'ಪ್ರಜ್ಞಾ ಸಿಂಗ್ ಭಯೋತ್ಪಾದಕಿ' ಎಂಬ ಹೇಳಿಕೆ ಗಾಂಧೀಜಿ ಹತ್ಯೆಗಿಂತಲೂ ನಿಕೃಷ್ಟ : ಬಿಜೆಪಿ
Update: 2019-11-29 16:06 GMT
ಹೊಸದಿಲ್ಲಿ, ನ.29: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ರನ್ನು ಭಯೋತ್ಪಾದಕಿ ಎಂದು ಕಾಂಗ್ರೆಸ್ ಮುಖಂಡರು ಉಲ್ಲೇಖಿಸಿರುವುದು ಮಹಾತ್ಮಾ ಗಾಂಧೀಜಿಯವರ ಹತ್ಯೆ ಘಟನೆಗಿಂತಲೂ ನಿಕೃಷ್ಟ ವರ್ತನೆಯಾಗಿದೆ ಎಂದು ಬಿಜೆಪಿ ಟೀಕಿಸಿದೆ.
ಗುರುವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಭಯೋತ್ಪಾದಕಿ ಪ್ರಜ್ಞಾ ಸಿಂಗ್ ಭಯೋತ್ಪಾದಕ ಗೋಡ್ಸೆಯನ್ನು ದೇಶಭಕ್ತ ಎಂದು ಬಣ್ಣಿಸಿದ್ದಾರೆ. ಇದು ದೇಶದ ಸಂಸತ್ತಿನ ಇತಿಹಾಸದಲ್ಲೇ ಅತ್ಯಂತ ವಿಷಾದಕರ ದಿನವಾಗಿದೆ” ಎಂದು ಹೇಳಿದ್ದರು.
ಈ ಹೇಳಿಕೆಗಾಗಿ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ ಬಿಜೆಪಿ ಸದಸ್ಯರು, ಕಾಂಗ್ರೆಸ್ ಸದಸ್ಯರನ್ನುದ್ದೇಶಿಸಿ ‘ಶೇಮ್, ಶೇಮ್’ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು, ‘ಡೌನ್ ಡೌನ್ ಗೋಡ್ಸೆ, ಲಾಂಗ್ ಲಿವ್ ಮಹಾತ್ಮಾ ಗಾಂಧಿ’ ಎಂದು ಘೋಷಣೆ ಕೂಗಿದರು.