ಕಸ್ಟಡಿ ಸಾವು: ಪೊಲೀಸ್ ಅಧಿಕಾರಿ ಅಮಾನತು
Update: 2019-07-22 17:37 GMT
ಮೈನ್ಪುರಿ,ಜು.22: ಅಕ್ರಮ ಮದ್ಯ ಮಾರಾಟ ಆರೋಪದಲ್ಲಿ ಬಂಧಿತನಾಗಿದ್ದ 20ರ ಹರೆಯದ ಯುವಕನ ಕಸ್ಟಡಿ ಸಾವಿಗೆ ಸಂಬಂಧಪಟ್ಟಂತೆ ಪೊಲೀಸ್ ಉಪ ನಿರೀಕ್ಷಕನನ್ನು ಅಮಾನತುಗೊಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅಕ್ರಮ ಮದ್ಯ ಮಾರಾಟ ಮಾಡಿದ ಆರೋಪದಲ್ಲಿ ಚೋಟು ಅಲಿಯಾಸ್ ವಿನಯ್ ಮತ್ತು ಆತನ ಸಹೋದರನನ್ನು ಕಿಶ್ನಿ ಪೊಲೀಸರು ಶನಿವಾರ ಬಂಧಿಸಿದ್ದರು.
ರವಿವಾರದಂದು ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿ ಅನಾರೋಗ್ಯಕ್ಕೀಡಾದ ಚೋಟುನನ್ನು ಜೈಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಸ್ಥಿತಿ ಮತ್ತಷ್ಟು ಕ್ಷೀಣಿಸಿದಾಗ ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾದರೂ ಆತ ಅದಾಗಲೇ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರು ಮುಗ್ಧರಾಗಿದ್ದರು ಎಂದು ತಿಳಿಸಿರುವ ಮೃತನ ಕುಟುಂಬಸ್ಥರು ಪೊಲೀಸ್ ಠಾಣೆ ಮತ್ತು ಜೈಲಿನಲ್ಲಿ ಪೊಲೀಸರು ಚಿತ್ರಹಿಂಸೆ ನೀಡಿದ ಪರಿಣಾಮ ಚೋಟು ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ.