ಕನ್ನಡ, ಸಂಸ್ಕೃತ, ಶಾಸ್ತ್ರೀಯತೆ ಮತ್ತು ಶೆಲ್ಡನ್ ಪೊಲಾಕ್

Update: 2020-01-01 18:02 GMT
ಶೆಲ್ಡನ್ ಪೊಲಾಕ್

ಸಂಸ್ಕೃತ ಭಾಷೆ ಬೆಂಗಾಳಿ ಭಾಷೆಯೊಂದಿಗೆ ಹೆಚ್ಚು ಗೆಳೆತನ ಹೊಂದಿದೆ, ಹಾಗೆಯೇ ಮಲೆಯಾಳಂ ಜೊತೆಗೂ ಕೂಡ. ಕೆಲವು ಭಾಷೆಗಳ ಜೊತೆ ಕಡಿಮೆ ಗೆಳೆತನ ಹೊಂದಿದೆ. ಇದನ್ನು ಗೆಳೆತನದ ಸಂಬಂಧವಾಗಿ ನೋಡಬೇಕೆ ಹೊರತು ಪರಸ್ಪರ ದ್ವೇಷದ ಸಂಬಂಧವಾಗಿ ಅಲ್ಲ.

          ವಿಕ್ರಮ ವಿಸಾಜಿ

ಕಲಬುರಗಿಯ ಗುಲ್ಬರ್ಗ ವಿಶ್ವವಿದ್ಯಾನಿಲಯದಿಂದ ಸ್ನಾತಕೊಕಲಬರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿರುವ ವಿಕ್ರಮ ವಿಸಾಜಿ ಅವರು ಕವಿ-ವಿಮರ್ಶಕ. ಕಲಬುರಗಿಯ ಗುಲ್ಬರ್ಗ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ (ಎಂ.ಎ) ಪದವಿ ಪಡೆದ ಅವರು ಕಂಬಾರರ ಕಾವ್ಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ.

ಅದು ಜನವರಿಯ ಚುರುಗುಟ್ಟುವ ಚಳಿ. ಜೈಪುರ ಸಾಹಿತ್ಯೋತ್ಸವದ ಇಂಥ ಚಳಿಯಲ್ಲಿ ಶೆಲ್ಡನ್ ಪೊಲಾಕ್ ತಮ್ಮ ಕಾಫಿ ಪ್ಲಾಸ್ಕ್ ಹಿಡಿದುಕೊಂಡು ನಿಂತಿದ್ದರು. ತಮ್ಮ ಒಡನಾಡಿಗಳ ಜೊತೆ ಮಾತಾಡುತ್ತ, ನಡುನಡುವೆ ಕಾಫಿ ಗುಟುಕರಿಸುತ್ತ ಹರಟುತ್ತಿದ್ದರು. ಬಹುಶ: ತಮಗೆ ಎದುರಾದ ಹಿಂದಿ ಪ್ರಾಧ್ಯಾಪಕರನ್ನು ಕಂಡು ಓ ರಸಿಕಾ ಕೈಸೆ ಹೈಂ ಆಪ್ ಎಂದು ಕೈ ಕುಲುಕಿ ರಸ ಎಲ್ಲಿ ಅಂತ ಕಣ್ಣು ಮಿಟುಕಿಸಿದರು. ದಟ್ಟ ಗಡ್ಡ, ಕೆದರಿದ ಕೂದಲು, ದೊಗಳೆ ಕೋಟು, ಬಗಲ ಚೀಲ ಜೊತೆಗೆ ದೊಡ್ಡ ನಗು ಅವರನ್ನು ಥೇಟ್ ಕಿಂದರಜೋಗಿಯಂತೆ ಮಾಡಿತ್ತು. ಅಷ್ಟರಲ್ಲಿ ಗಿರೀಶ್ ಕಾರ್ನಾಡ್ ಬಂದು ಹಾಯ್ ಶೆಲ್ಲಿ ಎಂದು ತಬ್ಬಿಕೊಂಡರು. ಪೊಲಾಕ್ ಅಂತ ಕರೆಯುವುದು ನನಗೆ ಕಷ್ಟ ಅದಕ್ಕೆ ಶೆಲ್ಲಿ ಎನ್ನುವೆ ಅಂತ ಪಕ್ಕದಲ್ಲಿದ್ದವರಿಗೆ ಹೇಳುತ್ತಿದ್ದರು. ನಾನು ಮತ್ತು ಗೆಳೆಯ ಮಹೇಂದ್ರ ಇಬ್ಬರೂ ಶೆಲ್ಡನ್ ಪೊಲಾಕ್‌ರನ್ನು ಮಾತಾಡಿಸಬೇಕೆಂದು ಹೋದವರು ಆ ಗದ್ದಲದಲ್ಲಿ ಮಾತಾಡಲಾಗದೆ ವಾಪಾಸು ಬಂದು ಕುಳಿತೆವು. ಅಷ್ಟರಲ್ಲಿ ಶೆಲ್ಡನ್ ಪೊಲಾಕ್, ಆರ್ಷಿಯಾ ಸತ್ತಾರ್, ಗಿರೀಶ್ ಕಾರ್ನಾಡರ ಗೋಷ್ಠಿ ಶುರುವಿಟ್ಟಿತು. ಅದು ಮೂರ್ತಿ ಕ್ಲಾಸಿಕಲ್ ಲೈಬ್ರರಿಯ ಪ್ರಕಟಣೆಗಳ ಕುರಿತಾಗಿತ್ತು. ಭಾರತದ ಪ್ರಾಚೀನ ಪಠ್ಯಗಳನ್ನು ಕೊಲಂಬಿಯಾ ವಿಶ್ವವಿದ್ಯಾನಿಲಯದೊಂದಿಗೆ ಕೂಡಿಕೊಂಡು ಪ್ರಕಟಿಸುವ ಯೋಜನೆ. ಈ ಮಾಲಿಕೆಯಲ್ಲಿ ಬಂದ ಐದು ಕೃತಿಗಳು ಅಲ್ಲಿದ್ದವು. ಒಂದು ಗಂಟೆಯ ಗೋಷ್ಠಿಯಲ್ಲಿ ಶೆಲ್ಡನ್ ಪೊಲಾಕ್ ನಿರುಮ್ಮಳವಾಗಿ ಸಂಸ್ಕೃತದ ಕೆಲ ಶ್ಲೋಕಗಳನ್ನು ಉದ್ಧರಿಸುತ್ತ, ಕವಿರಾಜಮಾರ್ಗವನ್ನು ನೆನಪಿಸಿಕೊಂಡು, ಒಳನೋಟಗಳಿಂದ ಕೂಡಿದ ವಿಚಾರಗಳನ್ನು ಸಭೆಯ ಎದುರಿಗಿಟ್ಟರು. ಅವರ ನೆನಪಿನ ಶಕ್ತಿ, ಲವಲವಿಕೆಯ ಉತ್ತರಗಳಿಗೆ ಸಭೆ ಹಿತವಾಗಿ ಸ್ಪಂದಿಸುತಿತ್ತು. ಸಭೆ ಶೆಲ್ಡನ್ ಪೊಲಾಕ್‌ರತ್ತ ವಾಲುತ್ತಿರುವುದು ಹಾಗೂ ತನ್ನ ಪ್ರಶ್ನೆಗಳಿಗೆ ಲೀಲಾಜಾಲವಾಗಿ ಉತ್ತರಿಸುತ್ತಿರುವುದನ್ನು ಕಂಡ ಕಾರ್ನಾಡರು ಕೊನೆಯಲ್ಲೊಂದು ಇಕ್ಕಟ್ಟಿನ ಪ್ರಶ್ನೆ ಎಸೆದರು; ನಿಮ್ಮ ಒಟ್ಟು ಕಲ್ಪನೆ ಭಾರತದ ಒಂದು ವರ್ಗದ ಗತಕಾಲದ ಯೋಜನೆಗಳಿಗೆ ಪೂರಕವಾಗಿದೆಯಲ್ಲವೇ? ಗತವನ್ನು ವೈಭವೀಕರಿಸುವ ಕಲ್ಪನೆಗೆ ನಿಮ್ಮ ಯೋಜನೆ ಹತ್ತಿರವಾಗಿರುವಂತಿದೆ? ಎಂದು ಹುಬ್ಬೇರಿಸಿ ಪೊಲಾಕ್‌ರ ಕಡೆ ನೋಡಿದರು. ವೆಲ್ ಎಂದು ನಿಟ್ಟುಸಿರು ಬಿಟ್ಟ ಶೆಲ್ಡನ್ ಪೊಲಾಕ್ ನಾನು ಮತ್ತು ನನ್ನ ಸಂಗಾತಿಗಳು ಹುಡುಕುತ್ತಿರುವುದು ಒಂದು ಬೌದ್ಧಿಕ ಚಿಂತನೆಯ ಚರಿತ್ರೆ. ನಾನು ಬರೀ ಸಂಸ್ಕೃತದ ಬಗೆಗೆ ಮಾತ್ರ ಆಸಕ್ತನಾಗಿಲ್ಲ. ಪ್ರಾಕೃತ, ಕನ್ನಡ, ತಮಿಳು, ಹಿಂದಿ, ಉರ್ದು ಹೀಗೆ ಯಾವ ಭಾಷೆಯ ಶಾಸ್ತ್ರೀಯ ಕೃತಿಯಾದರೂ ಸರಿ ಅದು ನಮ್ಮ ಪ್ರಕಟಣೆಯಲ್ಲಿ ಸೇರುತ್ತದೆ. ನೋಡಿ ತೇರಿಗಾಥಾ ಪ್ರಕಟಿಸಿದ್ದೇವೆ. ಮಹಿಳೆಯರೆ ಬರೆದ ಪದ್ಯಗಳವು. ಅವು ಎಂಥ ಪದ್ಯಗಳೆಂಬುದು ನಿಮಗೆ ಗೊತ್ತೇ ಇದೆ. ಪರಸ್ಪರ ವಾಗ್ವಾದಗಳು, ತಾತ್ವಿಕ ಜಗಳಗಳು ಪ್ರಾಚೀನ ಪಠ್ಯಗಳಲ್ಲಿ ಸೇರಿಕೊಂಡಿವೆ. ಭಾರತದ ಬೌದ್ಧಿಕ ಚರಿತ್ರೆ ಮುಖ್ಯವಾದದ್ದು. ಇಲ್ಲಿ ಒಮ್ಮುಖತೆ ಇಲ್ಲ. ಯಾರಾದರೂ ಇದನ್ನು ವೈಭವೀಕರಿಸ ಹೊರಟರೆ ಪಕ್ಕದ ಪಠ್ಯವೊಂದು ಈ ವೈಭವೀಕರಣದ ನಶ್ವರತೆಯನ್ನು ಸೂಚಿಸುತ್ತಿರುತ್ತದೆ ಎಂದು ಹುಬ್ಬೇರಿಸಿ ತಿರುಗಿ ಕಾರ್ನಾಡರತ್ತ ನೋಡಿದರು. ಸಭೆೆ ಮತ್ತೆ ದೊಡ್ಡ ಚಪ್ಪಾಳೆಯೊಂದಿಗೆ ಅವರ ಉತ್ತರವನ್ನು ಸ್ವಾಗತಿಸಿತ್ತು.

ಶೆಲ್ಡನ್ ಪೊಲಾಕ್ ಗೋಷ್ಠಿ ಮುಗಿಸಿ ಕೆಳಗೆ ಬಂದಾಗ ಎದುರಿಗೆ ಎಸ್ತರ್ ಅನಂತಮೂರ್ತಿ ನಿಂತಿದ್ದರು. ಅವರನ್ನು ಸಂತೈಸಿ ಅನಂತಮೂರ್ತಿಯವರ ಸಾವಿಗೆ ತಮ್ಮ ದುಃಖ ಸೂಚಿಸಿದರು. ಅವರು ಒಬ್ಬರೇ ಪುಸ್ತಕದಂಗಡಿಗೆ ಹೊರಡುತ್ತಿರುವಾಗ ನಾನು ಮತ್ತು ಮಹೇಂದ್ರ ಹಿಂಬಾಲಿಸಿ ಅವರ ಕ್ರೈಸಿಸ್ ಇನ್ ದಿ ಕ್ಲಾಸಿಕ್ಸ್ ಲೇಖನ ಓದಿರುವುದಾಗಿಯೂ ಅದು ಮುಖ್ಯ ಒಳನೋಟಗಳಿಂದ ಕೂಡಿದೆ ಎಂದೆವು. ನಮ್ಮ ಮೆಚ್ಚುಗೆಯಲ್ಲಿ ಅವರನ್ನು ಮಾತಿಗೆಳೆಯುವ ಉಮೇದೂ ಇತ್ತು. ಡಿ.ಆರ್.ನಾಗರಾಜರಿಂದ ಹಿಡಿದು ಪೃಥ್ವಿದತ್ತ ಚಂದ್ರಶೋಭಿವರೆಗೆ ಅವರಿಗೆ ಗೊತ್ತಿರುವ ಎಲ್ಲರ ಹೆಸರು ಹೇಳಿ ಒಂದು ಆತ್ಮೀಯತೆ ಕುದುರುವುದೆ ಅಂತ ಕಣ್ಣುಬಿಟ್ಟು ನಿಂತೆವು. ಆದರೆ ಆಸಾಮಿ ಜಪ್ಪೆನ್ನಲಿಲ್ಲ. ಕಾಫಿಪ್ಲಾಸ್ಕಿನ ಮೇಲೆಯೇ ಅವರ ಆಸಕ್ತಿ ಹೆಚ್ಚಿದ್ದಂತೆ ಕಾಣುತಿತ್ತು. ಒಮ್ಮೆ ನೇರವಾಗಿ ಕೇಳಿಯೇ ಬಿಡೋಣವೆಂದು ಸರ್ ನಿಮಗೆ ಕೆಲ ಪ್ರಶ್ನೆಗಳನ್ನು ಕೇಳಬೇಕಾಗಿದೆ? ನಿಮ್ಮ ಕೂಡ ಒಂದು ಚರ್ಚೆ ಸಾಧ್ಯವೇ? ಎಂದೆವು. ಓಹೊ ಅದಕ್ಕೇನಂತೆ ಬನ್ನಿ ಅಂತ ಪತ್ರಕರ್ತರ ಗ್ಯಾಲರಿಗೆ ಕರೆದುಕೊಂಡು ಹೋದರು. ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವ ನಮ್ಮ ನಡೆ ನಮಗೇ ನಾಚಿಕೆ ತರಿಸಿತ್ತು. ನಡುದಾರಿಯಲ್ಲಿ ಕನ್ನಡ, ಕರ್ನಾಟಕ, ಅಲ್ಲಿನ ಹೊಸ ಯೋಜನೆಗಳು ಇತ್ಯಾದಿಗಳ ಬಗ್ಗೆ ಚುಟುಕಾಗಿ ವಿಚಾರಿಸಿದರು. ಆ ಜನಜಂಗುಳಿಯಲ್ಲಿ ಅವರು ಚಿಕ್ಕ ಹುಡುಗನಂತೆ ದಾರಿ ಮಾಡಿಕೊಳ್ಳುತ್ತ ಪತ್ರಕರ್ತರ ಗ್ಯಾಲರಿಗೆ ಕರೆದುಕೊಂಡು ಬಂದರು.

ಭಾರತೀಯ ಕ್ಲಾಸಿಕಲ್ ಪಠ್ಯಗಳ ಕುರಿತು ಶೆಲ್ಡನ್ ಪೊಲಾಕ್‌ರಿಗಿರುವ ಪ್ರೀತಿ, ಅಧ್ಯಯನ ಎಲ್ಲರಿಗೂ ಗೊತ್ತಿರುವಂಥದ್ದೆ. ಈ ಕುರಿತು ಅವರ ಅಭಿಪ್ರಾಯ ಕೇಳಬಯಸಿದೆ. ಭಾರತೀಯ ಕಾವ್ಯಮೀಮಾಂಸೆ, ಭರತನ ನಾಟ್ಯಶಾಸ್ತ್ರ ಇವುಗಳ ಕುರಿತು ನೀವು ನಿಮ್ಮ ಬರಹಗಳಲ್ಲಿ ಸೂಕ್ಷ್ಮ ಟಿಪ್ಪಣಿಗಳನ್ನು ಮಂಡಿಸಿರುವಿರಿ. ಈಗ ಭಾರತದ ಹಲವು ಭಾಷೆಗಳು ತಮ್ಮದೇ ಕಾವ್ಯಮೀಮಾಂಸೆಯ ಹುಡುಕಾಟದಲ್ಲಿ ತೊಡಗಿವೆ? ಎಂದೆ.

ಹಾಗಾಗಿದ್ದು ಒಳ್ಳೆಯದೆ. ಇದು ಆಗಲೇಬೇಕಾದ ಕ್ರಮ. ನಾನು ಅಧ್ಯಯನ ಆರಂಭಿಸಿದಾಗ ಭಾರತೀಯ ಕಾವ್ಯಮೀಮಾಂಸೆಯ ಈ ರಸದ ಪರಿಕಲ್ಪನೆ ನನ್ನ ಆಸಕ್ತಿಯ ಕ್ಷೇತ್ರಗಳಲ್ಲೊಂದಾಗಿತ್ತು. ಹಲವರಂತೆ ನನಗೂ ಕೂಡ ಭಾರತೀಯ ಸೌಂದರ್ಯಶಾಸ್ತ್ರದ ಬೌದ್ಧಿಕ ಚರಿತ್ರೆಯನ್ನು ಮರುಕಟ್ಟುವ ಹಂಬಲವಿತ್ತು. ವಾಲ್ಮೀಕಿ ಎರಡು ಪಕ್ಷಿಗಳ ಹೃದಯವಿದ್ರಾವಕ ದುರಂತವನ್ನು ಮೊದಲ ಬಾರಿಗೆ ಅಭಿವ್ಯಕ್ತಿಸಿದ. ದು:ಖದ ಅಭಿವ್ಯಕ್ತಿಗಾಗಿ ಭಾಷೆಯನ್ನು ಉತ್ಕೃಷ್ಟ ಮಟ್ಟದಲ್ಲಿ ಹದಗೊಳಿಸಿದ. ಭಾಷೆಯ ಹೊಸ ಪರಿಕ್ರಮವೊಂದನ್ನು ಸ್ಥಾಪಿಸಿದ. ಮುಂದೆ ಶೋಕ ಕಾವ್ಯಾಭಿವ್ಯಕ್ತಿಯ ಒಂದು ಮೂಲ ಸ್ರೋತವಾಗಿ ಬಿಟ್ಟಿತು. ವಾಲ್ಮೀಕಿ ಒಂದು ರಸ ಸಾಧ್ಯತೆಯನ್ನಿಲ್ಲಿ ಕಾಣಿಸಿದ್ದಾನೆ. ಶೋಕದ ಅಭಿವ್ಯಕ್ತಿ ರೂಪಕ ಪ್ರತಿಮೆಗಳಲ್ಲಿ ಉದ್ದಕ್ಕೂ ಮೈಚಾಚಿಕೊಂಡು ನಿಂತಿದೆ. ನೋಡುಗನಲ್ಲಿ ರಸಗಳಿರುತ್ತವೆ. ಪಠ್ಯದ ರಸಗಳು ಅವನಲ್ಲಿಯ ರಸಗಳನ್ನು ಉದ್ದೀಪಿಸುತ್ತವೆ. ಪಾತ್ರದ ರಸ, ನಟನರಸವಾಗಿ ಕೊನೆಗೆ ನೋಡುಗನ ರಸವಾಗಿ ಪರಿವರ್ತಿತವಾಗುತ್ತದೆ. ಇದಕ್ಕಾಗಿ ಪಠ್ಯಗಳು ಮಾಡುವ ಸಾಹಸಗಳನ್ನು ಓದಿಯೇ ಅನುಭವಿಸಬೇಕು. ಚೈತನ್ಯ ಸಂಪ್ರದಾಯದಲ್ಲಿ ಕೃಷ್ಣಭಕ್ತಿ ರಸವಾಗಿ ಹರಿದಾಡುತ್ತಿರುತ್ತದೆ. ರಸದ ಕುರಿತಾದ ಶ್ರೇಷ್ಠ ಮಟ್ಟದ ಬೌದ್ಧಿಕ ಚರ್ಚೆಗಳನ್ನು ಜಗತ್ತಿಗೆ ಭಾರತ ಕೊಟ್ಟಿದೆ. ರಸದ ಪರಿಕಲ್ಪನೆಗಳಾಚೆಯ ಚರ್ಚೆಗೂ ನಾನು ಹೊರಳಿಕೊಂಡೆ. ಎಂದರು. ಮುಂದುವರಿದು ಪ್ರಾಚೀನ ಪಠ್ಯಗಳ ಕಾವ್ಯ ಭಾಷೆ ಅಲಂಕಾರ ವಕ್ರೋಕ್ತಿಗಳನ್ನು ಹೆಚ್ಚು ನಂಬಿದೆ. ಪ್ರೇಮದಲ್ಲಿ ಕಾವ್ಯ ಬೆಳದಿಂಗಳಾಗಿ, ಹಂಸೆಗಳಾಗಿ, ನದಿ, ಕಾಡು, ಮರ, ಹೂಗಳಾಗಿ ತೆರೆದುಕೊಳ್ಳುತ್ತದೆ. ಒಟ್ಟು ಲೆಕ್ಕ ಹಾಕಿದರೂ ಪ್ರೇಮದ ರೂಪಕಗಳನ್ನು ನಾಲ್ಕೈದು ಮೂಲ ರೂಪಕಗಳಿಗೆ ತಂದು ನಿಲ್ಲಿಸಬಹುದು. ಈ ನಾಲ್ಕೈದು ರೂಪಕಗಳಿಂದ ಹಲವಾರು ರೂಪಕಗಳು ಬೆಳೆದಿವೆ. ಶೃಂಗಾರವು ಒಂದು ದೈಹಿಕಕ್ರಿಯೆಯಾಗಿ, ಮಾನಸಿಕಕ್ರಿಯೆಯಾಗಿ ವಿಕಸಿತಗೊಳ್ಳುವ ರೀತಿಯನ್ನು ಗಮನಿಸಬೇಕು. ವರ್ಣನೆ ಭಾರತೀಯ ಕವಿಗಳಿಗೆ ಬಹುಪ್ರಿಯವಾದ ಸಂಗತಿ. ಎಂಬುದು ಅವರ ಮತವಾಗಿತ್ತು.

ಇನ್ನು ಭರತನ ಕುರಿತು ಹೇಳತೊಡಗಿದರು. ಭರತನ ನಾಟ್ಯಶಾಸ್ತ್ರ ಮಹತ್ವದ ಕೃತಿ. ಅವನು ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದ. ಜನ ಬಾವನಾತ್ಮಕವಾಗಿ ನಾಟಕಗಳಿಗೆ ಸ್ಪಂದಿಸುವಂತೆ ಮಾಡುವುದು ಹೇಗೆ? ಅವರು ದಿನನಿತ್ಯದ ಗೊಂದಲಗಳಲ್ಲಿ ಮುಳುಗಿರುತ್ತಾರೆ. ಇದನ್ನು ಬಿಡಿಸಿಕೊಂಡು ಅವರು ನಾಟಕದಲ್ಲಿ ತಲ್ಲೀನರಾಗುವಂತೆ ಮಾಡಬೇಕು. ಅಭಿನಯ, ಆಂಗಿಕ ಚಲನೆ, ಅಳು, ನಗು ಇವುಗಳ ನಟನೆ ಹೇಗೆ? ಪಾತ್ರದ ಭಾವ ಪ್ರೇಕ್ಷಕ ಭಾವವಾಗುವ ಬಗೆ ಹೇಗೆ? ಕಲೆಯ ಮೂಲಭೂತ ಪ್ರಶ್ನೆಗಳಿಗೆ ಬೌದ್ಧಿಕ ಉತ್ತರಗಳನ್ನಾತ ಅರಸುತ್ತಿದ್ದ. ಅವನದು ಶ್ರೇಷ್ಠ ದರ್ಜೆಯ ಸ್ಕಾಲರ್‌ಶಿಪ್.

ಶಾಸ್ತ್ರೀಯ ಪಠ್ಯಗಳ ಪ್ರಕಟಣೆಯ ಐಡಿಯಾ ಬಂದದ್ದು ಹೇಗೆ? ಮತ್ತು ಯಾಕೆ? ಅಂದೆ. ಒಟ್ಟಿನಲ್ಲಿ ನನಗೆ ಪ್ರಶ್ನೆ ಕೇಳುವ ಆತುರ. ಎರಡೂ ತುಟಿಗಳನ್ನು ಅದುಮಿ ಸಡಿಲಿಸಿ ಮಾತಿಗಿಳಿದರು ಶೆಲ್ಡನ್ ಪೊಲಾಕ್. ಈ ಮೊದಲು ಕ್ಲೇ ಸಂಸ್ಕೃತ ಲೈಬ್ರರಿಯಲ್ಲಿ ಹಲವು ಕೃತಿಗಳನ್ನು ಪ್ರಕಟಿಸಿದ್ದೆವು. ಆದರೆ ಅವು ಭಾರತೀಯರಿಗೆ ಸಿಗುವುದು ಕಷ್ಟ ಅಲ್ಲದೆ ದುಬಾರಿ ಬೆಲೆ ಕೂಡ. ನಡುವೆ ಅದಕ್ಕೆ ಹಣಕಾಸಿನ ಸಹಾಯ ನಿಂತುಹೋಯಿತು. ಈಗ ಅಂಥದ್ದೆ ಮತ್ತೊಂದು ಸಿರೀಸ್ ಶುರು ಮಾಡಿದ್ದೇವೆ. ಬೆಲೆ ಕೂಡ ತುಂಬಾ ಕಮ್ಮಿ. ಜಗತ್ತಿನೆಲ್ಲೆಡೆ ಸುಲಭ ಲಭ್ಯ ಕೂಡ. ಜನರಿಗೆ ತಮ್ಮ ಶ್ರೇಷ್ಠ ಸಾಹಿತ್ಯ ಪರಂಪರೆ ಗೊತ್ತಾಗಬೇಕು. ಜಗತ್ತಿಗೆ ಎಲ್ಲಾ ಭಾಷೆಯ ಶ್ರೇಷ್ಠ ಸಾಹಿತ್ಯ ಪರಂಪರೆ ದಕ್ಕಬೇಕು. ಅಂಥದ್ದೊಂದು ಪ್ರೇರಣೆಯ ಹಿನ್ನೆಲೆಯಲ್ಲಿ ಇದನ್ನು ಆಗುಮಾಡಲಾಗಿದೆ ಎಂದರು. ಅವರ ಇಂಥ ಕೆಲಸಕ್ಕೆ ಇನ್ನಷ್ಟು ಗಂಭೀರ ಉದ್ದೇಶಗಳಿದ್ದದ್ದು ಸ್ಪಷ್ಟವಾಗತೊಡಗಿತು. ತಲೆ ಕೆದರಿಕೊಳ್ಳುತ್ತ ಮತ್ತೆ ನೆನಪು ಮಾಡಿಕೊಳ್ಳತೊಡಗಿದರು. ಗ್ರೀಸಿಗೆ ಭೌಗೋಳಿಕ ಸೀಮೆಗಳಿರಬಹುದು, ಚೈನಾಕ್ಕೆ ಭೌಗೋಳಿಕ ಸೀಮೆಗಳಿರಬಹುದು, ಭಾರತಕ್ಕೂ ಭೌಗೋಳಿಕ ಸೀಮೆಗಳಿರಬಹುದು. ಆದರೆ ಅವುಗಳ ಸಾಂಸ್ಕೃತಿಕ ಸೀಮೆಗಳೆಲ್ಲಿವೆ? ಅವುಗಳ ಶ್ರೇಷ್ಠ ಪಠ್ಯಗಳಿಗೆ ಸೀಮೆಗಳೆಲ್ಲಿವೆ? ಭೌಗೋಳಿಕ ಸರಹದ್ದುಗಳ ಚರ್ಚೆ ರಾಜಕಾರಣಿಗಳಿಗಿರಲಿ, ನಾವು ಸಾಂಸ್ಕೃತಿಕ ಸರಹದ್ದುಗಳನ್ನು ಚಲನಶೀಲವಾಗಿಸೋಣ. ಹಲವು ಜಗತ್ತುಗಳನ್ನು ಅರ್ಥಮಾಡಿಕೊಳ್ಳುವ ದಾರಿಯಿದು ಅಂತ ಒಂದು ಕ್ಷಣ ಸುಮ್ಮನಾದರು. ಭಾಷೆಯೊಳಗಿನ ಚಿಂತನೆಗಳ ದೋಷವನ್ನು ಟೀಕಿಸುವ ಮಾದರಿ ಒಪ್ಪುತ್ತಿದ್ದ ಶೆಲ್ಡನ್ ಪೊಲಾಕ್ ಯಾವುದೇ ಭಾಷೆಯ ಸಾರಾಸಗಟಾದ ತಿರಸ್ಕಾರವನ್ನು ಒಪ್ಪುತ್ತಿರಲಿಲ್ಲ. ಯಾವುದೇ ಭಾಷೆಯನ್ನು ದ್ವೇಷಿಸುವುದರ ಅಪಾಯವನ್ನವರು ಅರಿತಿದ್ದರು. ಭಾಷೆಯನ್ನು ಅದರ ಜನಪ್ರಿಯ ನಿಲುವುಗಳಾಚೆ ನೋಡುವ ಕ್ರಮಗಳನ್ನು ಅವರು ಹುಡುಕುತ್ತಿದ್ದರೆನಿಸುತ್ತದೆ. ಇದು ಅವರ ಮಾತಿನಲ್ಲಿ ಪದೇ ಪದೇ ವ್ಯಕ್ತವಾಗುತಿತ್ತು.

ಯಾವುದೇ ಶಾಸ್ತ್ರೀಯ ಪಠ್ಯಗಳ ಅಧ್ಯಯನಕ್ಕೆ ಶಿಸ್ತು, ಶ್ರದ್ಧೆ, ತಾಳ್ಮೆ ಬೇಕು. ನಾನು ಪಂಡಿತ ಪದ್ಮನಾಭಶಾಸ್ತ್ರಿಗಳಿಂದ ಸಂಸ್ಕೃತ ಕಲಿತಿರುವೆ. ಪ್ರೊ.ವೆಂಕಟಾಚಲಶಾಸ್ತ್ರಿಗಳಿಂದ ಕನ್ನಡ ಪಠ್ಯಗಳನ್ನು ಅಧ್ಯಯನ ಮಾಡಿರುವೆ. ಎ.ಕೆ.ರಾಮಾನುಜನ್, ಡಿ.ಆರ್.ನಾಗರಾಜ ಅವರಿಂದ ಸಾಕಷ್ಟು ಕಲಿತಿರುವೆ. ದೇವನೂರ ಮಹಾದೇವರ ಕುಸುಮಬಾಲೆ ಶ್ರೇಷ್ಠ ಪಠ್ಯ. ಅದರ ಭಾಷೆಯ ಸಾಧ್ಯತೆಗಳಿಂದಲೂ ನಾನು ಕನ್ನಡದ ಕುರಿತು ಕಲ್ಪಿಸಿಕೊಳ್ಳಬಲ್ಲೆ. ಡಾ.ಬಿ.ಆರ್.ಅಂಬೇಡ್ಕರ್ ಕೊಲಂಬಿಯಾ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ತಮ್ಮ ಥೀಸಿಸ್‌ನಲ್ಲಿ ಮೊದಲಿಗೆ ಸಂಸ್ಕೃತದ ಶ್ಲೋಕವೊಂದನ್ನು ಉಲ್ಲೇಖಿಸಿದ್ದಾರೆ. ಸಂಸ್ಕೃತ ಭಾಷೆಯಲ್ಲಿನ ಚಿಂತನೆಗಳ ಕಟು ಟೀಕಾಕಾರರಾಗಿದ್ದ ಅವರು ಸಂಸ್ಕೃತವನ್ನು ಚೆನ್ನಾಗಿ ಓದಿಕೊಂಡಿದ್ದರು. ನೋಡಿ ಹೆಚ್ಚೆಚ್ಚು ದಲಿತರು ವಿದೇಶಕ್ಕೆ ಬಂದು ಅಧ್ಯಯನ ಮಾಡಬೇಕು. ಮಧ್ಯಪ್ರದೇಶದಿಂದ ಒಬ್ಬ ದಲಿತ ವಿದ್ಯಾರ್ಥಿ ಬಂದಿದ್ದ. ನಮಗೆಲ್ಲ ಖುಶಿಯಾಗಿತ್ತು. ಆದರೆ ಆತ ಅರ್ಧಕ್ಕೆ ವಾಪಾಸು ಹೋದ. ನನಗೆ ತುಂಬಾ ನಿರಾಸೆಯಾಯಿತು. ಸಂಸ್ಕೃತದಲ್ಲಿ ಎಂಎ, ಎಂಫಿಲ್, ಪಿಎಚ್.ಡಿ ಮಾಡಿದ ಹುಡುಗಿಯೊಬ್ಬಳು ನನ್ನಲ್ಲಿಗೆ ಬಂದಳು. ಆದರೆ ಅವಳಿಗೆ ಸಂಸ್ಕೃತ ಸರಿಯಾಗಿ ಓದಲು ಬರುವುದಿಲ್ಲ. ಏನು ಮಾಡಬೇಕು ಹೇಳಿ? ಅವಳಿಗೆ ಮೂರು ವರ್ಷ ಟ್ರೇನಿಂಗ್ ಕೊಟ್ಟು ಸಂಸ್ಕೃತ ಮತ್ತು ಇಂಗ್ಲಿಷ್‌ನಲ್ಲಿ ಗಂಭೀರ ಚರ್ಚೆ ಮಾಡುವಂತೆ ಮಾಡಿದೆವು. ಹಲ್ಲುಕಚ್ಚಿ ನೆಲಹಿಡಿದು ಕೂತು ಓದುವ ಬರೆಯುವ ಶಿಸ್ತಿಗೆ ಎಲ್ಲರೂ ಒಳಗಾಗಬೇಕು. ಪರಿಶ್ರಮವಿಲ್ಲದ ಪರಿಸರ ಎಲ್ಲಡೆಗೆ ಹಬ್ಬುತ್ತಿರುವ ಕುರಿತ ಅವರ ಆತಂಕ ನಿಚ್ಚಳವಾಗಿತ್ತು. ತಾವು ಕೆಲಸ ಮಾಡುತ್ತಿರುವ ಕ್ಷೇತ್ರದ ಕುರಿತು ನಂಬಿಕೆಯಿಲ್ಲದ, ಶ್ರಮವಿಲ್ಲದ, ಬೋಳೆತನದ ಸ್ಕಾಲರ್‌ಶಿಪ್ ಏತಕ್ಕಾಗಿ ಎಂಬ ಪ್ರಶ್ನೆ ಅವರ ಮಾತುಗಳಲ್ಲಿ ಸುಳಿಯುತ್ತಿತ್ತು.

ನಾನು ಇನ್ನೊಂದು ಪ್ರಶ್ನೆಗೆ ಹೊರಳಿದೆೆ. ಕನ್ನಡದಲ್ಲಿ ಕ್ಲಾಸಿಕಲ್ ಪದದ ಬಗೆಗೆ ಗೊಂದಲವಿದೆ. ಅಲ್ಲಿ ಗುರುತಿಸುತ್ತಿರುವ ಪಠ್ಯಗಳ ಬಗೆಗೂ ಪ್ರಶ್ನೆಗಳಿವೆ. ಅದನ್ನು ಆಧುನಿಕ ಪಠ್ಯಗಳಿಗೂ ವಿಸ್ತರಿಸಬೇಕು ಎಂಬ ವಾದವಿದೆ. ಅಲ್ಲಿ ಜನಪದ ಮಹಾಕಾವ್ಯಗಳಿಗೆ ಸ್ಥಾನವೇಕಿಲ್ಲ ಎಂಬ ಅಸಮಾಧಾನವಿದೆ? ಎಂದೆ. ಓ ಹೌದೆ? ಅಂತ ಅಚ್ಚರಿಗೊಂಡ ಅವರು ಅದಕ್ಕೆ ಪ್ರತಿಕ್ರಿಯಿಸಿದ್ದು ಹೀಗೆ; ಕ್ಲಾಸಿಕಲ್ ಪದದ ಬಗೆಗೆ ಗೊಂದಲ ಬೇಡ. ಸದ್ಯಕ್ಕೆ ಅದನ್ನು ಕ್ರಿ.ಶ. 1800 ರ ಒಳಗಿನ ಪಠ್ಯಗಳೆಂದು ಭಾವಿಸೋಣ. ನನಗೆ ಗೊತ್ತು ಅನೇಕರಿಗೆ ಈ ತರಹದ ವ್ಯಾಖ್ಯಾನ ಹಿಡಿಸುವುದಿಲ್ಲವೆಂದು. ನನ್ನ ಅಭಿಪ್ರಾಯ ಕೂಡ ಕಾಲಾನಂತರದಲ್ಲಿ ಬದಲಾಗಬಹುದು. ಕ್ಲಾಸಿಕಲ್ ಎಂದರೆ ಆ ಪಠ್ಯಗಳು ಮನುಷ್ಯನ ಅಸ್ತಿತ್ವದ ಚರಿತ್ರೆಗಳನ್ನು ಹೇಳುತ್ತಿವೆ. ಚಿಂತನೆಯ ಚರಿತ್ರೆ ಹೇಳುತ್ತಿವೆ. ಮನುಷ್ಯ ಪ್ರಜ್ಞೆಯ ವಿಭಿನ್ನ ಸ್ತರಗಳನ್ನು ದಟ್ಟವಾಗಿ ಕಾಣಿಸುತ್ತಿವೆ. ಕ್ಲಾಸಿಕಲ್ ಪದವನ್ನು ನಾವು ಬಳಕೆಯಿಂದ ಬಿಡಬಾರದು. ನಮ್ಮ ಶ್ರೇಷ್ಠ ಪರಂಪರೆಯೊಂದು ಈ ಪದದ ಆವರಣದಲ್ಲಿದೆ. ಆವರಣ ಒಡೆದು ನಮ್ಮ ಕಾಲಕ್ಕೆ ಚರ್ಚೆಯನ್ನು ತೆಗೆದುಕೊಂಡು ಹೋಗಬೇಕಲ್ಲವೆ? ಗ್ರೀಕ್, ಲ್ಯಾಟಿನ್‌ನಲ್ಲಿ ಎಷ್ಟು ಅದ್ಭುತವಾದ ಕೆಲಸವಾಗಿದೆ. ಹಾರ್ವರ್ಡ್ ವಿಶ್ವವಿದ್ಯಾನಿಲಯ ಇಂಥ ಹಲವಾರು ಯೋಜನೆಗಳಲ್ಲಿ ಕೃತಿಗಳನ್ನು ಪ್ರಕಟಿಸಿದೆ. ಮಿಡಿವಲ್ ಲೈಬ್ರರಿ ಎನ್ನುವ ಸಿರೀಸ್ ಇದೆ. ಓಲ್ಡ್ ಲೈಬ್ರರಿ ಸಿರೀಸ್ ಇದೆ. ಲೋ ಕ್ಲಾಸಿಕಲ್ ಸಿರೀಸ್ ಕೂಡ ಇದೆ. ಯುರೋಪು ಇದನ್ನು ತನ್ನದೇ ನೆಲೆಯಲ್ಲಿ ವಿವರಿಸಿದೆ. ಅನೇಕ ಸಲ ಶಬ್ದಗಳ ಜಾಲದಲ್ಲಿ ಸಿಲುಕಿ ಅಲ್ಲೇ ಉಳಿಯುವಂತಾಗಬಾರದು. ಅದರಿಂದ ಹೊಸದೊಂದು ಚರ್ಚೆಗೆ ಅವಕಾಶವಾಗುವಂತಿದ್ದರೆ ಕ್ರಿಯಾಶೀಲರಾಗಬೇಕು. ಜಾಗತಿಕ ಬೌದ್ಧಿಕ ಚರ್ಚೆಗಳ ಜೊತೆಯಲ್ಲಿ ಕನ್ನಡದ ಚರ್ಚೆಗಳನ್ನು ಎಳೆದು ತರಬೇಕು. ಒಟ್ಟಿನಲ್ಲಿ ಭಾರತದ ಶ್ರೇಷ್ಠ ಪಠ್ಯಗಳು ಜಗತ್ತಿಗೆ ತಲುಪುವಂತಾಗಬೇಕು. ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಚಂದ್ರಶೇಖರ ಕಂಬಾರರು ಮತ್ತವರ ಸಂಗಾತಿಗಳು ರೂಪಿಸಿದ ಯೋಜನೆಗಳು ಒಂದು ಕ್ಷಣ ಮನಸ್ಸಿನಲ್ಲಿ ಸುಳಿದು ಹೋದವು.

ಈಗ ನೀವು ಆಯ್ಕೆ ಮಾಡಿಕೊಂಡ ಪಠ್ಯಗಳು ಎಂಥವು? ನಿಮ್ಮ ಅನುವಾದದಿಂದ ಮೂಲ ಭಾಷೆಯ ಬೆಳವಣಿಗೆಯನ್ನು ಹೇಗೆ ವಿವರಿಸುವಿರಿ. ಇಂಗ್ಲಿಷ್ ಭಾಷೆಗೆ ದಕ್ಕುವ ಹೊಸ ತಿಳುವಳಿಕೆಯಿಂದ ಮೂಲ ಭಾಷೆಗೆ ಆಗುವ ಅನುಕೂಲಗಳೇನು? ಎಂದೆ. ಈ ಪ್ರಶ್ನೆಯ ಕುರಿತು ನನಗೇ ಗೊಂದಲವಿತ್ತು. ಇದನ್ನವರು ಗುರುತಿಸಿದರೊ ಏನೊ. ತಮ್ಮ ಕಣ್ಣುಗಳೆರಡನ್ನೂ ಕಿರಿದುಗೊಳಿಸುತ್ತ ಹೇಳಿದರು ರವಿಕೀರ್ತಿಯ ಐಹೊಳೆ ಶಾಸನವಿದೆ. ಈತ ಅಂಥ ದೊಡ್ಡ ಕವಿಯಲ್ಲ. ಆದರೆ ಕಾಳಿದಾಸ ಬಾರವಿಯನ್ನು ನೆನಪಿಸಿಕೊಂಡು ಶಾಸನ ಬರೆದಿದ್ದಾನೆ. ಎಲ್ಲಿಯ ಐಹೊಳೆ ಎಲ್ಲಿಯ ಕಾಳಿದಾಸ? ಅಂದರೆ ಇವರ ವಿದ್ವತ್

Writer - ವಿಕ್ರಮ ವಿಸಾಜಿ

contributor

Editor - ವಿಕ್ರಮ ವಿಸಾಜಿ

contributor

Similar News