ನಿತ್ಯಾನಂದನ ಪಾಸ್ಪೋರ್ಟ್ ರದ್ದು, ಹೊಸ ಪಾಸ್ಪೋರ್ಟ್ ಅರ್ಜಿ ತಿರಸ್ಕೃತ: ಕೇಂದ್ರ ಸರಕಾರ
Update: 2019-12-07 18:06 GMT
ಹೊಸದಿಲ್ಲಿ, ಡಿ.7: ಸ್ವಯಂಘೋಷಿತ ದೇವಮಾನವ ನಿತ್ಯಾನಂದನ ಪಾಸ್ಪೋರ್ಟ್ ರದ್ದುಗೊಳಿಸಿದ್ದು ಹೊಸ ಪಾಸ್ಪೋರ್ಟ್ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ವಿದೇಶ ವ್ಯವಹಾರ ಸಚಿವಾಲಯ ತಿಳಿಸಿದೆ.
ನಿತ್ಯಾನಂದ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ವಿದೇಶದಲ್ಲಿರುವ ನಮ್ಮ ದೂತಾವಾಸ ಹಾಗೂ ಕಚೇರಿಗಳಿಗೆ ಮಾಹಿತಿ ನೀಡಿದ್ದು ಸ್ಥಳೀಯ ಸರಕಾರಗಳಿಗೆ ಈ ಮಾಹಿತಿ ತಲುಪಿಸಲು ಸೂಚಿಸಿದ್ದೇವೆ ಎಂದು ವಿದೇಶ ವ್ಯವಹಾರ ಇಲಾಖೆಯ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಕರ್ನಾಟಕದಲ್ಲಿ ನಿತ್ಯಾನಂದನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದ ಬಳಿಕ ಆತ ಪಾಸ್ಪೋರ್ಟ್ ಇಲ್ಲದೆಯೇ ದೇಶ ಬಿಟ್ಟು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಆತ ಇಕ್ವೆಡಾರ್ನಲ್ಲಿ ದ್ವೀಪ ಖರೀದಿಸಿ ಸ್ವಂತ ದೇಶವನ್ನು ನಿರ್ಮಿಸುವ ಸಿದ್ಧತೆಯಲ್ಲಿದ್ದಾನೆ ಎಂದೂ ಕೆಲವು ವರದಿ ತಿಳಿಸಿದೆ. ಆದರೆ ಇದನ್ನು ಇಕ್ವೆಡಾರ್ ತಳ್ಳಿಹಾಕಿದೆ.