ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ ಪ್ರಕರಣ: ಕೊಯಂಬತ್ತೂರಿನಲ್ಲಿ ಎನ್ಐಎ ಶೋಧ
Update: 2019-06-12 14:50 GMT
ಚೆನ್ನೈ, ಜೂ.12: ಎಪ್ರಿಲ್ನಲ್ಲಿ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಸುಳಿವು ಪತ್ತೆಗಾಗಿ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಕೊಚ್ಚಿ ವಿಭಾಗದ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಕೊಯಂಬತ್ತೂರಿನ ಏಳು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಪೊದನೂರು, ಉಕ್ಕಡಂ ಮತ್ತು ಕುನಿಯಂತೂರು ನಗರದ ವಿವಿಧೆಡೆ ಶಂಕಿತರ ಮನೆಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿದೆ. ಕೊಲಂಬೋದ ಹೋಟೆಲ್ ಮತ್ತು ಚರ್ಚ್ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ರೂವಾರಿ ಎನ್ಟಿಜೆ ಮುಖಂಡ ಝಹ್ರಾನ್ ಹಾಶಿಂನೊಂದಿಗೆ ಇವರು ನಂಟು ಹೊಂದಿದ್ದಾರೆ ಎಂಬ ಶಂಕೆಯ ಮೇಲೆ ದಾಳಿ ಮತ್ತು ಶೋಧ ಕಾರ್ಯಾಚರಣೆ ನಡೆದಿದೆ. ಅಲ್ಲದೆ ಐಸಿಸ್ನೊಂದಿಗೆ ಸಂಪರ್ಕ ಇರುವರೆಂದು ಶಂಕಿಸಲಾದ ಕೆಲವರನ್ನೂ ವಿಚಾರಣೆ ನಡೆಸಲಾಗಿದೆ ಎಂದು ವರದಿಯಾಗಿದೆ.