ಮೂರು ಸ್ಥಾನಗಳನ್ನು ಕಳೆದುಕೊಂಡ ಬಗ್ಗೆ ನಿತೀಶ್ ಕುಮಾರ್ ಪ್ರತಿಕ್ರಿಯೆ

Update: 2019-10-25 14:08 GMT

ಪಾಟ್ನಾ,ಅ.25: ಯಾವಾಗಲೂ ಉಪಚುನಾವಣೆಗಳಲ್ಲಿ ಸೋಲುಗಳ ಬಳಿಕ ಮುಂದಿನ ಚುನಾವಣೆಯಲ್ಲಿ ಜಯವು ಒಲಿದು ಬರುತ್ತದೆ ಎಂದು ಹೇಳಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ ಅವರು,ರಾಜ್ಯದಲ್ಲಿ ನಡೆದ ವಿಧಾನಸಭಾ ಉಪಚುನಾವಣೆಗಳಲ್ಲಿ ಜೆಡಿಯು ಮೂರು ಸ್ಥಾನಗಳನ್ನು ಕಳೆದುಕೊಂಡಿರುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದಿದ್ದಾರೆ.

ಉಪಚುನಾವಣೆ ನಡೆದ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಸ್ಪರ್ಧಿಸಿದ್ದ ಜೆಡಿಯು ಎರಡು ಕ್ಷೇತ್ರಗಳನ್ನು ವಿರೋಧಿ ಪಕ್ಷ ಆರ್‌ಜೆಡಿಗೆ ಮತ್ತು ಒಂದು ಸ್ಥಾನವನ್ನು ಪಕ್ಷೇತರ ಅಭ್ಯರ್ಥಿಗೆ ಕಳೆದುಕೊಂಡು ಒಂದು ಸ್ಥಾನವನ್ನು ಮಾತ್ರ ಉಳಿಸಿಕೊಂಡಿದೆ.

ಕಳೆದ ಎಪ್ರಿಲ್-ಮೇ ತಿಂಗಳಿನಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ರಾಜ್ಯದ 40 ಸ್ಥಾನಗಳ ಪೈಕಿ 39ನ್ನು ಕೊಳ್ಳೆ ಹೊಡೆದಿತ್ತು. ಈ ಪೈಕಿ ಬಿಜೆಪಿ 17 ಸ್ಥಾನಗಳನ್ನು ಗೆದ್ದಿದ್ದರೆ ಮಿತ್ರಪಕ್ಷಗಳಾದ ಜೆಡಿಯು 16 ಮತ್ತು ಎಲ್‌ಜೆಪಿ ಆರು ಸ್ಥಾನಗಳನ್ನು ಗೆದ್ದಿದ್ದವು.

ಉಪಚುನಾವಣೆಯಲ್ಲಿನ ಕಳಪೆ ಸಾಧನೆಯ ಬಗ್ಗೆ ಎನ್‌ಡಿಎ ಆತ್ಮಶೋಧನೆ ಮಾಡಿಕೊಳ್ಳಲಿದೆ ಎಂದು ಟ್ವೀಟಿಸಿರುವ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು,ಮುಂದಿನ ವರ್ಷ ನಡೆಯುವ ನಿರೀಕ್ಷೆಯಿರುವ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭಾರೀ ಗೆಲುವು ಸಾಧಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News