ಮಹಿಳಾ ನ್ಯಾಯವಾದಿಗಳ ಸುರಕ್ಷತೆಗಾಗಿ ಕೋರಿಕೆ: ಸುಪ್ರೀಂ ಕೋರ್ಟ್ನಲ್ಲಿ ಜೂ.25ರಂದು ವಿಚಾರಣೆ
ಹೊಸದಿಲ್ಲಿ,ಜೂ.21: ಇತ್ತೀಚಿಗೆ ನಡೆದ ಉತ್ತರ ಪ್ರದೇಶ ಬಾರ್ ಕೌನ್ಸಿಲ್ನ ಅಧ್ಯಕ್ಷೆ ದರ್ವೇಶ ಯಾದವ ಅವರ ಹತ್ಯೆಯ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ಮಹಿಳಾ ನ್ಯಾಯವಾದಿಗಳಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಕೋರಿ ನ್ಯಾಯವಾದಿ ಇಂದು ಕೌಲ್ ಅವರು ಸಲ್ಲಿಸಿರುವ ಅರ್ಜಿಯನ್ನು ಜೂ.25ರಂದು ಕೈಗೆತ್ತಿಕೊಳ್ಳಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಒಪ್ಪಿಕೊಂಡಿದೆ.
ಇದೊಂದು ಗಂಭೀರ ವಿಷಯ ಎಂದು ಬಣ್ಣಿಸಿದ ನ್ಯಾಯಮೂರ್ತಿಗಳಾದ ದೀಪಕ ಗುಪ್ತಾ ಮತ್ತು ಸೂರ್ಯಕಾಂತ ಅವರ ರಜಾಕಾಲದ ಪೀಠವು,ಮುಂದಿನ ಮಂಗಳವಾರ ಅರ್ಜಿಯ ವಿಚಾರಣೆಯನ್ನು ನಡೆಸುವುದಾಗಿ ತಿಳಿಸಿತು.
ಉತ್ತರ ಪ್ರದೇಶ ಬಾರ್ ಕೌನ್ಸಿಲ್ನ ಮೊದಲ ಮಹಿಳಾ ಅಧ್ಯಕ್ಷರಾಗಿದ್ದ ಯಾದವ ಅವರನ್ನು ಆಗ್ರಾ ನ್ಯಾಯಾಲಯದ ಆವರಣದಲ್ಲಿ ಇನ್ನೋರ್ವ ನ್ಯಾಯವಾದಿ ಹಾಗೂ ಅವರ ದೀರ್ಘಕಾಲದ ಸಹವರ್ತಿ ಮನೀಷ್ ಶರ್ಮಾ ಮೂರು ಬಾರಿ ಗುಂಡಿಕ್ಕಿ ಹತ್ಯೆಗೈದಿದ್ದ. ಯಾದವರ ಹತ್ಯೆಯ ಬಳಿಕ ರಾಜ್ಯ ಸರಕಾರವು ಉಚ್ಚ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಲಯಗಳ ಆವರಣಗಳಲ್ಲಿ ಸಾಕಷ್ಟು ಭದ್ರತೆಯನ್ನೊದಗಿಸಲು ತಾನು ಬದ್ಧನಾಗಿದ್ದೇನೆ ಎಂದು ಹೇಳಿತ್ತು.