ಮುಸ್ಲಿಂ ಲೀಗನ್ನು ‘ಗ್ರೀನ್ ವೈರಸ್’ ಎಂದಿದ್ದ ಆದಿತ್ಯನಾಥ್ ಟ್ವೀಟನ್ನು ತಡೆಹಿಡಿದ ಟ್ವಿಟರ್

Update: 2019-04-17 14:40 GMT

ಹೊಸದಿಲ್ಲಿ, ಎ.17: ಮುಸ್ಲಿಂ ಲೀಗನ್ನು ‘ಗ್ರೀನ್ ವೈರಸ್’ ಎಂದಿದ್ದ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಅವರ ಟ್ವೀಟನ್ನು ಟ್ವಿಟರ್ ತಡೆಹಿಡಿದಿದೆ.

ಮುಸ್ಲಿಂ ಲೀಗ್ ಎಂಬ ವೈರಸ್ ಮತ್ತೊಮ್ಮೆ ಬಂದಿದೆ ಮತ್ತು ಅದು ದೇಶವನ್ನು ವಿಭಜಿಸಿದೆ ಎಂದು ಹೇಳಿದ್ದ ಆದಿತ್ಯನಾಥ್ ಟ್ವೀಟ್ ನಲ್ಲಿ ವಯನಾಡ್ ನಲ್ಲಿ ರಾಹುಲ್ ಗಾಂಧಿ ರ್ಯಾಲಿಯಲ್ಲಿ ಹಸಿರು ಬಾವುಟಗಳನ್ನು ಹಾರಿಸಿದ್ದ ಬಗ್ಗೆಯೂ ಬರೆಯಲಾಗಿತ್ತು.

ಈ ಬಗ್ಗೆ ಚುನಾವಣಾ ಆಯೋಗದ ನೋಟಿಸ್ ಗೆ ಪ್ರತಿಕ್ರಿಯಿಸಿದ್ದ ಆದಿತ್ಯನಾಥ್ ತಾನು ವಿಭಜನೆಯ ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಿದ್ದೆ ಎಂದು ಸಮರ್ಥಿಸಿದ್ದರು.

ಎಪ್ರಿಲ್ 5ರಂದು ಆದಿತ್ಯನಾಥ್ ಮಾಡಿರುವ ಈ ಎರಡು ಟ್ವೀಟ್‌ಗಳು ಇನ್ನು ಮುಂದೆ ಅವರ ಟ್ವಿಟರ್ ವಾಲ್‌ನಲ್ಲಿ ಕಾಣಿಸುವುದಿಲ್ಲ ಎಂದು ಟ್ವಿಟರ್ ತಿಳಿಸಿದೆ. ಇದು ಉತ್ತರಪ್ರದೇಶದ ಮುಖ್ಯಮಂತ್ರಿಗೆ ಆಗಿರುವ ಮತ್ತೊಂದು ಹಿನ್ನಡೆಯಾಗಿದೆ. ಇದಕ್ಕೂ ಮೊದಲು ಅವರಿಗೆ 3 ದಿನ ಚುನಾವಣೆ ಪ್ರಚಾರ ಮಾಡದಂತೆ ನಿಷೇಧ ವಿಧಿಸಲಾಗಿತ್ತು.

ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂಲೀಗ್ (ಐಯುಎಂಎಲ್) ಸೇರಿದೆ. ರಾಹುಲ್ ಗಾಂಧಿ ಕೇರಳದ ವಯನಾಡ್‌ನಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿದ ಬಳಿಕ ಟ್ವೀಟ್ ಮಾಡಿದ್ದ ಆದಿತ್ಯನಾಥ್, ಐಯುಎಂಎಲ್ ವೈರಸ್ ಆಗಿದೆ ಮತ್ತು ದೇಶವನ್ನು ವಿಭಜಿಸುತ್ತಿದೆ ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಉತ್ತರಿಸಿದ್ದ ಐಯುಎಂಎಲ್, ದೇಶದ ದುರಂತಮಯ ವಿಭಜನೆಯ ಬಳಿಕ, 1948ರ ಮಾರ್ಚ್ 10ರಂದು ಐಯುಎಂಎಲ್ ಸ್ಥಾಪನೆಯಾಗಿದೆ. ಪಕ್ಷವು ದೇಶದ ಸಂವಿಧಾನಕ್ಕೆ ಮತ್ತು ಜಾತ್ಯಾತೀತತೆ, ಸಹೋದರತ್ವ , ಏಕತೆ ಮತ್ತು ಸಮಗ್ರತೆಗೆ ಬದ್ಧವಾಗಿದೆ. ದೇಶದ ವಿಭಜನೆಯಲ್ಲಿ ಐಯುಎಂಎಲ್‌ನ ಪಾತ್ರವಿಲ್ಲ ಎಂಬುದು ತಿಳಿದಿದ್ದೂ ಉದ್ದೇಶಪೂರ್ವಕವಾಗಿ ಈ ರೀತಿಯ ತಪ್ಪು ಹೇಳಿಕೆ ನೀಡಲಾಗಿದೆ ಎಂದು ತಿಳಿಸಿದೆ.

ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಬಿಜೆಪಿ ಐಟಿ ತಂಡದ ಮುಖ್ಯಸ್ಥ ಅಮಿತ್ ಮಾಳವೀಯ, ನಟಿ ಕೊಯೆನಾ ಮಿತ್ರ, ಬಿಜೆಪಿ ಯುವ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಹರ್ಷ್ ಸಂಘವಿ, ಶಿರೋಮಣಿ ಅಕಾಲಿದಳದ ಶಾಸಕ ಎಂಎಸ್ ಸಿರ್ಸಾ, ವಿಶೇಷ ಪಡೆಗಳ ಮಾಜಿ ಅಧಿಕಾರಿ ಸುರೇಂದ್ರ ಪೂನಿಯಾ ಸೇರಿದಂತೆ 31 ಮಂದಿಯ ಟ್ವೀಟ್‌ಗಳಿಗೆ ತಡೆ ನೀಡಲಾಗಿದೆ. ಇವುಗಳಲ್ಲಿ ಹೆಚ್ಚಿನವು ಬಿಜೆಪಿ ಬೆಂಬಲಿಗರ ಟ್ವೀಟ್‌ಗಳಾಗಿವೆ.

ಚುನಾವಣಾ ಆಯೋಗದ ಕ್ರಮವನ್ನು ಐಯುಎಂಎಲ್ ಸ್ವಾಗತಿಸಿದೆ. ಸಮುದಾಯದ ಮಧ್ಯೆ ದ್ವೇಷ ಭಾವನೆ ಬಿತ್ತಲು ಸಾಮಾಜಿಕ ಮಾಧ್ಯಮವನ್ನು ಬಳಸಲು ಬಿಡಬಾರದು ಎಂದು ಐಯುಎಂಎಲ್‌ನ ಪದಾಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News