ಉ.ಪ್ರದೇಶ: ಮಾಹಿತಿ ಹಕ್ಕು ಕಾರ್ಯಕರ್ತನಿಗೆ ಗುಂಡೇಟು
Update: 2019-05-15 17:25 GMT
ಲಕ್ನೊ, ಮೇ 15: ಮಾಹಿತಿ ಹಕ್ಕು ಕಾರ್ಯಕರ್ತನ ಮೇಲೆ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಮುಝಫ್ಫರ್ನಗರ ಜಿಲ್ಲೆಯಲ್ಲಿ ನಡೆದಿದೆ. ಮುಝಫ್ಫರ್ನಗರ ಜಿಲ್ಲೆಯ ಧಿಂಡ್ವಾಲಿ ಗ್ರಾಮದ ನಿವಾಸಿ ಕೃಷ್ಣಪಾಲ್ ಎಂಬವರು ಮಂಗಳವಾರ ಸಂಜೆ ತಮ್ಮ ಗದ್ದೆಗೆ ತೆರಳಿದ್ದ ಸಂದರ್ಭ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ. ತೀವ್ರ ಗಾಯಗೊಂಡಿದ್ದ 35 ವರ್ಷದ ಕೃಷ್ಣಪಾಲ್ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಅಧೀಕ್ಷಕ (ನಗರ) ಸತ್ಪಾಲ್ ಅಂತಿಲ್ ಹೇಳಿದ್ದಾರೆ.
ಕೆಲವು ವ್ಯಕ್ತಿಗಳು ಸರಕಾರಿ ಜಮೀನನ್ನು ಅಕ್ರಮ ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕೃಷ್ಣಪಾಲ್ ಪೊಲೀಸರಿಗೆ ದೂರು ನೀಡಿದ್ದರು. ಇದು ಗುಂಡಿನ ದಾಳಿ ಘಟನೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.