ಬಿಜೆಪಿ ಆಡಳಿತದಲ್ಲಿ ಮಹಿಳೆಯರು ಸುರಕ್ಷಿತರಲ್ಲ: ಮಾಯಾವತಿ
ಲಕ್ನೋ, ಡಿ. 7: ಲಕ್ನೋದಲ್ಲಿ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಮೃತಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಸ್ಪಿಯ ಮುಖ್ಯಸ್ಥೆ ಮಾಯಾವತಿ, ‘‘ಕಳೆದ ಕೆಲವು ವರ್ಷಗಳಿಂದ ಹಾಗೂ ಮುಖ್ಯವಾಗಿ ಬಿಜೆಪಿ ಆಡಳಿತ ಅವಧಿಯಲ್ಲಿ ಮಹಿಳೆಯರು ಸುರಕ್ಷಿತರಾಗಿಲ್ಲ’’ ಎಂದು ಆರೋಪಿಸಿದ್ದಾರೆ.
‘‘ಉತ್ತರಪ್ರದೇಶದ ರಾಜ್ಯಪಾಲರು ಹೆಣ್ಣು. ಅವರಿಗೆ ಇತರ ಹೆಣ್ಣು ಮಕ್ಕಳ ನೋವು ಅರ್ಥವಾಗುತ್ತದೆ. ಮಹಿಳೆಯರ ವಿರುದ್ಧದ ಅಪರಾಧ ಘಟನೆಗಳನ್ನು ನಿಲ್ಲಿಸುವ ಸಾಂವಿಧಾನಿಕ ಬಾಧ್ಯತೆಯನ್ನು ಅವರು ಈಡೇರಿಸುವಂತೆ ಮನವಿ ಮಾಡುತ್ತೇನೆ’’ ಎಂದು ಮಾಯಾವತಿ ಹೇಳಿದರು.
ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಮೇಲಿನ ದಾಳಿ ಹಾಗೂ ಆಕೆಯ ಸಾವಿನ ಹಿನ್ನೆಲೆಯಲ್ಲಿ ಮಾಯಾವತಿ ಇಂದು ಉತ್ತರಪ್ರದೇಶದ ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ರಾಜ್ಯದಲ್ಲಿ ಮಹಿಳೆಯರಿಗೆ ಎದುರಾಗಿರುವ ಪರಿಸ್ಥಿತಿಯನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಬೇಕು. ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧವನ್ನು ತಡೆಗಟ್ಟಲು ಅವರು ಮುಖ್ಯಮಂತ್ರಿ ಹಾಗೂ ಪೊಲೀಸರೊಂದಿಗೆ ಸಭೆ ನಡೆಸಬೇಕು ಎಂದು ಮಾಯಾವತಿ ಹೇಳಿದರು.