ಮೇಲ್ಜಾತಿಯ ದೌರ್ಜನ್ಯಗಳ ವಿರುದ್ಧ ಸಿಡಿದೆದ್ದ 'ದಲಿತ ನಾಯಕ' ಉಮರ್ ಫಾರೂಕ್

Update: 2019-06-15 13:18 GMT

ಟಿಎಂ ಉಮರ್ ಫಾರೂಕ್… ಬಹುಷಃ ಈ ಹೆಸರನ್ನು ಕರ್ನಾಟಕದವರು, ಅದರಲ್ಲೂ ರಾಜ್ಯದ ದಲಿತರು ಕೇಳಿರಲು ಸಾಧ್ಯವಿಲ್ಲ.  ಆದರೆ ತಮಿಳುನಾಡಿನಾದ್ಯಂತ ಟಿಎಂ ಉಮರ್ ಫಾರೂಕ್ ಎಂದರೆ 'ಹೋರಾಟಗಾರ' ಎಂದೇ ಹೇಳುತ್ತಾರೆ. ಜೀವನದುದ್ದಕ್ಕೂ ಫಾರೂಕ್ ದಲಿತರಿಗಾಗಿ ಹೋರಾಟ ನಡೆಸಿದವರು. ಮೇಲ್ಜಾತಿ ದೌರ್ಜನ್ಯಗಳ ವಿರುದ್ಧ ಸಿಡಿದೆದ್ದು ತಮ್ಮ ಹಕ್ಕುಗಳಿಗಾಗಿ ಧ್ವನಿಯೆತ್ತಿದವರು. ಅದಕ್ಕಾಗಿ ಅವರು ಜೈಲುಶಿಕ್ಷೆಯನ್ನೂ ಅನುಭವಿಸಿದರು.

ತಮಿಳುನಾಡಿನ ಕುಂಭಕೋಣಂನ ಕುಡಿತಾಂಗಿ ಎಂಬ ಗ್ರಾಮದಲ್ಲಿ ಇವರು ಜನಿಸಿದರು. ಇವರ ಮೊದಲ ಹೆಸರು ಟಿಎಂ ಮಣಿ ಎಂದಾಗಿತ್ತು. ತನ್ನ ಜೀವನದುದ್ದಕ್ಕೂ ಪೆರಿಯಾರ್ ಮತ್ತು ಅಂಬೇಡ್ಕರ್ ರ ಅನುಯಾಯಿಯಾಗಿದ್ದ ಫಾರೂಕ್ ಮೇಲ್ಜಾತಿ ದೌರ್ಜನ್ಯಗಳ ವಿರುದ್ಧ ಸಿಡಿದೆದ್ದವರು.

ದಲಿತರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಕ್ಕಾಗಿ ಫಾರೂಕ್ ವಿರುದ್ಧ ಹಲವು ಬಾರಿ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ ಯಾವುದೇ ಒತ್ತಡಗಳು ಅವರನ್ನು ಹೋರಾಟದಿಂದ ಹಿಂದೆ ಸರಿಯುವಂತೆ ಮಾಡಿಲ್ಲ.

ಹಲವು ಬಾರಿ ಜೈಲು ಶಿಕ್ಷೆಗೊಳಗಾಗಿದ್ದ ಇವರಿಗೆ ಒಂದು ಬಾರಿ ಜೀವಾವಧಿ ಶಿಕ್ಷೆಯಾಗಿತ್ತು. ಆದರೆ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತು. ದಲಿತರನ್ನು ಒಂದುಗೂಡಿಸಲು ಅವರು 'ಬ್ಲೂ ಪ್ಯಾಂಥರ್ಸ್ ಪಾರ್ಟಿ' (ನೀಲ ಪುಲಿಗಳ್ ಇಯಕ್ಕಮ್)ಯನ್ನು ಸ್ಥಾಪಿಸಿದರು. ಜಾತಿ ಪದ್ಧತಿಯ ವಿರುದ್ಧ ನಿರಂತರ ಹೋರಾಟ ನಡೆಸಿದ್ದ ಫಾರೂಕ್ 2007ರಲ್ಲಿ ಇಸ್ಲಾಂ ಧರ್ಮ ಸ್ವೀಕರಿಸಿದರು.

ಫಾರೂಕ್ ಜೀವನಚರಿತ್ರೆಯನ್ನು ಸರಣಿ ಅಂಕಣಗಳ ರೂಪದಲ್ಲಿ ಮ್ಯಾಗಝಿನ್ ಒಂದರಲ್ಲಿ ಹಿರಿಯ ತಮಿಳು ಪತ್ರಕರ್ತ ಎಂ.ಗುಲಾಮ್ ಮುಹಮ್ಮದ್ ಪ್ರಕಟಿಸಿದರು. ನಂತರ ಈ ಅಂಕಣಗಳನ್ನು ಪುಸ್ತಕದ ರೂಪದಲ್ಲಿ ಹೊರತರಲಾಯಿತು.; ಜಾತಿ ಪದ್ಧತಿಯ ವಿರುದ್ಧ ದಲಿತರ ಹೋರಾಟಗಳ ಉಲ್ಲೇಖವೂ ಈ ಪುಸ್ತಕದಲ್ಲಿತ್ತು. ನಂತರ ಈ ಪುಸ್ತಕವು ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳಿಗೆ ಅನುವಾದಗೊಂಡಿತು.

ಅವರು ನಿಧನರಾದಾಗ ಭಾರೀ ಸಂಖ್ಯೆಯಲ್ಲಿ ದಲಿತರು ಮತ್ತು ಮುಸ್ಲಿಮರು ಫಾರೂಕ್ ರ ಅಂತಿಮ ದರ್ಶನದಲ್ಲಿ ಪಾಲ್ಗೊಂಡು ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News