ಸೇನೆಯಲ್ಲಿ ಕಿರುಕುಳ ಆರೋಪ: ಸೇವೆಗೆ ರಾಜೀನಾಮೆ ನೀಡಿದ ಯೋಧ
ಧುಳೆ (ಮಹಾರಾಷ್ಟ್ರ), ಅ.5: ಸೇನೆಯಲ್ಲಿನ ನಿರಂತರ ಕಿರುಕುಳದಿಂದಾಗಿ ಬೇಸತ್ತು ತಾನು ಸೇವೆಯನ್ನು ತೊರೆಯುತ್ತಿರುವುದಾಗಿ 2016ರಲ್ಲಿ ಅನುದ್ದಿಷ್ಟವಾಗಿ ಗಡಿಯನ್ನು ದಾಟಿ ಪಾಕಿಸ್ತಾನವನ್ನು ಪ್ರವೇಶಿಸಿದ್ದ ಯೋಧ ಚಂದು ಚವಾಣ್ ಹೇಳಿದ್ದಾರೆ.
ತಾನು ಪಾಕ್ನಿಂದ ವಾಪಸಾದಾಗಿನಿಂದಲೂ ತನಗೆ ಸೇನೆಯಲ್ಲಿ ಕಿರುಕುಳ ನೀಡಲಾಗುತ್ತಿದೆ ಮತ್ತು ತನ್ನನ್ನು ಸಂಶಯದಿಂದ ನೋಡಲಾಗುತ್ತಿದೆ. ಇದೇ ಕಾರಣದಿಂದ ಸೇನೆಯನ್ನು ತೊರೆಯುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಚವಾಣ್ ಅಹ್ಮದ್ನಗರದಲ್ಲಿರುವ ತನ್ನ ಯುನಿಟ್ ಕಮಾಂಡರ್ಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ ಎಂದು ಅವರಿಗೆ ನಿಕಟ ಮೂಲಗಳು ತಿಳಿಸಿವೆ.
ಚವಾಣ್ರನ್ನು ಸೆರೆ ಹಿಡಿದಿದ್ದ ಪಾಕ್ ರೇಂಜರ್ಗಳು ನಾಲ್ಕು ತಿಂಗಳುಗಳ ಕಾಲ ಅವರನ್ನು ಥಳಿಸಿ,ಚಿತ್ರಹಿಂಸೆ ನೀಡಿದ್ದರು. ಭಾರತಕ್ಕೆ ಮರಳಿಸುವ ಮುನ್ನ ಚವಾಣ್ ಹಿಂಸೆಯಿಂದ ಜೀವಚ್ಛವವಾಗಿದ್ದರು.
ಕಳೆದ ತಿಂಗಳು ಧುಳೆ ಜಿಲ್ಲೆಯಲ್ಲಿನ ತನ್ನ ಊರು ಬೊಹ್ರವೀರ್ನಲ್ಲಿ ಅವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವು ಅಪಘಾಕ್ಕೀಡಾಗಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.