ಅಸ್ಪಶ್ಯ ಸಮಾಜದೊಳಗೆ ಒಗ್ಗಟ್ಟಿಲ್ಲದಿರಲು ಕಾರಣ?

Update: 2019-12-05 18:12 GMT

ಡಿಸೆಂಬರ್ 30, 1937 ಗುರುವಾರ ರಾತ್ರಿ 10 ಗಂಟೆಗೆ ಡಾ. ಬಾಬಾ ಸಾಹೇಬ ಅಂಬೇಡ್ಕರರು ಮದ್ರಾಸ್ ಮೇಲ್‌ನಿಂದ ಬೋರಿಬಂದರ್ ಸ್ಟೇಶನ್ ಮೂಲಕ ಸೊಲ್ಲಾಪುರ ಜಿಲ್ಲಾಪ್ರವಾಸ ಕೈಗೊಂಡರು. ಅವರ ಸಂಗಡ ನಾಸಿಕ್ ಶಾಸಕ ಭಾವುರಾವ್ ಗಾಯಕವಾಡ್ ಮತ್ತು ಕಮಲಾಕರ ಚಿತ್ರೆಯವರಿದ್ದರು. ದಾರಿ ಮಧ್ಯೆ ದಾದರ್ ಸ್ಟೇಶನ್‌ನಲ್ಲಿ ನಾಸಿಕ್‌ನಿಂದ ಪರಿಷತ್ತಿನ ಕಾರ್ಯಕ್ಕೆ ಬಂದಿದ್ದ ರಾಮಾಪಾಲ (ಭಂಗಿ ಸಮಾಜದ ಒಬ್ಬ ಪುಢಾರಿ) ಮುಂತಾದವರು ಬಂದು ಸೇರಿದರು. ದಾದರ್ ಸ್ಟೇಶನ್‌ನಲ್ಲಿ ಡಾಕ್ಟರ್ ಸಾಹೇಬರಿಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಪುಣೆಯ ಸ್ಟೇಶನ್‌ನಲ್ಲಿ ಸತಾರಾ ಶಾಸಕ ಖಂಡೇರಾವ್ ಸಾವಂತರು ಗಾಡಿಹತ್ತಿದರು. ದೌಂಡ ನಿಲ್ದಾಣದಲ್ಲಿ ಶಾಸಕ ಪ್ರಭಾಕರ ರೋಹಮ ಮತ್ತು ಅಹಮದ್ ನಗರದ ಜನರು ಪ್ರವಾಸದಲ್ಲಿ ಸೇರ್ಪಡೆಗೊಂಡರು.

ಸೊಲ್ಲಾಪುರ ಜಿಲ್ಲಾ ಪರಿಷತ್ತು ಪಂಢರಪುರದಲ್ಲಿ ಸೇರುವುದಿತ್ತು. ಅದಕ್ಕಾಗಿ ಡಾ. ಬಾಬಾಸಾಹೇಬ ಮತ್ತು ಅವರ ಜೊತೆಗಿನವರು ಕುರ್ಡುವಾಡಿ ರೈಲು ನಿಲ್ದಾಣದಲ್ಲಿ ಶುಕ್ರವಾರ ದಿ: 31-12-1937ರಂದು ನಸುಕಿನ ಐದುವರೆ ಗಂಟೆಗೆ ಸೇರಿದರು. ನಿಲ್ದಾಣದಲ್ಲಿ ಪರಿಷತ್ತಿನ ಸ್ವಾಗತಾಧ್ಯಕ್ಷ ಶಾಸಕ ಜೀವಪ್ಪಾ ಐದಾಳೆ, ಡಾ. ಬಾಬಾಸಾಹೇಬರನ್ನು ಸ್ವಾಗತಿಸಲು ಎದುರುಗೊಂಡರು. ಅವರು ಮತ್ತು ಸೇರಿದ ಇತರರು ಅವರನ್ನು ಪ್ರೀತಿಯಿಂದ ಸ್ವಾಗತಿಸಿದರು. ಡಾ. ಬಾಬಾಸಾಹೇಬರಿಗೆ ಮಾಲಾರ್ಪಣೆ ಮಾಡಿದರು.

ಕುರ್ಡುವಾಡಿ ನಿಲ್ದಾಣದ ಪ್ಲಾಟ್‌ಫಾರ್ಮ್ ಜನರಿಂದ ತುಂಬಿ ತುಳುಕಿತ್ತು. ಈ ನಿಲ್ದಾಣದ ರೈಲು ಅಧಿಕಾರಿಯ ವರ್ತನೆ ಮಾತ್ರ ಸಿಟ್ಟು ತರಿಸುವಂತಿತ್ತು. ಅವರಿಗೆ ಬಡವರ ಉತ್ಸಾಹ ಮತ್ತು ಡಾ. ಬಾಬಾಸಾಹೇಬರ ಜನಪ್ರಿಯತೆಯ ಉತ್ಕರ್ಷವನ್ನು ನೋಡಲು, ಸಹಿಸಿಕೊಳ್ಳಲು ಆಗುತ್ತಿರಲಿಲ್ಲವೆಂದು ಕಷ್ಟದಿಂದ ಹೇಳಬೇಕಾಗುತ್ತದೆ. ಉತ್ಸಾಹದ ಭರದಲ್ಲಿ ಕೆಲವರು ಡಾ. ಬಾಬಾಸಾಹೇಬರ ದರ್ಶನ ಮಾಡಲು ಟಿಕೆಟಿಲ್ಲದೆ ಪ್ಲಾಟ್‌ಫಾರ್ಮಿನಲ್ಲಿ ನೆರೆದಿದ್ದರು. ಅವರೆಲ್ಲರಿಂದ ದೌಂಡ ಸ್ಟೇಶನ್‌ನಿಂದ ಟಿಕೆಟ್‌ನ ಎರಡುಪಟ್ಟು ಹಣವನ್ನು ಕೇಳಲಾಯಿತು. ಅಲ್ಲಿದ್ದ ಹಣವಿಲ್ಲದವರು ಇಷ್ಟೊಂದು ಹಣವನ್ನು ಎಲ್ಲಿಂದ ತರಬೇಕು? ಆದರೆ ಕೊನೆಗೆ ಸ್ಟೇಶನ್ ಮಾಸ್ತರರ ಮಧ್ಯಸ್ತಿಕೆ ಮೂಲಕ ಈ ಘಟನೆ ಹೇಗೋ ಬಗೆಹರಿಯಿತು. ಇಕ್ಕಟ್ಟಿಗೆ ಸಿಕ್ಕಿದವರ ಬಿಡುಗಡೆಯಾಯಿತು.

ಈ ಕಹಿ ಪ್ರಸಂಗವನ್ನು ಬೇಕೆಂದೇ ನಮೂದಿಸಲು ಕಾರಣ ಅಸ್ಪಶ್ಯರ ಚಳವಳಿ ಸಾಧಾರಣವಾಗಿ ಬಹುಜನ ಸಮಾಜದವರ ಕಣ್ಣಲ್ಲಿ ನಿರಂತರ ಚುಚ್ಚುತ್ತಿರುತ್ತದೆ ಎಂಬುದು ನಮ್ಮ ಜನರೂ ಕೂಡ ನೆನಪಿಡಬೇಕು. ಯಾರಿಂದಲೂ ಕೊಂಚವೂ ಸಹಾಯದ ಅಪೇಕ್ಷೆ ಮಾಡದೆ ಇರಬೇಕಾಗು ತ್ತದೆ. ಇಲ್ಲದಿದ್ದರೆ ಅವಮಾನದ ಪ್ರಸಂಗಗಳು ಬರದೆ ಇರಲಾರವು.

ಕುರ್ಡಿವಾಡಿಗೆ ತೆರಳಲು ಡಾಕ್ಟರ್ ಸಾಹೇಬರಿಗಾಗಿ ಒಂದು ವಿಶೇಷ ವಾಹನ ವ್ಯವಸ್ಥೆ ಮಾಡಲಾಗಿತ್ತು. ಇತರ ಅತಿಥಿಗಳು ಮತ್ತು ಸ್ವಯಂ ಸೇವಕರಿಗಾಗಿ ಬಸ್‌ವ್ಯವಸ್ಥೆಯಿತ್ತು. ಇವೆರಡು ವಾಹನಗಳು ಬೆಳಗಾಗುತ್ತಿದ್ದಂತೆ ಪಂಢರಪುರ ರಸ್ತೆಗಿಳಿದವು. ದಾರಿಯಲ್ಲಿ ಮಾಢೆ ತಾಲೂಕಿನ ವಾವಳೆ ಊರಲ್ಲಿ ಹಳ್ಳಿಗರ ಪರವಾಗಿ ಡಾ. ಬಾಬಾಸಾಹೇಬರಿಗೆ ಮತ್ತು ಇತರ ಶಾಸಕರಿಗೆ ಮಾಲಾರ್ಪಣೆ ಮಾಡಲಾಯಿತು. ಮುಂದೆ ಕುರ್ಕಮ ಹಳ್ಳಿಯ ಬಳಿ ವಾಹನ ಬರುತ್ತಿದಂತೆ ಊರಿನ ಅಸ್ಪಶ್ಯ ಸಮಾಜದವರು, ಸ್ವಯಂಸೇವಕ ದಳದವರು ಡಾಕ್ಟರ್ ಸಾಹೇಬರ ಸ್ವಾಗತಕ್ಕೆ ವಾದ್ಯವಾದನಗಳೊಂದಿಗೆ ಬಂದರು. ನೆರೆದವರು ಮೆರವಣಿಗೆಯಲ್ಲಿ ಶಾಮೀಲಾದರು. ಊರೊಳಗೆ ಮಹಾರ ಮತ್ತು ಮಾದಿಗ ಸಮಾಜದವರು ಮಂಟಪ ಹಾಕಿ ಬಾಬಾಸಾಹೇಬರ ಸ್ವಾಗತದ ಸಿದ್ಧತೆ ನಡೆಸಿದ್ದರು. ಕುರ್ಕಮ ಊರೊಳಗಿನಿಂದ ಮೆರವಣಿಗೆ ಹೊರಟ ನಂತರ ಬಾಬಾಸಾಹೇಬರ ವಾಹನ ಮತ್ತು ಸ್ವಯಂ ಸೇವಕರ ಬಸ್ಸು ಕುರ್ಕಮ ಹತ್ತಿರ ಬಾದಲಕೋಟ ಫಾರೆಸ್ಟ್‌ನಚಂದ್ರಭಾಗಾ ದಂಡೆಯಲ್ಲಿ ಒಣಭೂಮಿಯನ್ನು ನೋಡಲು ಹೊರಟಿತು.

ವಾಹನದಲ್ಲಿ ಶಾಸಕ ಗಾಯಕವಾಡ, ಐದಾಳೆ, ರೋಹಮ, ಸಾವಂತ ಮತ್ತು ಚಿತ್ರೆಯವರಿದ್ದರು. ಈ ಒಣಭೂಮಿಯು ಅಸ್ಪಶ್ಯ ಸಮುದಾಯದವರಿಗೆ ರಿಯಾಯಿತಿಯಲ್ಲಿ ದೊರಕಬೇಕೆಂಬ ಉದ್ದೇಶದಿಂದ ಶಾಸಕ ಐದಾಳೆಯವರು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಆ ಒಣ ಜಾಗ ತಲುಪಲು ಬಾಬಾಸಾಹೇಬರು 3 ಮೈಲು ಕಾಲ್ನಡಿಗೆ ಪ್ರವಾಸ ಕೈಕೊಂಡು ಪ್ರತ್ಯಕ್ಷ ವೀಕ್ಷಿಸಿದರು. ನದಿದಂಡೆಯಲ್ಲಿ ಗ್ರಾಮಸ್ಥರು ತಂದ ಅಲ್ಪೋಪಾಹಾರ ಮುಗಿಸಿ ಮರಳಿ ಕುರ್ಕಮ ಗ್ರಾಮಕ್ಕೆ ಆಗಮಿಸಿದರು. ಅಲ್ಲಿ ಗ್ರಾಮದ ಮಹಾರ ಸಮಾಜದವರು ವಿಶೇಷವಾಗಿ ನಿರ್ಮಿಸಿದ ಮಂಟಪದಲ್ಲಿ ಪ್ರೀತಿಯಿಂದ ಅವರನ್ನು ಸ್ವಾಗತಿಸಲಾಯಿತು. ಅವರನ್ನು ಎರಡು ಮಾತು ಹೇಳಲು ಕೋರಲಾಯಿತು. ತಾನು ಮಾತನಾಡುವುದೇನಿದೆಯೋ ಅದನ್ನು ಮಾದಿಗ ಸಮಾಜವು ಸ್ವಾಗತ ಕಾರ್ಯಕ್ರಮ ಹಮ್ಮಿಕೊಂಡಿದೆಯಲ್ಲ ಅಲ್ಲಿಯೇ ಹೇಳುವೆ ಎಂದು ಹೇಳಿದ ಬಾಬಾಸಾಹೇಬರು ಶಾಸಕ ಗಾಯಕವಾಡರಿಗೆ ಎರಡು ಮಾತಾಡಲು ಹೇಳಿದರು. ಬಳಿಕ ಭಾವುರಾವ್ ಗಾಯಕವಾಡರು ಸ್ವಲ್ಪ ಸಮಯದ ಸಮಯೋಚಿತ ಮಾತುಗಳನ್ನಾಡಿದರು. ಡಾಕ್ಟರ್ ಸಾಹೇಬರು ಎಲ್ಲರಿಗೂ ಸ್ವತಂತ್ರ ಮಜೂರ ಪಕ್ಷದ ಸದಸ್ಯರಾಗಲು ಹೇಳಿದ ಬಳಿಕ ಕಾರ್ಯಕ್ರಮ ಕೊನೆಗೊಂಡಿತು. ಆನಂತರ ಎಲ್ಲರೂ ಮಾದಿಗ ಸಮಾಜವು ನಿರ್ಮಿಸಿದ ವೇದಿಕೆಗೆ ಬಂದರು. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಾರ ಮತ್ತು ಮಾದಿಗ ಸಮಾಜದ ಸಮುದಾಯ ಸೇರಿತು.

ಡಾ. ಬಾಬಾಸಾಹೇಬರು ಪುಟ್ಟದಾದ ಭಾಷಣ ಮಾಡುತ್ತಾ ಹೇಳಿದರು:
ನಾಳೆ ಜನವರಿ 1, 1938ರಂದು ಸೊಲ್ಲಾಪುರದಲ್ಲಿ ಮಾದಿಗ ಸಮಾಜವು ಹಮ್ಮಿಕೊಂಡ ಪರಿಷತ್ತು ಸೇರುವುದಿದೆ. ಅಲ್ಲಿ ನನಗೆ ಆಮಂತ್ರಣವಿದ್ದು, ಸವಿಸ್ತಾರ ಮಾತನಾಡುವವನಿದ್ದೇನೆ. ಕೆಲವೇ ಮಾತುಗಳನ್ನು ಆಡಲು ಕಾರಣ ನಮ್ಮವರು ಕೆಲವರು ಪರಿಷತ್ತಿನಲ್ಲಿ ಉಪಸ್ಥಿತರಿರುತ್ತಾರೆ ಮತ್ತು ಕೆಲವರು ಅಲ್ಲಿ ಹೋಗದೆ ಇರುವವರೂ ಇರುವುದರಿಂದ ಅವರಿಗೆ ನನ್ನ ಅನಿಸಿಕೆಗಳನ್ನು ಹೇಳಬೇಕಿದೆ. ಮೊದಲಿಗೆ ಅಸ್ಪಶ್ಯ ಸಮುದಾಯಗಳ ಮಹಾರ, ಸಮಗಾರ, ಭಂಗಿ ಮುಂತಾದ ಜಾತಿಗಳಲ್ಲಿ ಒಗ್ಗಟ್ಟಿಲ್ಲದಿರುವುದು ನಮ್ಮೆಲ್ಲರ ದುರ್ದೈವವೇ ಹೌದು. ಈ ಒಗ್ಗಟ್ಟಿರದಿರುವುದಕ್ಕೆ ನಿಜವಾದ ಕಾರಣವೆಂದರೆ ಹಿಂದೂ ಸಮಾಜದೊಳಗಿನ ಜಾತಿಭೇದವೇ ಆಗಿದೆ. ಈ ಜಾತಿಭೇದಕ್ಕೆ ಮಹಾರ, ಸಮಗಾರ, ಮಾದಿಗರು ಇಲ್ಲವೆ ಭಂಗಿ ಸಮುದಾಯ ಹೊಣೆಗಾರರಲ್ಲ. ಜಾತಿಭೇದವು ಮೇಲಿಂದ ಹರಿಯುತ್ತಿರುವ ಗಟಾರಿನ ಗಂಗೆಯಾಗಿದೆ. ನಮ್ಮತ್ತ ಹರಿಯುತ್ತ ಬರುವ ನರಕವಾಗಿದೆ. ಆದ್ದರಿಂದ ಜಾತಿಭೇದದ ಕಹಿಫಲಗಳು ಮತ್ತದರ ದುಷ್ಪರಿಣಾಮಗಳನ್ನು ನಾವೇ ಅನುಭವಿಸಬೇಕಾಗುತ್ತಿದೆ. ಖೇದ ತರುವ ಸಂಗತಿಯೆಂದರೆ ಈ ಹಿಂದೂಗಳು ತಮ್ಮಿಳಗಿನ ಜಾತಿ ಭೇದವನ್ನಂತೂ ದೂರಮಾಡುವುದಿಲ್ಲ. ತಿರುಗಿ ಅಸ್ಪಶ್ಯರೊಳಗಿನ ಅಜ್ಞಾನದ ಲಾಭ ಪಡೆದು ಅವರ ಜಾತಿ ಭೇದವನ್ನು ದೃಢಗೊಳಿಸಲು ಗುದ್ದಾಡುತ್ತಾರೆ. ಮಾದಿಗರನ್ನು ಹೊಲೆಯರ ವಿರುದ್ಧ ಎತ್ತಿಕಟ್ಟುವುದು, ಸಮಗಾರರನ್ನು ಹೊಲೆಯ ಮಾದಿಗರ ವಿರುದ್ಧ ಎತ್ತಿಕಟ್ಟುವುದು, ತಮ್ಮ ಭೇದ ನೀತಿ ನಮ್ಮಿಳಗೆ ಹಬ್ಬಿಸುವುದು. ನಮಗೆ ಒಗ್ಗಟ್ಟಾಗಿರಲು ಬಿಡದೇ ಇರುವಂತೆ ನೋಡುವುದು.

ಈ ಜಾತಿಭೇದದ ಮೂಲ ಹೊಣೆ ಒಂದು ವೇಳೆ ಹಿಂದೂ ಸಮಾಜದ್ದಾಗಿದ್ದರೂ ನಾವು ನಮ್ಮ ಜವಾಬ್ದಾರಿಯನ್ನು ಮರೆತು ಹೋಗುವುದೆಂದರೆ ಅದು ಆತ್ಮಘಾತುಕವೇ ಸರಿ. ನಮ್ಮಲ್ಲಿಯ ಜಾತಿಭೇದವನ್ನು ಅಳಿಸಿಹಾಕುವುದು, ಅದು ಪಸರದಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಾವಿದನ್ನು ಸಾಧಿಸದೆ ನಮ್ಮ ಉನ್ನತಿಯಾಗುವುದಿಲ್ಲ. ಮಹಾರ, ಮಾದಿಗರ ನಡುವಿನ ಹೆಣ್ಣುಗಂಡು, ಊಟ ಉಪಾಹಾರದ ನಿಷೇಧಗಳು ಇಲ್ಲವಾಗಬೇಕು. ಪ್ರತಿಯೊಂದು ಜಾತಿಯು ಒಂದು ವೇಳೆ ಸೊಕ್ಕನ್ನು ಮೆರೆಯುವುದಕ್ಕಾಗಿ ತನ್ನ ಜಾತಿಗೆ ಅಂಟಿಕೊಂಡಿರಬಹುದು. ಮಹಾರ ಮಹಾರನಾಗಿಯೇ ಉಳಿಯಬಹುದು. ಮಾದಿಗ ಮಾದಿಗನಾಗಿಯೇ ಉಳಿದರೆ ನಮ್ಮ ಮೇಲಾಗುವ ದೌರ್ಜನ್ಯಕ್ಕೆ ಪ್ರತೀಕಾರ ಮಾಡುವುದು ಸಾಧ್ಯವಿಲ್ಲವಾಗುವುದು. ನಿಮಗೆ ಅಭಿಮಾನವೆನಿಸುವಂಥದ್ದು ಮಹಾರ ಮತ್ತು ಮಾದಿಗ ಹೆಸರಲ್ಲೇನಿದೆ? ಹಳೆಯ ಪರಂಪರೆಯಲ್ಲಿಯೇ ಮುಂದುವರಿಯಲು ನೀವು ಸಂಘರ್ಷ ಮಾಡುವಂತಾಗಲು ಈ ಹೆಸರಲ್ಲಿ ಅಂಥ ಉಜ್ವಲ ಇತಿಹಾಸವು ನಿಮ್ಮ ಕಣ್ಣೆದುರು ಇದೆಯೇ? ಸರ್ವ ಸಮಾಜಗಳು ಈ ಹೆಸರಲ್ಲಿ ತುಚ್ಛತೆಯನ್ನು ಕಾಣುತ್ತವೆ. ತಿಪ್ಪೆಯ ಮೇಲಿನ ಕಸದ ಕಿಮ್ಮತ್ತೂ ನಿಮಗಿಲ್ಲ; ಆಗ ಈ ಹೆಸರಿನ ಅಭಿಮಾನವನ್ನಿಟ್ಟುಕೊಳ್ಳದೆ ನಮ್ಮ ಎರಡೂ ಸಮುದಾಯಗಳು ಒಂದು ಒರಳುಗಲ್ಲಿನಲ್ಲಿ ಪುಡಿಪುಡಿಯಾಗುತ್ತಿವೆ ಎಂಬುದನ್ನು ಅರಿಯಬೇಕು.

ಎರಡೂ ಸಮಾಜ ಒಗ್ಗಟ್ಟಾಗಿರಬೇಕು. ಈ ವಿಷಯದಲ್ಲಿ ಮಹಾರ ಸಮಾಜದ ಮಟ್ಟಿಗೆ ಹೇಳುವುದಾದರೆ ಅವರು ಯಾವುದೇ ಜಾತಿಭೇದ ಎಣಿಸಲು ಸಿದ್ಧರಿಲ್ಲ. ಮಾದಿಗ, ಸಮಗಾರ, ಭಂಗಿ ಸಮುದಾಯಗಳ ಮಧ್ಯೆ ಹೆಣ್ಣು ಗಂಡು ಕೊಡುಕೊಳ್ಳುವಿಕೆ ನಡೆಸಲು ಸಿದ್ಧರಿದ್ದಾರೆ. ಒಂದು ವೇಳೆ ಮಹಾರರು ಈ ವಿಷಯದಲ್ಲಿ ಹಿಂದೆ ಮುಂದೆ ನೋಡತೊಡಗಿದರೆ ಅವರನ್ನು ಈ ಕಾರ್ಯಕ್ಕೆ ಹಚ್ಚುವಂತೆ ಮಾಡಲು ನಾನು ಹೊಣೆಯಿಂದ ನಡೆದುಕೊಳ್ಳುತ್ತೇನೆ. ಎರಡನೆಯ ವಿಚಾರವನ್ನು ನಿಮ್ಮೆದುರು ಇಡುವುದೆಂದರೆ ಕಾಂಗ್ರೆಸ್‌ನಿಂದ ದೂರ ಇರಬೇಕು. ಅದಕ್ಕೆ ಒಂದೇ ಕಾರಣವಿದೆ.

ಅದೇನೆಂದರೆ ಕಾಂಗ್ರೆಸ್ ಮಾಯೆಯ ಸೃಷ್ಟಿಯಾಗಿದೆ. ನನಗೆ ಒಂದು ಮಾತು ಹೇಳಿರಿ, ಗ್ರಾಮದೊಳಗಿನ ಮಾರವಾಡಿ ಇಲ್ಲವೆ ಸಾವುಕಾರರು 4 ಆಣೆಯ ಚಂದಾ ತುಂಬಿದರೆ ಇಲ್ಲವೆ ಗಾಂಧಿ ಟೊಪ್ಪಿಗೆ ತಲೆಮೇಲೆ ಇಟ್ಟುಕೊಂಡರೆ ಅವರ ಸ್ವಭಾವವನ್ನು ಮರೆವರೇ? ಅವರು ಬಡವನಿಂದ ಬಡ್ಡಿ ಕಿತ್ತುಕೊಳ್ಳದೆ ಇರುತ್ತಾರೆಯೇ? ನಿಮ್ಮ ಕತ್ತು ಕುಯ್ಯುವುದನ್ನು ಬಿಟ್ಟುಬಿಟ್ಟಾನೆಯೇ? ಇವತ್ತು ಕಾಂಗ್ರೆಸ್ ಹೇಳುತ್ತಿದೆ, ಸಾವುಕಾರನ ಹಿತವನ್ನು ಮತ್ತು ಬಡವರ ಹಿತವನ್ನೂ ಕಾಪಾಡುವವರಿದ್ದೇವೆ ಎಂದು. ಬೆಕ್ಕು ಮತ್ತು ಇಲಿಯನ್ನು ಒಂದೇ ಜಾಗದಲ್ಲಿ ಇಡುವವರು ಬೆಕ್ಕಿನ ಮುಂದೆ ಇಲಿಯನ್ನಿಟ್ಟು ಜೀವವನ್ನು ಹೇಗೆ ಉಳಿಸಿಯಾರು? ಇದನ್ನು ನೀವೇ ಅರಿಯಿರಿ, ಬೆಕ್ಕಿನ ಜೊತೆ ನಮ್ಮ ವ್ಯವಹಾರವಿಲ್ಲ. ಆದ್ದರಿಂದ ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಆ ಶಕ್ತಿ ವೃದ್ಧಿಸಲು, ನಮ್ಮ ಹಿತಕ್ಕೆ ಹುಟ್ಟಿದ ಸ್ವತಂತ ಮಜೂರ ಪಕ್ಷದ ಸದಸ್ಯರಾಗುವುದು ಒಳಿತು. ಈ ಪಕ್ಷ ಸೇರಲು ನೀವು ಕೇವಲ 4 ಆಣೆಯನ್ನು ವರ್ಷದ ಕೊನೆಗೆ ಕೊಡಬೇಕಾಗುವುದು. ಇಷ್ಟೆ ನಿಮಗೆ ಹೇಳುತ್ತಿದ್ದೇನೆ.
ಆಮೇಲೆ ಡಾಕ್ಟರ್ ಸಾಹೇಬರಿಗೆ ಮತ್ತು ಇತರರಿಗೆ ಮಾಲಾರ್ಪಣೆ ಪುಷ್ಪಗುಚ್ಛ ನೀಡಲಾಯಿತು, ಚಹಾಕೂಟದ ಬಳಿಕ ಪ್ರವಾಸ ಮಾಡುವವರೆಲ್ಲರು ಪಂಢರಪುರದತ್ತ ಸಾಗಿದರು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News