ಕಾಂಗ್ರೆಸೇತರ ಅಭ್ಯರ್ಥಿಗೆ ಮತ ಹಾಕಿದರೆ ಕರೆಂಟ್ ಶಾಕ್: ಛತ್ತೀಸ್ಗಢ ಸಚಿವನ ಹೇಳಿಕೆ
ರಾಯ್ಪುರ, ಎ.17: ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಹೆಸರಿನ ಎದುರು ಇರುವ ಬಟನ್ ಮಾತ್ರ ಒತ್ತಬೇಕು. ಬೇರೆ ಬಟನ್ ಒತ್ತಿದರೆ ನಿಮಗೆ ಕರೆಂಟ್ ಶಾಕ್ ಹೊಡೆಯಬಹುದು ಎಂದು ಹೇಳಿಕೆ ನೀಡಿರುವ ಛತ್ತೀಸ್ಗಢದ ಸಚಿವ ಕಾವಸಿ ಲಖ್ಮಗೆ ಚುನಾವಣಾ ಆಯೋಗ ಬುಧವಾರ ನೋಟಿಸ್ ಜಾರಿಗೊಳಿಸಿದೆ.
ಕಂಕೇರ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೀರೇಶ್ ಠಾಕೂರ್ ಹೆಸರಿನ ಎದುರಿರುವ ಪ್ರಥಮ ಬಟನ್ ಒತ್ತಬೇಕು. ಎರಡು ಅಥವಾ ಇತರ ಬಟನ್ ಒತ್ತಿದರೆ ನಿಮಗೆ ಕರೆಂಟ್ ಶಾಕ್ ಹೊಡೆಯುತ್ತದೆ ಎಂದು ಕೇವಟಿ ಎಂಬಲ್ಲಿ ನಡೆದ ರ್ಯಾಲಿಯಲ್ಲಿ ಲಖ್ಮ ಪದೇ ಪದೇ ಹೇಳಿದ್ದರು.
ಈ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಕ್ರಮ್ ಉಸೆಂದಿ ಖಂಡಿಸಿದ್ದು, ಸಚಿವರು ಮತದಾರರನ್ನು ಬೆದರಿಸುತ್ತಿದ್ದಾರೆ. ತಪ್ಪು ಮಾಹಿತಿ ನೀಡಿ ಅವರ ದಾರಿತಪ್ಪಿಸುತ್ತಿದ್ದಾರೆ ಎಂದು ದೂರು ಸಲ್ಲಿಸಿದ್ದು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಲಖ್ಮ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಲಖ್ಮಗೆ ನೋಟಿಸ್ ಜಾರಿಗೊಳಿಸಿದ್ದು 3 ದಿನದ ಒಳಗೆ ಉತ್ತರಿಸುವಂತೆ ತಿಳಿಸಿದೆ.