ಮಕ್ಕಳ ಕಳ್ಳತನ ವದಂತಿ: ಗುಂಪಿನಿಂದ ಥಳಿಸಿ ವಿಶೇಷ ಚೇತನ ಮಹಿಳೆಯ ಹತ್ಯೆ

Update: 2019-08-23 16:26 GMT

ಪಾಟ್ನಾ,ಆ.23: ಮಕ್ಕಳ ಕಳ್ಳಿ ಎಂದು ವದಂತಿ ಹರಡಿದ ಹಿನ್ನೆಲೆಯಲ್ಲಿ ವಿಶೇಷ ಚೇತನ ಮಹಿಳೆಯ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಕಾರಣ ಆಕೆ ಮೃತಪಟ್ಟ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಶಹಪುರ ಟೊಲಿಯಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಅಪರಿಚಿತ ಮಹಿಳೆ ಕಳೆದ ಒಂದು ತಿಂಗಳಲ್ಲಿ ಬಿಹಾರದಲ್ಲಿ ಗುಂಪು ಥಳಿತಕ್ಕೊಳಗಾದ ಏಳನೇ ವ್ಯಕ್ತಿಯಾಗಿದ್ದಾರೆ. 20ರ ಹರೆಯದ ಮಹಿಳೆ ಗುರುವಾರ ಬೆಳಿಗ್ಗೆ ಮನೆಯೊಂದರೊಳಗೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯೊಳಗೆ ಹೊಕ್ಕ ಮಹಿಳೆಯನ್ನು ಮಕ್ಕಳ ಕಳ್ಳಿ ಎಂದು ಆರೋಪಿಸಿ 50ರಿಂದ 70ರಷ್ಟಿದ್ದ ಜನರ ಗುಂಪು ಕರುಣೆಯಿಲ್ಲದಂತೆ ಆಕೆ ಪ್ರಜ್ಞೆ ತಪ್ಪುವವರೆಗೆ ಥಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮಹಿಳೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಇಜಾಝ್ ಅಹ್ಮದ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News