ನೋಟು ರದ್ದತಿ, ಜಿಎಸ್ ಟಿಯಿಂದ ದೇಶ ಸರ್ವನಾಶವಾಗಿದೆ: ಬಿಜೆಪಿ ಸಂಸದ ಉದಿತ್ ರಾಜ್

Update: 2019-04-03 14:07 GMT

ಹೊಸದಿಲ್ಲಿ, ಎ.3: ‘ಟಿವಿ 9 ಭಾರತ್ ವರ್ಷ್’ ಹೊಸ ಹಿಂದಿ ಸುದ್ದಿವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ವಾಯುವ್ಯ ದಿಲ್ಲಿ ಕ್ಷೇತ್ರದ ಬಿಜೆಪಿ ಲೋಕಸಭಾ ಸದಸ್ಯ ಉದಿತ್ ರಾಜ್ ಅವರು ನೋಟು ರದ್ದತಿ ಹಾಗು ಜಿಎಸ್ ಟಿಗಳಿಂದ ದೇಶ ಸರ್ವನಾಶವಾಗಿದೆ ಎಂದು ಹೇಳಿರುವುದು ಬಹಿರಂಗವಾಗಿದೆ. ಈ ಕುರಿತ ವಿಡಿಯೋ ವನ್ನು ‘ಟಿವಿ 9 ಭಾರತ್ ವರ್ಷ್’ ಬುಧವಾರ ಸಂಜೆ ಬಿಡುಗಡೆ ಮಾಡಿದೆ.

ಇದೇ ವಿಡಿಯೋದಲ್ಲಿ ಉದಿತ್ ರಾಜ್ ಅವರು ಕಳೆದ ಚುನಾವಣೆಯಲ್ಲಿ ತಾನು 5 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಈ ಬಾರಿ 15 ಕೋಟಿ ರೂಪಾಯಿ ಖರ್ಚು ಮಾಡಲು ಸಜ್ಜಾಗಿರುವುದಾಗಿ ಹೇಳಿದ್ದಾರೆ. ದುಡ್ಡಿಲ್ಲದೆ ಚುನಾವಣೆ ನಡೆಯುವುದಿಲ್ಲ ಎಂದು ಅವರು ಇದರಲ್ಲಿ ಹೇಳಿದ್ದಾರೆ. ನೋಟು ರದ್ದತಿ ಹಾಗು ಜಿಎಸ್ ಟಿ ಅನುಷ್ಠಾನ ತಮ್ಮ ಸರ್ಕಾರದ ಅತಿದೊಡ್ಡ ಸಾಧನೆಗಳು ಎಂದು ಮೋದಿ ಹಾಗು ಅವರ ಪಕ್ಷದ ನಾಯಕರು ಆಗಾಗ ಹೇಳುತ್ತಾರೆ. ಆದರೆ ಅವರದೇ ಪಕ್ಷದ ಸಂಸದ ಹಾಗು ಪ್ರಮುಖ ದಲಿತ ಮುಖ ಎಂದೇ ಪರಿಗಣಿಸಲಾದ ಉದಿತ್ ರಾಜ್ ಅವರು ಈಗ ಈ ರೀತಿ ಹೇಳಿರುವುದು ಬಹಿರಂಗವಾಗಿದೆ.

ವಿಡಿಯೋ ಬಿಡುಗಡೆಯಾದ ಮೇಲೆ ಕೆಂಡಾಮಂಡಲರಾಗಿರುವ ಉದಿತ್ ರಾಜ್ ಅವರು ಇದು ಷಡ್ಯಂತ್ರವಾಗಿದ್ದು ತಾನು ಈ ಬಗ್ಗೆ ದೂರು ದಾಖಲಿಸುತ್ತೇನೆ , ಈ ಚಾನಲ್ ಬಂದ್ ಮಾಡಿಸುತ್ತೇನೆ ಎಂದು ಗುಡುಗಿದ್ದಾರೆ .

ಈ ಕಾರ್ಯಾಚರಣೆಯಲ್ಲಿ ಬಿಜೆಪಿಯ ಇನ್ನೊಬ್ಬ ಸಂಸದ ಬಹದ್ದೂರ್ ಸಿಂಗ್ ಕೋಲಿ , ಆರ್ ಜೇಡಿ ಸಂಸದ ,  ಆಪ್ ಸಂಸದ ಸಾಧು ಸಿಂಗ್   ಅವರೂ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News