ವಿದ್ಯಾರ್ಥಿಗಳ ಎದುರಿನಲ್ಲೇ ಶಿಕ್ಷಕಿಯನ್ನು ಚೂರಿಯಿಂದ ಇರಿದು ಹತ್ಯೆಗೈದ ಪತಿ

Update: 2019-07-23 16:07 GMT

ಮಧುರೈ(ತ.ನಾ),ಜು.23: ಸರಕಾರಿ ಅನುದಾನಿತ ಶಾಲೆಯೊಂದರ ಶಿಕ್ಷಕಿಯನ್ನು ಆಕೆಯ ಪತಿ ವಿದ್ಯಾರ್ಥಿಗಳ ಕಣ್ಣೆದುರೇ ಚೂರಿಯಿಂದ ಇರಿದು ಸಾಯಿಸಿದ ಭೀಕರ ಘಟನೆ ಮಧುರೈ ಸಮೀಪದ ತಿರುಮಂಗಳಮ್‌ನಲ್ಲಿ ನಡೆದಿದೆ.

 ಕಾರೈಪಟ್ಟಿ ಸಮೀಪದ ಸಿತಾನೆಂದಾಲ್ ನಿವಾಸಿ ಜಿ.ರತಿದೇವಿ(35) ಕೊಲೆಯಾಗಿದ್ದು,ಆಕೆಯ ಪತಿ ರಾಮನಾಥಪುರಂ ನಿವಾಸಿ ಜಿ.ಗುರುಮುನೀಶ್ವರನ್ ಆರೋಪಿಯಾಗಿದ್ದಾನೆ. ರತಿದೇವಿ ಕಳೆದ ಮೂರೂವರೆ ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಆರು ವರ್ಷಗಳ ಹಿಂದೆ ಗುರುಮುನೀಶ್ವರನ್ ಮತ್ತು ರತಿದೇವಿ ವಿವಾಹ ನಡೆದಿದ್ದು,ದಂಪತಿಗೆ ಅವಳಿಗಳಾಗಿರುವ ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ. ಆರು ತಿಂಗಳ ಹಿಂದೆ ಕೌಟುಂಬಿಕ ವಿವಾದದಿಂದಾಗಿ ಪತಿಯಿಂದ ಬೇರ್ಪಟ್ಟಿದ್ದ ರತಿದೇವಿ ಮಕ್ಕಳೊಂದಿಗೆ ತವರಿನಲ್ಲಿ ವಾಸವಿದ್ದರು.

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಗುರುಮುನೀಶ್ವರನ್ ವಿದೇಶದಲ್ಲಿದ್ದ್ದು ಮೂರು ವರ್ಷಗಳ ಹಿಂದೆ ಭಾರತಕ್ಕೆ ಮರಳಿದ್ದ. ಪತ್ನಿಯಿಂದ ಪ್ರತ್ಯೇಕಗೊಂಡ ಬಳಿಕ ಆತ ವಿರುಧನಗರದಲ್ಲಿ ವಾಸವಿದ್ದ.

ಸೋಮವಾರ ರತಿದೇವಿ ಎಂಟನೇ ತರಗತಿಯ ಮಕ್ಕಳಿಗೆ ಬೋಧಿಸುತ್ತಿದ್ದಾಗ ಅಲ್ಲಿಗೆ ಬಂದ ಗುರುಮುನೀಶ್ವರನ್ ಆಕೆಯೊಂದಿಗೆ ಜಗಳವಾಡಿ ಚೂರಿಯಿಂದ ಇರಿದು ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಕುಸಿದು ಬಿದ್ದ ರತಿದೇವಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.

ಪ್ರಕರಣವನ್ನು ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಠಾಣೆಗೆ ಶರಣಾಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News