ಥ್ರಿಲ್ಲರ್ ‘ಕುರುಪ್’ಗೆ ದುಲ್ಕರ್ ನಾಯಕ

Update: 2019-06-08 18:40 GMT

ಕೇರಳವನ್ನೇ ಬೆಚ್ಚಿ ಬೀಳಿಸಿದ ಮೂರು ದಶಕಗಳ ಹಿಂದೆ ನಡೆದ ಕೊಲೆ ಪ್ರಕರಣವೊಂದನ್ನು ಆಧರಿಸಿದ ಕುರುಪ್ ಚಿತ್ರದ ಶೂಟಿಂಗ್ ಈಗ ಆರಂಭಗೊಂಡಿದೆ. ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ಈ ಚಿತ್ರದ ನಾಯಕ. ದುಲ್ಕರ್ ಅಭಿನಯದ ಪ್ರಥಮ ಚಿತ್ರ ‘ಸೆಕೆಂಡ್ ಶೋ’ ನಿರ್ದೇಶಿಸಿದ ಶ್ರೀನಾಥ್ ರಾಜೇಂದ್ರನ್ ಅವರು ಕುರುಪ್ ಅನ್ನು ಡೈರೆಕ್ಟ್ ಮಾಡುತ್ತಿದ್ದಾರೆ. ಕುರುಪ್ ಚಿತ್ರದ ನಿರ್ಮಾಣವನ್ನು ಎರಡು ವರ್ಷಗಳ ಹಿಂದೆಯೇ ಘೋಷಿಸಲಾಗಿ ತ್ತಾದರೂ, ಅದ್ಯಾಕೋ ಚಿತ್ರೀಕರಣ ಆರಂಭಕ್ಕೆ ಸೂಕ್ತ ಕಾಲ ಕೂಡಿ ಬಂದಿರಲಿಲ್ಲ .

ಕೊನೆಗೂ ಕುರುಪ್‌ನ ಚಿತ್ರೀಕರಣಕ್ಕೆ ಚಾಲನೆ ದೊರೆತಿರುವುದು ನಿರ್ದೇಶಕ ಶ್ರೀನಾಥ್ ಅವರಿಗೆ ಭಾರೀ ಹರ್ಷ ತಂದಿದೆ. ‘‘ ಈ ಚಿತ್ರದ ಸಿದ್ಧತೆಗಾಗಿ ನಾವು ನಮ್ಮ ಐದು ವರ್ಷಗಳ ಮಧುರ ಸಮಯವನ್ನು ಕಳೆದಿದ್ದೇವೆ. ಈ ಸುದೀರ್ಘಪಯಣದುದ್ದಕ್ಕೂ ನಮ್ಮೆಂದಿಗಿದ್ದುದಕ್ಕಾಗಿ ದುಲ್ಕರ್ ಸಲ್ಮಾನ್ ಅವರಿಗೆ ವೈಯಕ್ತಿಕವಾಗಿ ಕೃತಜ್ಞತೆ ಅರ್ಪಿಸುತ್ತೇನೆ’’ ಎಂದವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಚಿತ್ರದ ಉಳಿದ ತಾರಾಗಣ, ತಂತ್ರಜ್ಞರು ಇತ್ಯಾದಿ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿಯೂ ಅವರು ಹೇಳಿದ್ದಾರೆ.

ಕುರುಪ್ ಚಿತ್ರದೊಂದಿಗೆ ದುಲ್ಕರ್ ಹಾಗೂ ಶ್ರೀನಾಥ್, ಏಳು ವರ್ಷಗಳ ಬಳಿಕ ಮತ್ತೊಮ್ಮೆ ಜೊತೆಯಾಗುತ್ತಿದ್ದಾರೆ. ಮೂರು ದಶಕಗಳ ಹಿಂದೆ ಕೇರಳದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆಗೈದು,ತಾನೇ ಸಾವನ್ನಪ್ಪಿರುವಂತೆ ವಂಚಿಸಿದ ಬಳಿಕ ಭೂಗತನಾಗಿದ್ದ ಸುಕುಮಾರನ್ ಕುರುಪ್ ಎಂಬ ಕ್ರಿಮಿನಲ್‌ನ ನೈಜ ಬದುಕಿನ ಕಥೆಯನ್ನು ಚಿತ್ರ ಆಧರಿಸಿದೆ. ಅಂದಹಾಗೆ ಈತನಕವೂ ಕುರುಪ್ , ಎಲ್ಲಿದ್ದಾನೆಂಬುದು ಇಂದಿಗೂ ಪತ್ತೆಯಾಗಿಲ್ಲ. ಕುರುಪ್ ಚಿತ್ರದ ಮೂಲಕ ಮತ್ತೊಮ್ಮೆ ಸಿನೆಮಾದಲ್ಲಾದರೂ ಈ ಕ್ರಿಮಿನಲ್ ಕೇಸ್ ಫೈಲನ್ನು ನಿರ್ದೇಶಕ ಶ್ರೀನಾಥ್ ತೆರೆಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News