ಪ್ರಸಿದ್ಧ ನಟನ ಕೃಷಿಭೂಮಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಮೃತದೇಹ ಪತ್ತೆ

Update: 2019-09-19 07:37 GMT

ಹೈದರಾಬಾದ್, ಸೆ.19: ಮಹಬೂಬ್‍ನಗರ್ ಜಿಲ್ಲೆಯಲ್ಲಿನ ಪಾಪರೆಡ್ಡಿಗುಡ  ಎಂಬ ಗ್ರಾಮದಲ್ಲಿ ಖ್ಯಾತ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಅವರಿಗೆ ಸೇರಿದ  ಕೃಷಿ ಭೂಮಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಮೃತದೇಹ ಪತ್ತೆಯಾಗಿದೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಶವ ಸಂಪೂರ್ಣ ಕೊಳೆತು ಹೋಗಿರುವುದನ್ನು ಗಮನಿಸಿ ಸ್ಥಳದಲ್ಲಿಯೇ ಇಂದು  ಮರಣೋತ್ತರ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದಾರೆ.

ಸುಮಾರು 40 ಎಕ್ರೆಯಷ್ಟು ವಿಸ್ತಾರದ ಈ ಕೃಷಿ ಭೂಮಿಯನ್ನು ನಾಗಾರ್ಜುನ ಕೆಲ ಸಮಯದ ಹಿಂದೆ ಖರೀದಿಸಿದ್ದರು. ಸೆಪ್ಟೆಂಬರ್ ಮೊದಲ ವಾರದಲ್ಲಿ ಇಲ್ಲಿಗೆ ಅಮಲಾ ಅಕ್ಕಿನೇನಿ ಭೇಟಿ ನೀಡಿದ್ದರು.

ಜಮೀನನ್ನು ಪರಿಶೀಲಿಸಿ ಸಾವಯವ ಕೃಷಿ ಕೈಗೊಳ್ಳಲು ತಯಾರಿ ನಡೆಸುವ ಸಲುವಾಗಿ ಬುಧವಾರ ಅಕ್ಕಿನೇನಿ ಕುಟುಂಬ ತಜ್ಞರ ತಂಡವೊಂದನ್ನು ಕಳುಹಿಸಿತ್ತು. ಈ ಸಂದರ್ಭ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರು ಅಲ್ಲಿನ ಕೊಠಡಿಯೊಂದರಿಂದ ಕೆಟ್ಟ ವಾಸನೆ ಹೊರಸೂಸುತ್ತಿರುವುದನ್ನು ಗಮನಿಸಿ ಅದರ ಬಾಗಿಲು ತೆರೆದಾಗ ಅಲ್ಲಿ ಕೊಳೆತ ಮೃತದೇಹ ಪತ್ತೆಯಾಗಿತ್ತು. ದೇಹದ ಮೇಲೆ ಪ್ಯಾಂಟ್ ಹಾಗೂ ನೀಳ ತೋಳಿನ ಶರ್ಟ್ ಇತ್ತು.

ಈ ಅಪರಿಚಿತ ವ್ಯಕ್ತಿ ಆರು ತಿಂಗಳ ಹಿಂದೆ ಸತ್ತಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಆತನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News