ಕಾಂಗ್ರೆಸ್‌ ಅಹಿಂದದಿಂದ ಮೃದು ಹಿಂದುತ್ವದೆಡೆಗೆ

Update: 2019-04-07 18:28 GMT

ಮಾನ್ಯರೇ,

ಅಹಿಂದ ಮತ್ತು ಜಾತ್ಯತೀತ ಎಂಬ ಪದಗಳಿಗೆ ಬಹುತೇಕ ಸಾಮ್ಯತೆಯಿದೆ. ಆದರೆ ಇದೀಗ ಕಾಂಗ್ರೆಸ್ ಪಕ್ಷ ಆವಿಷ್ಕರಿಸಿರುವ ಮೃದು ಹಿಂದುತ್ವದಲ್ಲಿ ದೇಶಕ್ಕೆ ಆವಶ್ಯಕವಾದ ಬಹುತ್ವದ ಯಾವುದೇ ಸೂಚನೆ ಕಂಡು ಬರುವುದಿಲ್ಲ. ಅನ್ಯಥಾ ಕಾಂಗ್ರೆಸ್‌ನ ಮೇಲೆ ಭರವಸೆಯನ್ನು ಕಳಕೊಂಡ ಹಿಂದುತ್ವವಾದಿಗಳ ಭ್ರಮವಿರಸನಗೈಯುವ ದಿಸೆಯಲ್ಲಿ ಒಂದು ಅಪ್ರಬುದ್ಧ ಪ್ರಯತ್ನವೆಂದೇ ಹೇಳಬಹುದಾಗಿದೆ. ವಾಸ್ತವದಲ್ಲಿ ಸೆಕ್ಯುಲರ್ ಸಂವಿಧಾನವನ್ನು ಹೊಂದಿದ ಭಾರತ ದೇಶದಲ್ಲಿ ಒಂದೊಮ್ಮೆ ಕಾಂಗ್ರೆಸ್ ನಂತಹ ಸೆಕ್ಯುಲರ್ ಪಕ್ಷವು ಎಲ್ಲರಿಗೂ ಅಗತ್ಯವಿತ್ತು. ಹಿಂದುಳಿದವರು, ದಲಿತರು, ಗಿರಿಜನರು ಬಡಜನರು ಮಾತ್ರವಲ್ಲ ದೇಶ ಅಲ್ಪಸಂಖ್ಯಾತರಿಗೂ ಕಾಂಗ್ರೆಸ್ ಪ್ರಶ್ನಾತೀತ ಸೆಕ್ಯುಲರ್ ರಾಜಕೀಯ ಪಕ್ಷವಾಗಿತ್ತು. ಅದೃಷ್ಟವೋ ದುರದೃಷ್ಟವೋ ಶ್ರೀಮತಿ ಗಾಂಧಿಯವರ ನಂತರದ ಕಾಂಗ್ರೆಸ್ ಅಲ್ಪಸಂಖ್ಯಾತರ ಬಗ್ಗೆ ತೆಗೆದ ಬಹುತೇಕ ಹೆಜ್ಜೆಗಳು ತನ್ನ ಕಾಲಿಗೆ ಸ್ವಯಂ ಕೊಡಲಿ ಪ್ರಯೋಗಿಸುವಂತಿತ್ತು. ಹಿಂದೂ ವೋಟುಗಳನ್ನು ಕಬಳಿಸುವ ಭರಾಟೆಯಲ್ಲಿ ರಾಜೀವ್ ಸರಕಾರವು ಕೋಮುವಾದಿ ಸಂಘ ಪರಿವಾರವನ್ನು ಒಲಿಸುವ ಬೃಹತ್ ಪ್ರಯತ್ನಗಳನ್ನೇ ಕೈಗೆತ್ತಿಕೊಂಡಿತು.

ಇಂದಿರಾಗಾಂಧಿಯವರಿಂದ ಬಳುವಳಿಯಾಗಿ ಬಂದಿರುವ ಸಂತುಲಿತ ರಾಜಕೀಯ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಂಡ ರಾಜೀವ್ ಸರಕಾರವು ದೇಶದ ಸಮಗ್ರತೆಯ ಬಗ್ಗೆ ಚಿಂತಿಸದೆ ಸಂಘ ಪರಿವಾರದ ಪರವಾಗಿರುವ ಮತಬ್ಯಾಂಕನ್ನು ಕಬಳಿಸುವತ್ತ ತನ್ಮಯ ವಾಯಿತು. 1985ರಲ್ಲಿ ಸಂಘ ಪರಿವಾರಕ್ಕೆ ಬಾಬರಿ ಮಸೀದಿ ರಾಮಜನ್ಮ ಭೂಮಿಯ ಕರಸೇವೆಗೆ ಅನುವು ಮಾಡಿಕೊಟ್ಟಿತ್ತು. ವಾಸ್ತವದಲ್ಲಿ ಬಾಬರಿ ರಾಮ ಜನ್ಮಭೂಮಿ ವಿವಾದವು ಸುಪ್ರೀಂ ಕೋರ್ಟು ವಿಚಾರಣೆಯಲ್ಲಿರುವಾಗ ಆ ಬಗ್ಗೆ ಯಾವುದೇ ತೀರ್ಪು ಬರುವುದಕ್ಕಿಂತ ಮುಂಚಿತವಾಗಿ ಕರಸೇವೆಗಾಗಿ ಅನುವು ಮಾಡಿಕೊಟ್ಟಿರುವುದು ಸರಿಯಲ್ಲ. ರಾಜೀವ್ ಸರಕಾರದ ಈ ನೀತಿಯು ವಾಸ್ತವದಲ್ಲಿ ಹಿಂದುತ್ವವಾದಿಗಳ ತುಷ್ಟೀಕರಣವಲ್ಲದೆ ಬಹುಸಂಖ್ಯಾತ ಹಿಂದೂಗಳ ತುಷ್ಟೀಕರಣವೆನ್ನುವಂತಿಲ್ಲ 1991ರಲ್ಲಿ ರಾಜೀವಗಾಂಧಿಯ ಅನುಪಸ್ಥಿತಿಯಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಪಾರ್ಲಿಮೆಂಟಿನ 120 ಸ್ಥಾನಗಳನ್ನು ಪಡೆಯಿತು. ಪಿ.ವಿ ನರಸಿಂಹ ರಾವ್‌ರ ನೇತೃತ್ವದ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೇರಿತು. 1992ರ ಡಿಸೆಂಬರ್‌ನಲ್ಲಿನರಸಿಂಹರಾವ್ ಸರಕಾರವು ಇನ್ನೊಮ್ಮೆ ಸಂಘ ಪರಿವಾರವನ್ನು ತುಷ್ಟೀಕರಿಸುವ ಇನ್ನೊಂದು ಹೆಜ್ಜೆಯಿರಿಸಿ ಕೊಂಡು ಕರಸೇವೆಗೆ ಅವಕಾಶ ಮಾಡಿಕೊಟ್ಟಿತು.

ಸಾಮಾನ್ಯವಾಗಿ ಹೇಳುವಂತೆ ಲೋಕಸಭೆಯ ಸುಮಾರು 180 ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ ಮತವು ನಿರ್ಣಾಯಕವಾಗಿದೆ. ಸ್ವಾತಂತ್ರದ ನಂತರ ತುರ್ತು ಪರಿಸ್ಥಿತಿಯನ್ನು ಹೊರತು ಪಡಿಸಿಕೊಂಡು ಇಂದಿರಾ ಯುಗದಲ್ಲೂ ಈ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ 90% ಓಟುಗಳು ಕಾಂಗ್ರೆಸ್‌ಗೆ ಸಲ್ಲುತ್ತಿತ್ತು. ಇದರಿಂದಾಗಿ ಶ್ರಮವಿಲ್ಲದೆ ಕಾಂಗ್ರೆಸ್ ಜಯಭೇರಿಯಾಗಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿತ್ತು. ಬಾಬರಿ ಮಸೀದಿಯ ಧ್ವಂಸದ ನಂತರ ಕಾಂಗ್ರೆಸ್‌ನ ಈ ಅಲ್ಪಸಂಖ್ಯಾತರ ವೋಟು ಬ್ಯಾಂಕ್ ಧೂಳೀಪಟವಾಗಿದೆ. ವಿವಿಧ ಪಾರ್ಟಿಗಳಲ್ಲಿ ಹಂಚಿಹೋಗುವ ಅಲ್ಪಸಂಖ್ಯಾತರ ವೋಟಿನ ಫಲಶ್ರುತಿಯಾಗಿ ಕೋಮುವಾದಿ ಪಕ್ಷಗಳಿಗೆ ಬಹುತೇಕ ಪ್ರಯೋಜನವಾಗಿವೆ. ವಾಸ್ತವದಲ್ಲಿ ಮೃದು ಹಿಂದುತ್ವದ ಧೋರಣೆಯು ಕಾಂಗ್ರೆಸ್‌ಗೆ ರಾಜಕೀಯವಾಗಿ ಮುಳುವಾಗಿ ಪರಿಣಮಿಸಿದೆ. ಕಾಂಗ್ರೆಸ್ ರಾಜಕೀಯವಾಗಿ ಮತ್ತೆ ಹಿಂದಿನ ವರ್ಚಸ್ಸನ್ನು ಪಡೆಯಬೇಕಾದರೆ ಇನ್ನೊಮ್ಮೆ ಅಹಿಂದ ಅಥವಾ ನಿಜ ಸೆಕ್ಯುಲರಿಸಂ ನತ್ತ ಮರಳಬೇ ಕಾಗಿದೆ. ಕರ್ನಾಟಕದಲ್ಲಿ 2013 ರಿಂದ 2018ರ ವರೆಗಿದ್ದ ಸಿದ್ದರಾಮಯ್ಯ ಸರಕಾರವೇ ಇದಕ್ಕೆ ಸಾಕ್ಷಿಯಾಗಿದೆ. ಆದರೆ ಈ ಧೋರಣೆಯನ್ನು ಸ್ವೀಕರಿಸಲು ಹಿಂದುಳಿದ ಜಾತಿಯ ಕಾಂಗ್ರೆಸ್ಸಿಗರು ಸಿದ್ದರಿರಬಹುದಾದರೂ ಮೇಲ್ಜಾತಿಯವರು ಸ್ವೀಕರಿಸಲು ಸಿದ್ಧರಿರುವರೇ?

Writer - ಅಬೂ ಅನೀಸ್, ಕಲ್ಲಾಪು

contributor

Editor - ಅಬೂ ಅನೀಸ್, ಕಲ್ಲಾಪು

contributor

Similar News