ಪೆಹ್ಲುಖಾನ್ ಹತ್ಯೆ ಪ್ರಕರಣ: ಮರು ತನಿಖೆಗೆ ಸಿಟ್ ರಚಿಸಿದ ರಾಜಸ್ಥಾನ
ಜೈಪುರ, ಆ.17: ಪೆಹ್ಲುಖಾನ್ ಗುಂಪು ಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸಲು ರಾಜಸ್ಥಾನ ಸರಕಾರ ಶುಕ್ರವಾರ ವಿಶೇಷ ತನಿಖಾ ತಂಡ(ಸಿಟ್)ವನ್ನು ನೇಮಕ ಮಾಡಿದೆ.
ಈ ಹಿಂದಿನ ತನಿಖೆಯಲ್ಲಿ ಏನಾದರೂ ಲೋಪವಾಗಿ ಆರು ಆರೋಪಿಗಳು ಕಳೆದ ವಾರ ಅಲ್ವಾರ್ ಸೆಶನ್ಸ್ ನ್ಯಾಯಾಲಯದಿಂದ ದೋಷ ಮುಕ್ತವಾಗಲು ಕಾರಣವಾಗಿದಯೇ ಎಂಬ ಕುರಿತು ಸಿಟ್ ತನಿಖೆ ನಡೆಸಲಿದೆ.
ಡಿಐಜಿ ನಿತಿನ್ ದೀಪ್ ಬ್ಲಾಗನ್ ಸಿಟ್ ನೇತೃತ್ವವಹಿಸಿದ್ದು, ಎಸ್ಪಿ(ಸಿಐಡಿ-ಸಿಬಿ)ರಣದೀರ್ ಸಿಂಗ್ ಹಾಗೂ ಹೆಚ್ಚುವರಿ ಎಸ್ಪಿ(ಸಿಐಡಿ-ಸಿಬಿ)ಸುನೀಲ್ ಕುಮಾರ್ ತಂಡದಲ್ಲಿದ್ದಾರೆ.
ಸಿಟ್ ತನ್ನ ಮರು ತನಿಖೆಯ ವೇಳೆ ಎಲ್ಲಾ ಕೋನಗಳಿಂದ ಮರು ಪರಿಶೀಲಿಸುತ್ತದೆ ಹಾಗೂ ನ್ಯಾಯಾಲಯಗಳಲ್ಲಿ ಸಾಕ್ಷ ತಯಾರಿಸುವಲ್ಲಿ ಪ್ರಾಸಿಕ್ಯೂಶನ್ನ ವೈಫಲ್ಯದ ಜವಾಬ್ದಾರಿಯನ್ನು ಸರಿಪಡಿಸಲಿದೆ. ಸಾಕ್ಷಗಳನ್ನು ಹಾಳು ಮಾಡುವ ಹಾಗೂ ಪ್ರಕರಣಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆದಿವೆಯೇ ಎಂದು ಪರಿಶೀಲಿಸಲಿದೆ.
ಮರು ತನಿಖೆಯ ಕುರಿತು ಚರ್ಚಿಸಲು ಶುಕ್ರವಾರ ಸಂಜೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದರು ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.