ನೀರವ್ ಮೋದಿ ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಿದ ಪಿಎಂಎಲ್ಎ
ಮುಂಬೈ, ಡಿ. 5: ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ವಿಚಾರಣೆ ನಡೆಸುತ್ತಿರುವ ಪಿಎಂಎಲ್ಎ ನ್ಯಾಯಾಲಯ ವಜ್ರೋದ್ಯಮಿ ನೀರವ್ ಮೋದಿಯನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಗುರುವಾರ ಘೋಷಿಸಿದೆ.
ಭಾರತದ ನ್ಯಾಯಾಲಯಗಳಿಂದ ಹೊರಗೆ ವಾಸಿಸುವ ಮೂಲಕ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಆರ್ಥಿಕ ಅಪರಾಧಿಗಳ ಸೊತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲು ಪಿಎಂಎಲ್ಎ ಕಾಯ್ದೆ ಅನುಮತಿ ನೀಡುತ್ತದೆ.
ನೀರವ್ ಮೋದಿಯನ್ನು ಪ್ರಸ್ತುತ ನೈಋತ್ಯ ಲಂಡನ್ ವಾಂಡ್ಸ್ವರ್ತ್ ಕಾರಾಗೃಹದಲ್ಲಿ ಇರಿಸಲಾಗಿದೆ. ನೀರವ್ ಮೋದಿ ತನ್ನ ಮಾವ ಮೆಹುಲ್ ಚೋಕ್ಸಿ ಅವರೊಂದಿಗೆ ಸೇರಿ ಪಂಜಾಬ್ ನ್ಯಾಶನಲ್ ಬ್ಯಾಂಕ್ಗೆ 13,570 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಬೇಕಾದವನಾಗಿದ್ದಾನೆ.
ಪ್ರರಣವೊಂದಕ್ಕೆ ಸಂಬಂಧಿಸಿ ಸ್ಕಾಟ್ಲ್ಯಾಂಡ್ ಪೊಲೀಸರು ಈ ವರ್ಷ ಮಾರ್ಚ್ನಲ್ಲಿ ನೀರವ್ ಮೋದಿಯನ್ನು ಬಂಧಿಸಿದ್ದರು. ಭಾರತದ ತನಿಖಾ ಸಂಸ್ಥೆ ಹಾಗೂ ನ್ಯಾಯಾಲಯಗಳು ಮತ್ತೆ ಮತ್ತೆ ಸಮನ್ಸ್ ಕಳುಹಿಸಿದ ಹೊರತಾಗಿಯೂ ನೀರವ್ ಮೋದಿ ಭಾರತಕ್ಕೆ ಹಿಂದಿರುಗಿರಲಿಲ್ಲ.