ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ಉದ್ಧವ್ ಠಾಕ್ರೆ ಆಯ್ಕೆ

Update: 2019-11-26 18:08 GMT

ಮುಂಬೈ, ನ.26: ಶಿವಸೇನೆ-ಎನ್‌ಸಿಪಿ ಕಾಂಗ್ರೆಸ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಆಯ್ಕೆಯಾಗಿದ್ದಾರೆ. ಉದ್ಧವ್‌ಠಾಕ್ರೆ ಅವರು ಸರಕಾರ ರಚನೆಗೆ ಹಕ್ಕು ಮಂಡಿಸುವುದಕ್ಕಾಗಿ ರಾಜ್ಯಪಾಲರನ್ನು ಭೇಟಿಯಾಗಲು ಶೀಘ್ರದಲ್ಲೇ ರಾಜಭವನಕ್ಕೆ ತೆರಳಲಿದ್ದಾರೆಂದು ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟ ತಿಳಿಸಿದೆ. ಉದ್ಧವ್‌ಠಾಕ್ರೆ ಅವರು ನ. 28ರಂದು ನೂತನ ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆಂದು ಅದು ಹೇಳಿದೆ.

ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನಡುವಿನ ಬಹುತೇಕ ಸಮಸ್ಯೆಗಳು ಬಗೆಹರಿದಿವೆ. ಆದ್ದರಿಂದ ಸರಕಾರ ರಚನೆಗೆ ಅವಕಾಶ ಕೋರಲು ಇನ್ನಷ್ಟು ಸಮಯದ ಅಗತ್ಯವಿಲ್ಲ. ಎರಡನೆಯ ಅತೀ ದೊಡ್ಡ ಪಕ್ಷವಾಗಿರುವ ಶಿವಸೇನೆಯನ್ನು ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನಿಸಬೇಕು ಶಿವಸೇನೆ ಆಗ್ರಹಿಸಿದೆ. ಶಿವಸೇನೆಯ 56 ಶಾಸಕರು, ಎನ್‌ಸಿಪಿಯ 54 ಮತ್ತು ಕಾಂಗ್ರೆಸ್‌ನ 44 ಶಾಸಕರು ಸೇರಿ ಮೈತ್ರಿಕೂಟದ ಬಲ 154 ಆಗುತ್ತದೆ. 288 ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ 145 ಸಂಖ್ಯಾಬಲದ ಅಗತ್ಯವಿದೆ.

ದೇವೇಂದ್ರ ಫಡ್ನವೀಸ್ ರಾಜೀನಾಮೆ ಘೋಷಿಸಿರುವ ಕಾರಣ ಸುಪ್ರೀಂಕೋರ್ಟ್ ಆದೇಶದಂತೆ ಬುಧವಾರ ಸದನದಲ್ಲಿ ವಿಶ್ವಾಸಮತ ಯಾಚನೆಯ ಪ್ರಶ್ನೆ ಬರುವುದಿಲ್ಲ ಎಂದು ವಿಧಾನಸಭೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಅದರ ಬದಲು ಎರಡನೇ ಅತೀ ದೊಡ್ಡ ಪಕ್ಷವಾಗಿರುವ ಶಿವಸೇನೆಯನ್ನು ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನಿಸಬಹುದು ಎಂದವರು ಹೇಳಿದ್ದಾರೆ.

ಈ ಮಧ್ಯೆ ಸಂಜಯ್ ರಾವತ್ ಹೇಳಿಕೆಯೊಂದನ್ನು ನೀಡಿ, ಉದ್ಧವ್‌ಠಾಕ್ರೆ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರಿಗೂ ಆಹ್ವಾನ ನೀಡುವುದಾಗಿ ತಿಳಿಸಿದ್ದಾರೆ.

ಛತ್ರಪತಿ ಶಿವಾಜಿಯವರ ಕನಸಿನ ಮಹಾರಾಷ್ಟ್ರವನ್ನು ಮತ್ತೊಮ್ಮೆ ನಿರ್ಮಿಸೋಣ. ನನಗೆ ನೀವೆಲ್ಲರೂ ನೀಡಿರುವ ಹೊಣೆಗಾರಿಕೆಯನ್ನು ಸ್ವೀಕರಿಸುತ್ತೇವೆ. ಇಂದು ನಡೆದಿರುವುದು ನಿಜವಾದ ಸಂವಿಧಾನವಾಗಿದೆ. ನಾವೆಲ್ಲರೂ ಜೊತೆಯಾಗಿ ಮಹಾರಾಷ್ಟ್ರದ ರೈತರ ಕಣ್ಣೀರನ್ನು ಒರೆಸಲಿದ್ದೇವೆ.

- ಉದ್ಧವ್ ಠಾಕ್ರೆ, ಶಿವಸೇನೆ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News