Breaking News: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣ

Update: 2019-11-28 18:06 GMT

ಮುಂಬೈ,ನ.28: ಕಳೆದೊಂದು ತಿಂಗಳಿನಿಂದ ಅನಿರೀಕ್ಷಿತ ತಿರುವುಗಳಿಗೆ ಸಾಕ್ಷಿಯಾದ ಮಹಾರಾಷ್ಟ್ರದ ರಾಜಕೀಯ ಹೈಡ್ರಾಮಾಕ್ಕೆ ಕೊನೆಗೂ ಅಂತಿಮ ತೆರೆ ಬಿದ್ದಿದೆ. ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟ ‘ಮಹಾವಿಕಾಸ್ ಅಘಾಡಿ’ ಗುರು ವಾರ ಅಧಿಕಾರಕ್ಕೇರಿದೆ. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಇಂದು ಸಂಜೆ ಭಾರೀ ಜನಸಾಗರದ ಸಮಕ್ಷಮದಲ್ಲಿ ಮಹಾರಾಷ್ಟ್ರದ 18ನೇ ಮುಖ್ಯಮಂತ್ರಿಯಾಗಿ ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಕೇಸರಿ ಬಣ್ಣದ ರೇಷ್ಮೆ ಕುರ್ತಾ ಧರಿಸಿದ್ದ 59 ವರ್ಷ ವಯಸ್ಸಿನ ಉದ್ಭವ್ ಠಾಕ್ರೆ ಮರಾಠಿಯಲ್ಲಿ ಅಧಿಕಾರದ ಮತ್ತು ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಭಗತ್‌ಸಿಂಗ್ ಕೋಶ್ಯಾರಿ ಪ್ರಮಾಣವಚನ ಬೋಧಿಸಿದರು. ಉದ್ಧವ್ ಜೊತೆಗೆ ಎನ್‌ಸಿಪಿಯ ಛಗನ್ ಭುಜಬಲ್, ಜಯಂತ್ ಪಾಟೀಲ್, ಕಾಂಗ್ರೆಸ್‌ನ ಬಾಳಾಸಾಹೇಬ್ ಥೋರಟ್ ಹಾಗೂ ನಿತಿನ್ ರಾವತ್, ಶಿವಸೇನಾದ ಏಕನಾಥ್‌ಶಿಂಧೆ ಹಾಗೂ ಸುಭಾಷ್ ದೇಸಾಯಿ ಕೂಡಾ ನೂತನ ಸಂಪುಟದ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.

ಉದ್ಧವ್‌ಠಾಕ್ರೆ ಪ್ರಮಾಣ ವಚನ ಸ್ವೀಕಾರಕ್ಕೆ ಮುನ್ನ ವೇದಿಕೆಯಲ್ಲಿ ಸ್ಥಾಪಿಸಲಾಗಿದ್ದ ಛತ್ರಪತಿಶಿವಾಜಿಯ ಪಟ್ಟಾಭಿಷೇಕವನ್ನು ಬಿಂಬಿಸುವ ಪ್ರತಿಮೆಗೆ ನಮನ ಸಲ್ಲಿಸಿದರು.ಉದ್ಧವ್ ಠಾಕ್ರೆ ಪತ್ನಿ ರಶ್ಮಿ ಹಾಗೂ ಪುತ್ರ ಆದಿತ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಮಾಣವಚನ ಕಾರ್ಯಕ್ರಮವು ಪ್ರತಿಪಕ್ಷಗಳ ಏಕತೆಯ ಪ್ರದರ್ಶನಕ್ಕೂ ಸಾಕ್ಷಿಯಾಯಿತು. ಎನ್‌ಸಿಪಿ ನಾಯಕ ಶರದ್‌ಪವಾರ್, ಡಿಎಂಕೆಯ ಎಂ.ಕೆ.ಸ್ಟಾಲಿನ್, ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್,ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಪಿಲ್‌ ಸಿಬಲ್ ಉಪಸ್ಥಿತರಿದ್ದರು.

ಉದ್ಧವ್ ಮುಖ್ಯಮಂತ್ರಿಯಾಗದಂತೆ ತಡೆಯಲು ವಿಫಲ ಯತ್ನಗಳನ್ನು ನಡೆಸಿದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಫಡ್ನವೀಸ್ ಜೊತೆಗೆ ಆರು ದಿನಗಳ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ಆನಂತರ ಪದತ್ಯಾಗ ಮಾಡಿ ಎನ್‌ಸಿಪಿ ಪಾಳಯಕ್ಕೆ ಮರಳಿ ಅಜಿತ್ ಪವಾರ್ ಸಭೆಯ ಮುಂದಿನ ಸಾಲಿನಲ್ಲಿ ಉಪಸ್ಥಿತರಿದ್ದರು.

ಉದ್ಧವ್ ಅವರ ಸೋದರ ಸಂಬಂಧಿ ಹಾಗೂ ಎಂಎನ್‌ಎಸ್ ಪಕ್ಷದ ನಾಯಕ ರಾಜ್‌ಠಾಕ್ರೆ ಕೂಡಾ ಹಾಜರಿದ್ದರು.

ನೂತನ ಮೈತ್ರಿ ಸರಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದ ಶಿವಾಜಿ ಪಾರ್ಕ್‌ನಲ್ಲಿ ಎಲ್ಲಿ ನೋಡಿದರೂ ಜನಸಾಗರವೇ ಕಾಣುತ್ತಿತ್ತು. ಮೈದಾನದುದ್ದಕ್ಕೂ ಶಿವಸೇನಾ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಧ್ವಜಗಳು ಹಾರಾಡುತ್ತಿದ್ದವು. ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದ್ದರು. ಆದರೆ ಪ್ರಧಾನಿ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಆದರೆ ಟ್ವೀಟ್‌ಮಾಡಿ ಉದ್ಧವ್‌ಗೆ ಶುಭ ಹಾರಸಿದ್ದಾರೆ.

ಉದ್ಧವ್ ಮುಷ್ಟಿ ಬಿಗಿಹಿಡಿದು ಕೈಗಳನ್ನು ಮೇಲಕ್ಕೆತ್ತಿ, ಆನಂತರ ತಲೆಬಾಗಿ ಸಭೆಗೆ ನಮಿಸಿದಾಗ ಶಿವಸೇನಾ ಬೆಂಬಲಿಗರು ಹರ್ಷೋದ್ಘಾರ ಮಾಡಿದರು.ಉದ್ಧವ್ ಶಾಸಕನಾಗಿರದೆ ಪ್ರಮಾಣವಚನ ಸ್ವೀಕರಿಸಿದ ಮಹಾರಾಷ್ಟ್ರದ ಎಂಟನೆ ಮುಖ್ಯಮಂತ್ರಿಯಾಗಿದ್ದಾರೆ. ಮನೋಹರ ಜೋಶಿ ಹಾಗೂ ನಾರಾಯಣ ರಾಣೆ ಆನಂತರ ಮುಖ್ಯಮಂತ್ರಿ ಪಟ್ಟ ಆಲಂಕರಿಸಿದ ಮೂರನೇ ಶಿವಸೇನಾ ನಾಯಕನಾಗಿದ್ದಾರೆ.

ಉದ್ಧವ್ ಠಾಕ್ರೆ ಶಾಸಕರಲ್ಲದಿರುವುದರಿಂದ ಅವರು ಆರು ತಿಂಗಳೊಳಗೆ ವಿಧಾನಸಭೆ ಅಥವಾ ವಿಧಾನ ಪರಿಷತ್‌ನ ಸದಸ್ಯತ್ವವನ್ನು ಪಡೆಯಬೇಕಾಗುತ್ತದೆ.

ವೇದಿಕೆಯಲ್ಲಿ ಮಿಂಚಿದ ಮುಕೇಶ ಅಂಬಾನಿ ಕುಟುಂಬ

ಉದ್ಧವ್ ಠಾಕ್ರೆ ಅವರು ಗುರುವಾರ ಸಂಜೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಮತ್ತು ರಾಜಕೀಯ ನಾಯಕರಲ್ಲಿ ರಿಲಾಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ, ಅವರ ಪತ್ನಿ ನೀತಾ ಅಂಬಾನಿ ಮತ್ತು ಪುತ್ರ ಅನಂತ ಅಂಬಾನಿ ಅವರು ಸೇರಿದ್ದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಮುಕೇಶ್ ಅಂಬಾನಿ ಮತ್ತು ಉದ್ಧವ್ ಪುತ್ರ ಆದಿತ್ಯ ಠಾಕ್ರೆ ಅವರು ಪರಸ್ಪರ ಆತ್ಮೀಯವಾಗಿ ಆಲಂಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News