ಪ್ರೇತ ಉಚ್ಛಾಟನೆಯ ಹೆಸರಲ್ಲಿ ಮಹಿಳೆಯನ್ನು ತ್ರಿಶೂಲದಿಂದ ಚುಚ್ಚಿ ಕೊಂದ ಮಂತ್ರವಾದಿ

Update: 2019-08-19 15:59 GMT

ರಾಂಚಿ, ಆ.19: ಪ್ರೇತ ಉಚ್ಛಾಟನೆ ಮಾಡುವುದಾಗಿ ಹೇಳಿದ ಮಂತ್ರವಾದಿಯೊಬ್ಬಳು ಮಹಿಳೆಯೊಬ್ಬಳನ್ನು ಹಲವು ಬಾರಿ ತ್ರಿಶೂಲದಿಂದ ಚುಚ್ಚಿ ಕೊಂದ ಘಟನೆ ಜಾರ್ಖಂಡ್‌ನಲ್ಲಿ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಭವಂತ್‌ಪುರ ಗ್ರಾಮದ ನಿವಾಸಿ 60 ವರ್ಷ ಪ್ರಾಯದ ರುದ್ಣೀ ದೇವಿ ಎಂಬಾಕೆ ಮೃತಪಟ್ಟವರು. ಈಕೆ ಹಲವು ಸಮಯದಿಂದ ಕಾಯಿಲೆ ಪೀಡಿತಳಾಗಿದ್ದು ವೈದ್ಯಕೀಯ ಚಿಕಿತ್ಸೆ ಫಲ ನೀಡಿರಲಿಲ್ಲ. ಆಗ ಕೆಲವರು, ರುದ್ಣೀದೇವಿಯ ಮೈಮೇಲೆ ಪ್ರೇತ ಆವಾಹನೆಯಾಗಿದ್ದು, ಇದಕ್ಕೆ ಮಂತ್ರವಾದಿಯಿಂದ ಪ್ರೇತ ಉಚ್ಛಾಟಿಸಬೇಕು ಎಂದು ಹೇಳಿದ್ದರು.

 ಇದರಂತೆ ಆಗಸ್ಟ್ 14ರಂದು ಮಹಿಳೆಯನ್ನು ಸಪಾಹಿ ಗ್ರಾಮದಲ್ಲಿರುವ ಮಂತ್ರವಾದಿ ಆಲಮ್ ದೇವಿ ಎಂಬಾಕೆಯ ಮನೆಗೆ ಕರೆತರಲಾಗಿದೆ. ಕುಟುಂಬದವರನ್ನು ಮನೆಯಿಂದ ಹೊರಗೆ ಕಳುಹಿಸಿದ ಆಲಮ್ ದೇವಿ ಅಸ್ವಸ್ಥ ಮಹಿಳೆಯ ಮೈಮೇಲಿದ್ದ ಪ್ರೇತ ಉಚ್ಛಾಟಿಸುವುದಾಗಿ ಕೆಲವೊಂದು ತಾಂತ್ರಿಕ ವಿಧಿಗಳನ್ನು ಆರಂಭಿಸಿದ್ದಾಳೆ ಎಂದು ಮೃತ ಮಹಿಳೆಯ ಪುತ್ರ ದಿನೇಶ್ ಒರಾನ್ ಹೇಳಿದ್ದಾನೆ.

ಸ್ವಲ್ಪ ಹೊತ್ತಿನಲ್ಲಿ ಮನೆಯೊಳಗಿಂದ ತಾಯಿಯ ಕಿರುಚಾಟ ಕೇಳಿ ನಾವೆಲ್ಲಾ ಒಳಗೆ ಓಡಿದೆವು. ಆಗ ಮಂತ್ರವಾದಿ ಕೈಯಲ್ಲಿ ತ್ರಿಶೂಲ ಹಿಡಿದುಕೊಂಡು ತಾಯಿಯ ಕಣ್ಣು, ಕಾಲು ಹಾಗೂ ಹೊಟ್ಟೆಗೆ ಚುಚ್ಚುತ್ತಿದ್ದಳು. ನೋವು ತಡೆಯಲಾರದೆ ತಾಯಿ ಸ್ಮೃತಿ ತಪ್ಪಿ ಬಿದ್ದಿದ್ದರು ಎಂದು ದಿನೇಶ್ ಹೇಳಿದ್ದಾನೆ.

   ಮಹಿಳೆಯ ಕಣ್ಣುಗುಡ್ಡೆ ಹೊರಬಂದಿದ್ದು ಮೂಗು ಕೂಡಾ ಮುರಿದು ಹೋಗಿತ್ತು. ಮಹಿಳೆಯ ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮಂತ್ರವಾದಿ ಮತ್ತಾಕೆಯ ಪತಿಯನ್ನು ಬಂಧಿಸಿದ್ದು ರುದ್ಣೀದೇವಿ ಸ್ಥಳದಲ್ಲೇ ಮೃತಪಟ್ಟಿದ್ದಳು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News