ್ಷಗಳು ಗುಂಪಿನಿಂದ ಥಳಿಸಿ ಹತ್ಯೆಗೈಯುವ ವಿರುದ್ಧ ಕಾನೂನು ರೂಪಿಸಲಿ’’ ಎಂದು ನಾನು ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.