ಪಡ್ಡೆ ಹುಲಿ: ಅಲ್ಲಿನ ಹುಲಿ ಅಬ್ಬರ ಇಲ್ಲಿಲ್ಲ

Update: 2019-04-20 18:35 GMT

ಚಿತ್ರದ ಹೆಸರು ‘ಪಡ್ಡೆಹುಲಿ’ ಎಂದಿದ್ದರೂ ಇವನು ಪಡ್ಡೆಯಾಗಿರುವುದಿಲ್ಲ. ಶೀರ್ಷಿಕೆ ಮತ್ತು ಕತೆ ಎರಡನ್ನೂ ಒಪ್ಪಿಕೊಳ್ಳಲು ಪ್ರೇಕ್ಷಕ ಪೆದ್ದನಾಗಿರುವುದಿಲ್ಲ.

ಹುಲಿ ಖ್ಯಾತಿಯ ನಿರ್ದೇಶಕ ಗುರುದೇಶಪಾಂಡೆ ಮತ್ತೊಂದು ಕಳೆಯಿಲ್ಲದ ಕಳೇಬರವನ್ನು ಪಕ್ಕದೂರಿನಿಂದ ಎತ್ತಿಕೊಂಡು ಬಂದಿದ್ದಾರೆೆ. ‘ಮೀಸಯ ಮುರುಕ್ಕ್’ ಎನ್ನುವ ತಮಿಳು ಚಿತ್ರವನ್ನು ನೋಡಿದವರು ಪಡ್ಡೆಹುಲಿಯ ಪಕ್ಕದಲ್ಲಿ ಕೂಡ ಸುಳಿಯುವ ಸಾಹಸ ಮಾಡಲಾರ. ಯಾಕೆಂದರೆ ಅದು ತಮಿಳಿನ ಯುವ ಗಾಯಕನೊಬ್ಬನ ಬದುಕಿನ ಕತೆ. ಉದಾಹರಣೆಗೆ ಚಂದನ್ ಶೆಟ್ಟಿಯ ಯಶಸ್ಸಿನ ಕತೆಯನ್ನು ಆಧಾರಿಸಿದ ಚಿತ್ರದಲ್ಲಿ ಸ್ವತಃ ಚಂದನ್ ಶೆಟ್ಟಿಯೇ ನಟಿಸಿ ಚಿತ್ರ ತೆರೆಗೆ ಬಂದರೆ ಅದು ಹೇಗೆ ಕನ್ನಡಿಗರಿಗೆ ಹೆಚ್ಚು ಆತ್ಮೀಯವಾದೀತೋ, ಅದೇ ರೀತಿ ಅಲ್ಲಿನ ಗಾಯಕ ಹಿಪ್ ಹಾಪ್ ಆದಿ ನಾಯಕನಾಗಿ ನಟಿಸಿದ ಚಿತ್ರ ಅದು. ಯಾವ ಕಾರಣಕ್ಕೆ ಅದನ್ನು ಕನ್ನಡಕ್ಕೆ ತರುವ ಮನಸ್ಸು ಮಾಡಿದರೋ ಗೊತ್ತಿಲ್ಲ, ಪಡ್ಡೆಹುಲಿ ಪಾಪಚ್ಚಿ ಎಂಟ್ರಿಯಾಗಿದೆ.

ನಮ್ಮ ಹುಲಿಯ ವಿಚಾರಕ್ಕೆ ಬಂದರೆ, ಈತ ಚಿತ್ರದುರ್ಗದ ಹುಡುಗ. ಸಂಪತ್ ಎನ್ನುವ ಹೆಸರು ಬೇರೆ. ವಿಷ್ಣು ದಾದ ಫ್ಯಾನ್ ಎಂದು ಹಾಡಿದ ಮೇಲೆ ಒಂದು ಕ್ಷಣಕ್ಕೆ ಸೆಳೆಯುತ್ತಾನೆ ಕೂಡ. ಆದರೆ ರಾಕ್ ಸ್ಟಾರ್ ಆಗುವ ಪ್ರಯತ್ನದಲ್ಲಿ ತಂದೆಗೂ ಮಗನಿಗೂ ರಾಗತಾಳ ತಪ್ಪುತ್ತದೆ. ಕಾಲೇಜಿನ ಪ್ರೇಯಸಿ ಸಂಗೀತಾಳನ್ನು ತೊರೆದು ಸಂಗೀತದ ಬೆನ್ನುಹತ್ತಿ ಬೆಂಗಳೂರು ಸೇರುತ್ತಾನೆ. ಅಲ್ಲಿ ಆತನಿಗೆ ಏನು ಅನುಭವ ಆಗುತ್ತದೆ ಮತ್ತು ಕ್ಲೈಮ್ಯಾಕ್ಸ್ ಏನು ಎನ್ನುವುದನ್ನು ಪರದೆಯ ಮೇಲೆ ನೋಡಬಹುದು ನಿಜ. ಆದರೆ ಅದು ಈಗಾಗಲೇ ಎಷ್ಟೋ ಸಿನೆಮಾಗಳಲ್ಲಿ ಕಂಡಂತಹ ಗಾಂಧಿನಗರದ ಸಾಧಕರ ಸಾಮಾನ್ಯ ಹಾದಿಯೇ ಹೊರತು ಬೇರೇನಲ್ಲ. ಸಾಲದೆಂಬಂತೆ ಇದು ಸಾಧಕನ ಕತೆ ಎಂದು ಮೊದಲೇ ಎಲ್ಲರಿಗೂ ಗೊತ್ತಾಗಿರುವ ವಿಚಾರ. ವಿದ್ಯಾರ್ಥಿ ಸಾಧನೆಯ ಹಿಂದೆ ಹೋಗಬೇಕೇ ಹೊರತು ಸೌಂದರ್ಯವತಿಯ ಹಿಂದೆ ಅಲ್ಲ, ಎನ್ನುವುದು ಸಂದೇಶಕ್ಕೆ ಚೆನ್ನಾಗಿದೆ. ಆದರೆ ಪಡ್ಡೆಹುಲಿ ಎಂಬ ಟೈಟಲ್‌ಗೆ ಅಲ್ಲ.

ಚಿತ್ರದಲ್ಲಿ ಸಂಪತ್ ಪಾತ್ರದ ಮೂಲಕ ತಮ್ಮ ಎಲ್ಲ ಸಾಮರ್ಥ್ಯವನ್ನು ಒರೆಗಿಟ್ಟು ತೋರಿಸಿದ್ದಾರೆ ನವನಟ ಶ್ರೇಯಸ್. ಮೊದಲ ಚಿತ್ರವಾದರೂ ಸಂಪತ್ ಪಾತ್ರದಲ್ಲಿ ಗಮನಾರ್ಹ ಅಭಿನಯ ನೀಡುವಲ್ಲಿ ಶ್ರೇಯಸ್ ಗೆದ್ದಿದ್ದಾರೆ. ಒಂದೇ ಟೇಕ್‌ನಲ್ಲಿ ಪುಟಗಟ್ಟಲೆ ಸಂಭಾಷಣೆ ಹೇಳಿರುವ ರೀತಿ, ಆ್ಯಕ್ಷನ್ ದೃಶ್ಯಗಳಲ್ಲಿ ತೊಡಗಿಸಿಕೊಂಡಿರುವುದು, ಹೈ ಪಿಚ್ ಹಾಡುಗಳಿಗೆ ಗಂಟಲ ನರ ಉಬ್ಬುವಂತೆ ಹೆವಿ ಪರ್ಫಾರ್ಮನ್ಸ್ ನೀಡಿರುವುದು ಎಲ್ಲವೂ ಅಭಿನಂದನಾರ್ಹ. ಸಂಗೀತಾ ಪಾತ್ರದಲ್ಲಿ ಅಶ್ವಿಕಾ ನಾಯ್ಡು ರಮ್ಯಾರನ್ನು ನೆನಪಿಸುವಂತೆ ನಟಿಸಿದ್ದಾರೆ.

ಸಂಪತ್ ತಂದೆ ತಾಯಿಯಾಗಿ ರವಿಚಂದ್ರನ್ ಮತ್ತು ಸುಧಾರಾಣಿ ನಟಿಸಿದ್ದಾರೆ. ಒಬ್ಬ ಉಪನ್ಯಾಸಕನಾಗಿದ್ದುಕೊಂಡು ಕನ್ನಡದ ವಿಚಾರದಲ್ಲಿ ಶಿಕ್ಷಕರೊಬ್ಬರ ಮೇಲೆ ಕೈ ಎತ್ತುವ ಕಳಪೆ ಪಾತ್ರವನ್ನು ಕನಸುಗಾರ ಒಪ್ಪಬಾರದಿತ್ತು ಅನಿಸುತ್ತದೆ. ಮಾತ್ರವಲ್ಲ ಮಗ ಪ್ರೀತಿಸಿದ ಹುಡುಗಿ ಮನೆಯವರು ಮನೆಗೆ ಬಂದು ಆವಾಝ್ ಹಾಕುವಾಗ ಒಂದು ಮಾತು ಆಡಲಾಗದ ಪೋಷಕ ಪಾತ್ರಕ್ಕೆ ಕ್ರೇಜಿಸ್ಟಾರ್ ಯಾಕೆ ಬೇಕಿತ್ತು ಎಂದುಕೊಂಡರೆ ತಪ್ಪೇನಿಲ್ಲ. ಸಂಭಾಷಣೆಗಳಲ್ಲಿ ಕೂಡ ಮೂಲ ತಮಿಳಿನ ಹಾವಳಿ ದಟ್ಟವಾಗಿದೆ. ಹಾಗಾಗಿ ಆಗಾಗ ಮೀಸೆ ತಿರುಗಿಸುವ ಕುರಿತಾದ ಸಂಭಾಷಣೆಗಳು ನುಸುಳುತ್ತವೆ. ಇಲ್ಲಿನ ಸ್ಟಾರ್‌ಗಳಿಗೆ ಬಿಲ್ಡಪ್ ನೀಡುವುದರ ನಡುವೆಯೇ ಬಾಲಿವುಡ್ ತಾರೆಗಳ ವೈಯಕ್ತಿಕ ವಿಚಾರಕ್ಕೆ ಕೈ ಹಾಕಿರುವುದು ಅಪ್ರಬುದ್ಧತೆಯ ಪ್ರತೀಕವೆನಿಸುತ್ತದೆ.

ಸಂಪತ್ ಕಲಿಯುವ ಕಾಲೇಜ್‌ನಲ್ಲಿ ಸೀನಿಯರ್ ಹುಡುಗ ‘ಕಿರಿಕ್ ಪಾರ್ಟಿ ಕರ್ಣ’ನಾಗಿ ಮತ್ತೊಮ್ಮೆ ಅವತಾರ ಎತ್ತಿದ್ದಾರೆ ರಕ್ಷಿತ್ ಶೆಟ್ಟಿ. ಅದು ಚಿತ್ರಕ್ಕೆ ಉತ್ತಮ ಉತ್ತೇಜನ ನೀಡಿದೆ. ಒಂದೇ ದೃಶ್ಯದ ಅತಿಥಿ ಪಾತ್ರವೇನೋ ಎಂದುಕೊಂಡಿರುವಾಗ ಪದೇ ಪದೇ ಬಂದು ಕಚಗುಳಿ ನೀಡಿ ಮಾಯವಾಗುತ್ತಾರೆ. ಜೊತೆಗೆ ಕ್ಲೈಮ್ಯಾಕ್ಸ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ವತಃ ಪುನೀತ್ ಆಗಿಯೇ ಎಂಟ್ರಿ ನೀಡಿರುವುದು ಚಿತ್ರದ ಮತ್ತೊಂದು ಪವರ್. ನಾಯಕನ ಸ್ನೇಹಿತನಾಗಿ ಅಮಿತ್, ನಾಯಕಿಯ ತಂದೆಯಾಗಿ ಸುಂದರ್, ಖಳನಟನಾಗಿ ಮಧುಸೂದನ್ ಮತ್ತು ಒಂದೇ ದೃಶ್ಯದಲ್ಲಿ ಬಂದರೂ ನೈಜ ನಟನೆಯಿಂದ ಗುರುತಿಸಿಕೊಳ್ಳುವ ಕೆ.ಎಸ್.ಶ್ರೀಧರ್ ಮೊದಲಾದವರ ಅಭಿನಯ ಅವಿಸ್ಮರಣೀಯ. ನಾಯಕಿಯ ತಾಯಿಯಾಗಿ ಸ್ವಾತಿ ರೂಪದಲ್ಲಿ ಕೂಡ ನಾಯಕಿಯನ್ನೇ ಹೋಲುವುದು ಮತ್ತೊಂದು ವಿಶೇಷ. ಐಶ್ವರ್ಯಾ ಮತ್ತು ಚಿಕ್ಕಣ್ಣ ಕೂಡ ತಾರಾಗಣದಲ್ಲಿ ಸೇರಿಕೊಂಡಿದ್ದಾರೆ. 

ಅಜನೀಶ್ ಲೋಕನಾಥ್ ಸಂಗೀತದಲ್ಲಿ ಒಂದೆರಡು ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಆಪ್ತವಾಗುತ್ತದೆ. ಆದರೆ ಈಗಾಗಲೇ ಜನಪ್ರಿಯವಾಗಿರುವ ಕವಿರಚನೆಗಳನ್ನು ರಾಕ್ ಶೈಲಿಯಲ್ಲಿ ನೀಡಿರುವ ಪ್ರಯತ್ನ ಸೆಳೆಯುವುದಿಲ್ಲ. ಒಟ್ಟಿನಲ್ಲಿ ಚಿತ್ರದೊಳಗೆ ಸಂಗೀತಕ್ಕೂ ಪ್ರೇಮಕ್ಕೂ ಸರಿಯಾದ ಸ್ಥಾನ ಸಿಕ್ಕಿಲ್ಲ. ಆದರೆ ಸಂಪತ್ ಪಾತ್ರಧಾರಿಯಾಗಿ ಪ್ರೇಕ್ಷಕರ ಸಂತೃಪ್ತಿ ಸಂಪಾದಿಸುವುದು ಖಚಿತ.

ತಾರಾಗಣ: ಶ್ರೇಯಸ್, ಅಶ್ವಿಕಾ, ವಿ. ರವಿಚಂದ್ರನ್, ರಕ್ಷಿತ್ ಶೆಟ್ಟಿ
ನಿರ್ದೇಶನ: ಗುರು ದೇಶಪಾಂಡೆ
ನಿರ್ಮಾಣ: ಎಂ. ರಮೇಶ್ ರೆಡ್ಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News