ಅಧ್ಯಕ್ಷ ಇನ್ ಅಮೆರಿಕ : ಅಮೆರಿಕದಲ್ಲಿ ಹರಿದ ಹಾಸ್ಯದ ಹೊನಲು

Update: 2019-10-05 18:30 GMT

‘ಅಧ್ಯಕ್ಷ’ ಸಿನೆಮಾದ ಮೂಲಕ ಶರಣ್ ಪಡೆದ ಇಮೇಜ್ ಗೆ ಯಾವ ಕೊರತೆಯೂ ಬರದ ಹಾಗೆ ಸಿದ್ಧವಾಗಿರುವ ಚಿತ್ರ ‘ಅಧ್ಯಕ್ಷ ಇನ್ ಅಮೆರಿಕ’. ಹಾಗಾಗಿ ಇಲ್ಲಿ ಹಾಸ್ಯದ ಜತೆಯಲ್ಲಿ ಸ್ವಾರಸ್ಯಕರವಾದ ಒಂದು ಕೌಟುಂಬಿಕ ಕಥನವೂ ಇದೆ.

ಉಲ್ಲಾಸ್ ಹಳ್ಳಿಯ ಹೈದ. ಆದರೆ ಆತನ ಕನಸು ಸುಲಭದಲ್ಲಿ ಶ್ರೀಮಂತನಾಗಬೇಕು ಎನ್ನುವುದು. ಯಾಕೆಂದರೆ ಚಟ ಚಕ್ರವರ್ತಿ ಎನ್ನುವ ತನ್ನ ಬಿರುದಿಗೆ ತಕ್ಕಂತೆ ಉಲ್ಲಾಸನಿಗೆ ಹಣ ಬೇಕಿರುತ್ತದೆ. ಕೆಲಸಕ್ಕೆ ಹೋಗುವುದಕ್ಕಿಂತ ಯಾವುದಾದರೂ ಡೀಲ್ ಮಾಡಿ ದಿಢೀರ್ ಶ್ರೀಮಂತನಾಗುವುದೇ ಆಸೆ. ಇದೇ ವೇಳೆ ಉಲ್ಲಾಸ್ ಹೆಸರಿನ ವ್ಯಕ್ತಿಯೊಬ್ಬ ಪಂಚಾಯತ್ ಚುನಾವಣೆಗೆ ನಿಲ್ಲುತ್ತಿರುವ ವಿಚಾರ ಈ ಉಲ್ಲಾಸನಿಗೆ ತಿಳಿಯುತ್ತದೆ. ಆತನದೇ ಹೆಸರು ತನಗೂ ಇರುವ ಕಾರಣ ಆತನಿಗೆ ಬರುವ ಮತಗಳನ್ನು ಒಳಗೆ ಹಾಕಬಹುದೆನ್ನುವ ಉದ್ದೇಶವೊಂದನ್ನೇ ಇಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸುತ್ತಾನೆ. ವಿಚಿತ್ರ ಎನ್ನುವ ಹಾಗೆ ಅದರಲ್ಲಿ ಗೆಲವನ್ನೂ ಕಾಣುತ್ತಾನೆ. ಆ ಊರಿನ ಸಿರಿವಂತ ಮಾರ್ವಾಡಿ ಕುಟುಂಬದ ಹುಡುಗಿ ಸಿಮ್ರಾನ್‌ಳನ್ನು ಆಕೆಯ ಶ್ರೀಮಂತಿಕೆ ಮೋಹಿಸಿಯೇ ಮದುವೆಯಾಗಲು ಬಯಸುತ್ತಾನೆ. ಆದರೆ ಆಕೆಗಿಂತಲೂ ಶ್ರೀಮಂತೆಯಾದ ಬಾಲ್ಯದ ಗೆಳತಿ ನಂದಿನಿ ವಿದೇಶದಿಂದ ಬಂದಾಗ ಆಕೆಯೊಂದಿಗಿನ ವಿವಾಹಕ್ಕೂ ಒಪ್ಪುತ್ತಾನೆ. ನಂದಿನಿಯೊಂದಿಗೆ ಅಮೆರಿಕ ಸೇರಿಕೊಂಡ ಉಲ್ಲಾಸ್‌ಗೆ ಅದಾಗಲೇ ಒಂದು ಪರಮ ಸತ್ಯದ ಅರಿವಾಗಿರುತ್ತದೆ. ತನ್ನ ಪತ್ನಿ ಕುಡಿತದ ಚಟ ಹೊಂದಿದವಳು ಎಂದು ಗೊತ್ತಾಗುತ್ತದೆ. ಆಕೆಯನ್ನು ಪರಿವರ್ತಿಸುವ ಪ್ರಯತ್ನದಲ್ಲಿ ಮುಂದೇನಾಗುತ್ತದೆ ಎನ್ನುವುದೇ ಚಿತ್ರ.

ಉಲ್ಲಾಸ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶರಣ್ ಪ್ರೇಕ್ಷಕರನ್ನು ಉಲ್ಲಾಸಗೊಳಿಸುವಲ್ಲಿ ಸಫಲರಾಗಿದ್ದಾರೆ. ಅದಕ್ಕೆ ಚಿತ್ರಕತೆಯಲ್ಲಿರುವ ಹಾಸ್ಯ ಸನ್ನಿವೇಶಗಳು ಮತ್ತು ಡೈಲಾಗ್‌ಗಳ ಜತೆಯಲ್ಲಿ ಶರಣ್ ಅವರು ಪಾತ್ರವನ್ನು ತಮ್ಮದೇ ಮ್ಯಾನರಿಸಮ್ ಮೂಲಕ ನಿಭಾಯಿಸಿರುವ ರೀತಿಯೂ ಕಾರಣ ಎಂದು ಹೇಳಲೇಬೇಕು. ಮಾಲಾಶ್ರೀಯಂತೆ ಆ್ಯಕ್ಷನ್ ನಾಯಕಿಯಾಗಿ ಗುರುತಿಸಿಕೊಂಡಿದ್ದ ರಾಗಿಣಿ, ಚಿತ್ರದಲ್ಲಿ ನಂದಿನಿಯಾಗಿ ಆಕೆಯ ಗುಂಡು ಹುಡುಗಿ ಇಮೇಜನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಆದರೆ ನೋವು ತುಂಬಿದ ಭಾವನಾತ್ಮಕ ಸನ್ನಿವೇಶಗಳಲ್ಲಿ ಅವರ ನಟನೆ ಮನಸ್ಸಿಗೆ ತಟ್ಟುವುದಿಲ್ಲ. ಅದಕ್ಕೆ ಅಂತಹದ್ದೊಂದು ಸನ್ನಿವೇಶವನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ನೀಡಿರದೇ ಹೋಗಿರುವುದು ಕೂಡ ಕಾರಣ ಆಗಿರಬಹುದು. ಆದರೆ ಸಾಮಾನ್ಯ ಸ್ಟಾರ್ ಚಿತ್ರಗಳಲ್ಲಿ ಕಳೆದು ಹೋಗುವ ಪಾತ್ರವಾಗಿರದೆ, ಅಭಿನಯದ ಮೂಲಕ ಗುರುತಿಸಿಕೊಳ್ಳುವ ಅವಕಾಶ ಗಳಿಸಿರುವ ರಾಗಿಣಿಯನ್ನು ಕಂಡು ಅಭಿಮಾನಿಗಳು ಸಂಭ್ರಮಿಸಲು ಅಡ್ಡಿಯಿಲ್ಲ. ಗ್ಲಾಮರ್ ಪ್ರದರ್ಶನಕ್ಕೆ ಕೂಡ ಅಗತ್ಯವಾದ ಸನ್ನಿವೇಶ ಮತ್ತು ಹಾಡುಗಳು ಜತೆ ನೀಡಿವೆ.

‘ಅಮೆರಿಕ ಅಮೆರಿಕ’ ಚಿತ್ರದ ಬಳಿಕ ಅಮೆರಿಕವನ್ನು ಶೀರ್ಷಿಕೆಯಲ್ಲಿ ಬಳಸಿರುವ ಈ ಚಿತ್ರದಲ್ಲಿಯೂ ಪ್ರೀತಿಯ ಕುರಿತಾದ ಭಾವನಾತ್ಮಕ ಸನ್ನಿವೇಶಗಳಿವೆ. ಆದರೆ ನಾಯಕ ಮತ್ತು ನಾಯಕಿಯ ಬಳಿಕ ಇಡೀ ಚಿತ್ರದಲ್ಲಿ ಗಮನ ಸೆಳೆಯುವುದು ಹಾಸ್ಯ ಕಲಾವಿದರು ಮತ್ತು ಸಾಂದರ್ಭಿಕವಾಗಿ ಹಾಸ್ಯಕ್ಕೆ ಒಳಗಾಗುವ ಪ್ರಕಾಶ್ ಬೆಳವಾಡಿ, ಅವಿನಾಶ್ ಮೊದಲಾದವರು ನಿಭಾಯಿಸಿರುವಂತಹ ಪಾತ್ರಗಳು. ಕೌಟುಂಬಿಕ ಮೌಲ್ಯಗಳನ್ನು ವಿಡಂಬನೆಯ ಮೂಲಕ ವಿಶ್ಲೇಷಿಸಲಾಗಿದೆ. ಅದಕ್ಕೆ ಮೂಲ ಮಲಯಾಳಂ ಚಿತ್ರವಾದ ‘ಟು ಕಂಟ್ರೀಸ್’ ನ ಸನ್ನಿವೇಶಗಳನ್ನೆಲ್ಲ ಹಾಗೆಯೇ ಉಳಿಸಿಕೊಂಡಿರುವುದು ಕೂಡ ಒಂದು ಕಾರಣ. ಆದರೆ ಸಂಭಾಷಣೆಯ ವಿಚಾರಕ್ಕೆ ಬಂದರೆ ನಿರ್ದೇಶಕ ಯೋಗಾನಂದ್ ಹೊಸದಾಗಿ ಸ್ಕೋರ್ ಮಾಡಲು ಮುಂದಾಗಿದ್ದಾರೆ. ಮುಖಕ್ಕೆ ಹೊಡೆದಂತೆ ಸತ್ಯವನ್ನು ಮಾತನಾಡುವ ತಂದೆಯಾಗಿ ಅಶೋಕ್ ನಟಿಸಿದ್ದರೆ, ತಾಯಿಯಾಗಿ ಪದ್ಮಜಾ ರಾವ್ ಇದ್ದಾರೆ. ಹಳ್ಳಿಯ ಚಡ್ಡಿ ದೋಸ್ತನಾಗಿ ಕೆಆರ್‌ಪೇಟೆ ಶಿವರಾಜ್ ನಗಿಸಿದರೆ, ಅಮೆರಿಕದ ಸ್ನೇಹಿತರಾಗಿ ಸಾಧು ಕೋಕಿಲ, ರಂಗಾಯಣ ರಘು ಚಪ್ಪಾಳೆ ಗಿಟ್ಟಿಸುತ್ತಾರೆ.

ಅದರಲ್ಲಿಯೂ ಕ್ಲೈಮ್ಯಾಕ್ಸ್ ಸನ್ನಿವೇಶವೊಂದರಲ್ಲಿ ನಾಯಕನ ಕನ್ನಡವನ್ನು ಇಂಗ್ಲಿಷ್‌ಗೆ ಭಾಷಾಂತರಿಸುವ ಸಾಧುಕೋಕಿಲ ನೀಡುವ ಕಚಗುಳಿಗೆ ಪ್ರೇಕ್ಷಕ ಕರಗಿ ನೀರಾಗುತ್ತಾನೆ. ಮತ್ತೊಬ್ಬ ಉಲ್ಲಾಸ್ ಪಾತ್ರ ನಿರ್ವಹಿಸಿರುವ ತಾರಕ್ ಪೊನ್ನಪ್ಪ, ಮೊದಲ ಪ್ರೇಯಸಿಯಾಗಿ ಕಾಣಿಸಿಕೊಂಡಿರುವ ದಿಶಾಪಾಂಡೆ, ಆಕೆಯ ತಂದೆಯಾಗಿ ನಟಿಸಿರುವ ಮಕರಂದ ದೇಶಪಾಂಡೆ, ನಾಯಕನ ಕುಡುಕ ಚಿಕ್ಕಪ್ಪನಾಗಿ ತಬಲಾ ನಾಣಿಯ ಪಾತ್ರಗಳು ನೆನಪಲ್ಲಿ ಉಳಿಯುತ್ತವೆ. ನಾಯಕಿಯ ತಂದೆ ತಾಯಿಯಾಗಿ ಜನಪ್ರಿಯ ಪೋಷಕ ಪಾತ್ರಗಳ ಜೋಡಿಯಾದ ಅವಿನಾಶ್ ಮತ್ತು ಚಿತ್ರಾ ಶೆಣೈ ಮತ್ತೆ ಒಂದಾಗಿದ್ದಾರೆ. ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಚಿತ್ರಕ್ಕೆ ಬೆಂಬಲವಾಗಿದೆ. ಲಾಜಿಕ್‌ಗಿಂತ ಹಾಸ್ಯಕ್ಕೆ ಪ್ರಾಧಾನ್ಯತೆ ನೀಡಿ ಚಿತ್ರ ನೋಡುವವರು, ಮೂಲ ಚಿತ್ರವನ್ನು ಅದರ ನಾಯಕ ದಿಲೀಪ್‌ನ ಅಭಿಮಾನಿಯಾಗಿ ನೋಡದವರು ಖಂಡಿತವಾಗಿ ನೋಡಿ ಎಂಜಾಯ್ ಮಾಡಬಹುದಾದ ಚಿತ್ರ ಇದು. ಒಟ್ಟಿನಲ್ಲಿ ಶರಣ್ ಅಭಿಮಾನಿಗಳನ್ನು ಹಾಸ್ಯದ ಹೊನಲಲ್ಲಿ ತೇಲಿಸುತ್ತದೆ.

ತಾರಾಗಣ: ಶರಣ್, ರಾಗಿಣಿ

ನಿರ್ದೇಶನ: ಯೋಗಾನಂದ್ ಮುದ್ದಾನ್
ನಿರ್ಮಾಣ: ವಿಶ್ವ ಪ್ರಸಾದ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News