ಅತ್ಯಾಚಾರ ಘಟನೆ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಯುವತಿಗೆ ಕಿರುಕುಳ ನೀಡಿದ ಬಿಜೆಪಿ ನಾಯಕ: ಆರೋಪ

Update: 2019-12-01 15:23 GMT

ತೆಲಂಗಾಣ, ಡಿ.1: ಮಾಜಿ ಬಿಗ್ ಬಾಸ್ ಸ್ಪರ್ಧಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಲ್ಲಿ ತೆಲಂಗಾಣದ ಮಾಜಿ ಶಾಸಕರ ಪುತ್ರ ಆಶಿಶ್ ಗೌಡ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

2009ರಲ್ಲಿ ಪತಂಚೇರು ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ನಂದೇಶ್ವರ್ ಗೌಡ್ ರ ಪುತ್ರನಾಗಿದ್ದಾನೆ ಆಶಿಶ್. 2009ರಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದಾಗ ನಂದೇಶ್ವರ್ ಗೌಡ್ ಕಾಂಗ್ರೆಸ್ ನಲ್ಲಿದ್ದು, 2016ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 2019ರಲ್ಲಿ ಅವರು ಟಿಡಿಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಆದರೆ ಕಿರುಕುಳ ಪ್ರಕರಣ ಆರೋಪಿ ಆಶಿಶ್ ಭಾರತೀಯ ಜನತಾ ಯುವ ಮೋರ್ಚಾದ ಸದಸ್ಯ.

ರವಿವಾರ ಸೈಬರಾಬಾದ್ ನ ಮಧಾಪುರದಲ್ಲಿರುವ ಹೊಟೇಲ್ ಬಳಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ತಾನು ಮತ್ತು ಗೆಳತಿಯರು ಹೊಟೇಲ್ ಬಳಿ ನಿಂತಿದ್ದಾಗ ಅಲ್ಲಿಗೆ ಆಗಮಿಸಿದ ಆಶಿಶ್ ಮತ್ತು ಆತನ ಸ್ನೇಹಿತರು ಅನುಚಿತವಾಗಿ ವರ್ತಿಸಲು ಆರಂಭಿಸಿದರು. "ಆಶಿಶ್ ಮತ್ತು ಆತನ ಗೆಳೆಯರು ನನ್ನ ಮತ್ತು ಗೆಳತಿಯರ ಕೈಗಳನ್ನು ಹಿಡಿದು ಅನುಚಿತವಾಗಿ ವರ್ತಿಸಿದರು. ನಂತರ ನಮ್ಮನ್ನು ಅಶ್ಲೀಲವಾಗಿ ನಿಂದಿಸಿದರು" ಎಂದು ಯುವತಿ ಆರೋಪಿಸಿದ್ದಾರೆ.

ತೆಲಂಗಾಣದ ವೈದ್ಯೆಯ ಅತ್ಯಾಚಾರಗೈದು ಹತ್ಯೆಗೈದ ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕೆಂದು ನಡೆದ ಪ್ರತಿಭಟನೆಯಲ್ಲಿ ಆಶಿಶ್ ಭಾಗವಹಿಸಿದ ಕೆಲ ಗಂಟೆಗಳಲ್ಲೇ ಆತ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಆದರೆ ಈ ಬಿಜೆಪಿ ನಾಯಕ ಇದೀಗ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News