ಮಝಪ್ಫರ್‌ನಗರ್ ಗಲಭೆ: ಪ್ರಕರಣ ಹಿಂದೆಗೆಯಲು ಇದುವರೆಗೆ ಅನುಮತಿ ನೀಡದ ಆದಿತ್ಯನಾಥ್ ಸರಕಾರ

Update: 2019-04-08 16:35 GMT

ಮುಝಪ್ಫರ್‌ನಗರ್ (ಉತ್ತರಪ್ರದೇಶ), ಎ. 8: ಈಗಾಗಲೇ ಹಿಂದೆಗೆಯಲು ನಿರ್ಧರಿಸಲಾಗಿದ್ದ ಮುಝಪ್ಫರ್‌ನಗರ್ ಗಲಭೆಯ ಯಾವುದೇ ಪ್ರಕರಣಗಳನ್ನು ಹಿಂದೆಗೆಯಲು ಜಿಲ್ಲಾಡಳಿತಕ್ಕೆ ಉತ್ತರಪ್ರದೇಶ ಸರಕಾರ ಇದುವರೆಗೆ ಅನುಮತಿ ನೀಡಿಲ್ಲ. 44 ಪ್ರಕರಣಗಳನ್ನು ಹಿಂದೆಗೆಯಲಾಗುವುದು ಎಂದು ಬಿಜೆಪಿ ಸರಕಾರ ಕಳೆದ ಡಿಸೆಂಬರ್‌ನಲ್ಲಿ ಘೋಷಿಸಿತ್ತು. ಆದರೆ, ಈಗ ಕೇವಲ 12 ಪ್ರಕರಣಗಳಿಗೆ ಮಾತ್ರ ಅನುಮತಿ ಕೋರಿದೆ ಎಂದು ಪ್ರಾಸಿಕ್ಯೂಶನ್ ಮೂಲಗಳು ತಿಳಿಸಿವೆ.

ನ್ಯಾಯಾಲಯದಿಂದ ಗಲಭೆ ಪ್ರಕರಣಗಳನ್ನು ಹಿಂದೆಗೆಯುವ ಬಗ್ಗೆ ಇದುವರೆಗೆ ಅನುಮತಿ ದೊರಕಿಲ್ಲ ಎಂದು ಜಿಲ್ಲಾಡಳಿತ ಪರ ವಕೀಲ ದುಷ್ಯಂತ್ ತ್ಯಾಗಿ ಹೇಳಿದ್ದಾರೆ. 2013 ಆಗಸ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ಮುಝಪ್ಫರ್‌ನಗರ್ ಹಾಗೂ ಸಮೀಪದ ಪ್ರದೇಶಗಳಲ್ಲಿ ಕೋಮು ಹಿಂಸಾಚಾರ ಸಂಭವಿಸಿತ್ತು. ಈ ಕೋಮು ಹಿಂಸಾಚಾರದಲ್ಲಿ 60 ಮಂದಿ ಮೃತಪಟ್ಟಿದ್ದರು ಹಾಗೂ 40,000 ಮಂದಿ ನಿರ್ವಸಿತರಾಗಿದ್ದರು.

125 ಪ್ರಕರಣಗಳಲ್ಲಿ ಮಝಪ್ಫರ್‌ನಗರ್ ಸಂಸದ ಸಂಜೀವ್ ಬಲ್ಯಾನ್, ಬಿಜ್ನೂರ್ ಸಂಸದ ಭರತೇಂದ್ರ ಸಿಂಗ್, ಶಾಸಕರಾದ ಸಂಗೀತ್ ಸೋಮ್ ಹಾಗೂ ಉಮೇಶ್ ಮಲ್ಲಿಕ್ ಸಹಿತ ಬಿಜೆಪಿಯ ಹಲವು ನಾಯಕರು ಆರೋಪಿಗಳಾಗಿದ್ದಾರೆ. ರಾಜ್ಯ ಸಚಿವ ಸುರೇಶ್ ರಾಣಾ ಹಾಗೂ ಸಂಘಪರಿವಾರದ ನಾಯಕಿ ಸಾಧ್ವಿ ಪ್ರಾಚಿ ಕೂಡ ಈ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News