ಬಾಂಗ್ಲಾದಲ್ಲಿ ಭೀಕರ ಅಗ್ನಿದುರಂತ: 17 ಮಂದಿ ಮೃತ್ಯು

Update: 2019-03-29 03:46 GMT

ಢಾಕಾ, ಮಾ. 29: ಬಾಂಗ್ಲಾ ರಾಜಧಾನಿಯಲ್ಲಿ ಗುರುವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 17 ಮಂದಿ ಸಜೀವ ದಹನವಾಗಿದ್ದು, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕಚೇರಿ ಸಂಕೀರ್ಣ ಹೊಂದಿದ್ದ ಗಗನಚುಂಬಿ ಕಟ್ಟಡವೊಂದರಲ್ಲಿ ಈ ಬೆಂಕಿ ಆಕಸ್ಮಿಕ ಸಂಭವಿಸಿದೆ.

ಹಲವು ಮಂದಿ ಕಟ್ಟಡದ ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ. ಆದರೆ ಹಲವು ಗಂಟೆಗಳ ಕಾಲ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಹುತೇಕ ಮಂದಿಯನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

"ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ಅಗ್ನಿಶಾಮಕ ಮತ್ತು ನಾಗರಿಕ ರಕ್ಷಣೆ ಇಲಾಖೆಯ ಉಪನಿರ್ದೇಶಕ ದೇಬಾಶಿಶ್ ಬರ್ಧನ್ ಸ್ಪಷ್ಟಪಡಿಸಿದ್ದಾರೆ. ಬೆಂಕಿಯ ತೀವ್ರತೆ ಕಡಿಮೆಯಾಗಿದೆ. ಆದರೆ ಇನ್ನೂ ಸಂಪೂರ್ಣವಾಗಿ ನಂದಿಸುವುದು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಟ್ಟಡದ ಗಾಜಿನ ಗೋಡೆಗಳನ್ನು ಒಡೆದು ವಿಷಾನಿಲ ಹೊರಹೋಗಲು ಕ್ರಮ ಕೈಗೊಂಡಿದ್ದಾರೆ.

ಢಾಕಾದ ಬನಾನಿ ವಾಣಿಜ್ಯ ಜಿಲ್ಲೆಯ ಜನನಿಬಿಡ ರಸ್ತೆಯಲ್ಲಿರುವ ಎಫ್‌ಆರ್ ಟವರ್ಸ್‌ನಲ್ಲಿ ಈ ದುರಂತ ಸಂಭವಿಸಿದೆ. ಕಟ್ಟಡ ನಿಬಂಧನೆಗಳು ಮತ್ತು ಸುರಕ್ಷಾ ಕ್ರಮಗಳನ್ನು ಕಡೆಗಣಿಸಿ ಹಲವು ಕಟ್ಟಡಗಳು ಇಲ್ಲಿ ತಲೆ ಎತ್ತಿದ್ದು, ಅಗ್ನಿದುರಂತಗಳು ಇಲ್ಲಿ ಸಾಮಾನ್ಯವಾಗಿವೆ.

ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದು, 70 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಗ್ನಿಶಾಮಕ ದಳದ ನಿಯಂತ್ರಣ ಕಚೇರಿ ಕರ್ತವ್ಯಾಧಿಕಾರಿ ಶಹದತ್ ಹುಸೈನ್ ಹೇಳಿದ್ದಾರೆ. ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಪರಿಹಾರ ಕಾರ್ಯಕ್ಕೆ ಬಳಸಲಾಗುತ್ತಿದೆ. ಕಟ್ಟಡದಲ್ಲಿ ಸಿಕ್ಕಿಹಾಕಿ ಕೊಂಡವರಲ್ಲಿ ಐದು ಮಂದಿ ಕಿಟಕಿ ಮೂಲಕ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಉರಿದ ಕಟ್ಟಡ ಸಾಮಗ್ರಿಗಳು ಅವರ ಸುತ್ತ ಬಿದ್ದಿರುವ ಘಟನೆ ರಾಯ್ ಪಿನಾಕಿ ಎಂಬುವವರು ಸೆರೆಹಿಡಿದ ಫೇಸ್‌ಬುಕ್ ಲೈವ್‌ನಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News