ಕೇರಳ: ಮೊಬೈಲ್ ಕಳ್ಳನೆಂಬ ಶಂಕೆಯಲ್ಲಿ ಥಳಿಸಿ, ಖಾಸಗಿ ಭಾಗ ಸುಟ್ಟು ಯುವಕನನ್ನು ಕೊಂದ ಗುಂಪು
ತಿರುವನಂತಪುರಂ: ಮೊಬೈಲ್ ಫೋನ್ ಹಾಗೂ ಪರ್ಸ್ ಕದ್ದಿದ್ದಾನೆಂಬ ಶಂಕೆಯಿಂದ ಗುಂಪೊಂದು ಥಳಿಸಿದ ಪರಿಣಾಮ 30 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ನಗರದ ತಿರುವಲ್ಲೊಂ ಪ್ರದೇಶಲ್ಲಿ ನಡೆದ ಈ ಘಟನೆಯಲ್ಲಿ ಏಳು ಮಂದಿ ಆರೋಪಿಗಳು ಸಂತ್ರಸ್ತನ ಖಾಸಗಿ ಭಾಗವನ್ನು ಹರಿತವಾದ ಹಾಗೂ ಕಾದ ಆಯುಧ ಬಳಸಿ ಸುಟ್ಟು ಆತನಿಗೆ ಚಿತ್ರಹಿಂಸೆ ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ತಿರುವನಂತಪುರಂ ಮುಖ್ಯ ಬಸ್ ನಿಲ್ದಾಣದಲ್ಲಿ ಮಲಗಿದ್ದ ಒಬ್ಬ ವ್ಯಕ್ತಿಯ ಮೊಬೈಲ್ ಫೋನ್ ಹಾಗು ಪರ್ಸ್ ಕದ್ದಿದ್ದಾನೆಂಬ ಆರೋಪದ ಮೇಲೆ ಕೆಲ ಆಟೋರಿಕ್ಷಾ ಚಾಲಕರೂ ಸೇರಿದ್ದ ಜನರ ಗುಂಪು ಆತನಿಗೆ ಥಳಿಸಿತ್ತು.
ದಾಳಿಯಿಂದಾಗಿ ಸಂತ್ರಸ್ತನ ಗುಪ್ತಾಂಗಕ್ಕೆ ಶೇ 40ರಷ್ಟು ಸುಟ್ಟ ಗಾಯಗಳುಂಟಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವೀಡಿಯೋವನ್ನು ಯಾರೋ ದಾರಿಹೋಕರು ತೆಗೆದಿದ್ದು ಅದರ ಆಧಾರದಲ್ಲಿ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನಾಸೀರ್, ದಿನೇಶ್ ವರ್ಗೀಸ್, ಅರುಣ್, ಸಜನ್ ಹಾಗೂ ರಾಬಿನ್ಸನ್ ಎಂದು ಗುರುತಿಸಲಾಗಿದೆ.