ಸಂಸ್ಕೃತ ವಿಭಾಗಕ್ಕೆ ರಾಜೀನಾಮೆ ನೀಡಿ ಕಲಾ ವಿಭಾಗ ಸೇರಿಕೊಂಡ ಪ್ರೊಫೆಸರ್ ಫಿರೋಝ್ ಖಾನ್
ವಾರಣಾಸಿ: ಬನಾರಸ್ ಹಿಂದು ವಿಶ್ವವಿದ್ಯಾಲಯದ ಸಂಸ್ಕೃತ ವಿದ್ಯಾ ಧರ್ಮ ವಿಜ್ಞಾನ ವಿಭಾಗದ ತಮ್ಮ ಹುದ್ದೆಗೆ ಪ್ರೊಫೆಸರ್ ಫಿರೋಝ್ ಖಾನ್ ರಾಜೀನಾಮೆ ನೀಡಿ ಕೊನೆಗೂ ತಮ್ಮ ನೇಮಕಾತಿ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗಳಿಗೆ ಮಣಿದಿದ್ದಾರೆ. ಅವರೀಗ ವಿಶ್ವವಿದ್ಯಾಲದಯ ಕಲಾ ವಿಭಾಗಕ್ಕೆ ಸೇರ್ಪಡೆಗೊಂಡಿದ್ದು, ಅಲ್ಲಿ ಅವರು ಸಂಸ್ಕೃತ ಕಲಿಸಲಿದ್ದಾರೆ. ಫಿರೋಝ್ ಖಾನ್ ವಿರುದ್ಧ ಪ್ರತಿಭಟಿಸಿದವರಲ್ಲಿ ಎಬಿವಿಪಿಗೆ ಸೇರಿದವರೇ ಅಧಿಕವಾಗಿದ್ದರಲ್ಲದೆ ಹಿಂದು ಧರ್ಮೀಯರೊಬ್ಬರು ಮಾತ್ರ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕಲಿಸಬಹುದೆಂದು ಹೇಳಿಕೊಂಡಿದ್ದರು.
ಬನಾರಸ್ ಹಿಂದು ವಿವಿಯ ಆಡಳಿತ ಫಿರೋಝ್ ಖಾನ್ ಅವರ ಬೆಂಬಲಕ್ಕೆ ನಿಂತಿದ್ದರೂ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅವರಿಗೆ ತರಗತಿಗಳನ್ನು ನಡೆಸುವುದು ಅಸಾಧ್ಯವಾಗಿತ್ತು.
ಫಿರೋಝ್ ಖಾನ್ ಅವರು ಕಲಾ ವಿಭಾಗಕ್ಕೆ ಸೇರಿ ಅಲ್ಲಿ ಸಂಸ್ಕೃತ ಕಲಿಸಲಿದ್ದಾರೆಂಬುದನ್ನು ಸಂಸ್ಕೃತ ವಿದ್ಯಾ ಧರ್ಮ ವಿಜ್ಞಾನ ವಿಭಾಗದ ಡೀನ್ ಬಿಂದೇಶ್ವರಿ ಪ್ರಸಾದ್ ಮಿಶ್ರಾ ದೃಢೀಕರಿಸಿದ್ದಾರೆ.