1984ರಲ್ಲಿ ಬಹುಮತದಿಂದ ಅಧಿಕಾರಕ್ಕೇರಿದ್ದ ರಾಜೀವ್ ಗಾಂಧಿ ಎಂದೂ ಭಯ ಹರಡಿರಲಿಲ್ಲ: ಸೋನಿಯಾ ಗಾಂಧಿ

Update: 2019-08-22 17:46 GMT

ಹೊಸದಿಲ್ಲಿ, ಆ.22: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಹುಮತದಿಂದ ಜಯಗಳಿಸಿ ಸರಕಾರ ರಚಿಸಿದ್ದರು. ಆದರೆ ಅವರು ತನ್ನ ಅಧಿಕಾರವನ್ನು ಜನರ ಸ್ವಾತಂತ್ರ್ಯ ವನ್ನು ನಾಶಪಡಿಸಲು ಅಥವಾ ಭಯದ ವಾತಾವರಣವನ್ನು ನಿರ್ಮಿಸಲು ಎಂದೂ ಬಳಸಲಿಲ್ಲ ಎಂದು ತಿಳಿಸಿದ್ದಾರೆ. ರಾಜೀವ್ ಗಾಂಧಿಯವರ 75ನೇ ಜನ್ಮದಿನಾಚರಣೆಯ ಪ್ರಯುಕ್ತ ಹೊಸದಿಲ್ಲಿಯ ಕೆ.ಡಿ ಜಾದವ್ ಒಳಾಂಗಣ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಭಾರತದ ಪರಿಕಲ್ಪನೆಯನ್ನು ಬದಲಾಯಿಸಲು ಯತ್ನಿಸುವ ಮತ್ತು ವಿಭಜನಾತ್ಮಕ ಶಕ್ತಿಗಳ ವಿರುದ್ಧ ಹೋರಾಡುವುದನ್ನು ಕಾಂಗ್ರೆಸ್ ಪಕ್ಷ ಮುಂದುವರಿಸಬೇಕು. ಮೌಲ್ಯಗಳನ್ನು ನಾಶಮಾಡಲು ಪಣ ತೊಟ್ಟಿರುವವರನ್ನು ಎದುರಿಸಿ ಹೋರಾಡಬೇಕು ಎಂದು ಸೋನಿಯಾ ಗಾಂಧಿ ಪತ್ರಕರ್ತರಿಗೆ ಕರೆ ನೀಡಿದ್ದಾರೆ. ಭಾರತದ ವೈವಿಧ್ಯತೆಯನ್ನು ಆಚರಿಸಿದಾಗ ಮಾತ್ರ ಏಕತೆ ಸಾಧಿಸಲು ಸಾಧ್ಯ ಎಂಬ ಸಂದೇಶವನ್ನು ರಾಜೀವ್ ಗಾಂಧಿ ನೀಡಿದ್ದರು ಎಂದು ಕಾಂಗ್ರೆಸ್ ವರಿಷ್ಠೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News