ನೀ ಮಾಹಿತಿಯೊಳಗೋ ನಿನ್ನೊಳು ಮಾಹಿತಿಯೋ...

Update: 2020-01-02 12:31 GMT

ಖಾಸಗಿತನ ಎಂಬುದು ಒಂದು ಖರೀದಿಸಬಹುದಾದ ಸೇವೆಯಲ್ಲ. ಅದೊಂದು ಸಾಂವಿಧಾನಿಕ ಹಕ್ಕು ಎಂಬುದನ್ನು ಅರಿಯುವುದು ಇಂದಿನ ಅಗತ್ಯ. ಅತ್ಯಂತ ಸರಳವಾದ ಮಾತುಗಳಲ್ಲಿ ಹೇಳುವುದಾದರೆ ತಂತ್ರಜ್ಞಾನ ಎಷ್ಟೇ ಮುಂದುವರಿದಿರಲಿ, ಅದೆಷ್ಟೇ ಅದ್ಭುತಗಳನ್ನು ಸೃಷ್ಟಿಸಲಿ ಅದು ನಮ್ಮ ಬದುಕನ್ನು ಹಸನುಗೊಳಿಸುವುದಕ್ಕೆ ಮುಖ್ಯವಾಗಿ ಬೇಕಿರುವುದು ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣ.

 

     ಎನ್.ಎ.ಎಂ. ಇಸ್ಮಾಯಿಲ್

ಎನ್.ಎ.ಎಂ. ಇಸ್ಮಾಯಿಲ್ ಕಳೆದೆರಡು ದಶಕಗಳಲ್ಲಿ ಕನ್ನಡದ ಮೂರು ಪ್ರಮುಖ ದಿನಪತ್ರಿಕೆಗಳಲ್ಲಿ ಮಹತ್ವದ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದವರು. ಕನ್ನಡದ ಆನ್‌ಲೈನ್ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂದು ಡಿಜಿಟಲ್ ಲೋಕದ ಆಧುನಿಕ ಆವಿಷ್ಕಾರಗಳು ಹಾಗೂ ವಿವಿಧ ಆಯಾಮಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಕನ್ನಡದ ಅತ್ಯಂತ ವಿರಳರಲ್ಲಿ ಇಸ್ಮಾಯಿಲ್ ಒಬ್ಬರು. ಸದ್ಯ ಕಲರ್ಸ್ ಟಿವಿ ವಾಹಿನಿಯ ಮಾತೃ ಸಂಸ್ಥೆ ‘ವಯಕಾಮ್ 18’ನ ಕ್ರಿಯೇಟಿವ್ ವಿಭಾಗದ ಸಹ ಉಪಾಧ್ಯಕ್ಷರಾಗಿದ್ದಾರೆ.

ಪ್ರಪಂಚದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ನಾರ್ವೆ ಕೂಡಾ ಒಂದು. ತನ್ನಲ್ಲಿರುವ ತೈಲ ಸಂಪತ್ತಿನಿಂದಾಗಿ ಅದರ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) 437 ಬಿಲಿಯನ್ ಡಾಲರುಗಳಿಗಿಂತ ಹೆಚ್ಚು. ಪ್ರಪಂಚದ ನಾಲ್ಕು ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಆಲ್ಫಾಬೆಟ್, ಫೇಸ್‌ಬುಕ್, ಮೈಕ್ರೋಸಾಫ್ಟ್ ಮತ್ತು ಅಮೆಜಾನ್‌ಗಳ ಒಟ್ಟು ಷೇರು ಮಾರುಕಟ್ಟೆ ಮೌಲ್ಯವೆಷ್ಟು ಗೊತ್ತೇ? 1748 ಬಿಲಿಯನ್ ಡಾಲರುಗಳಿಗಿಂತ ಅಧಿಕ. ಅಂದರೆ ಈ ಸಂಸ್ಥೆಗಳಲ್ಲಿ ಒಂದೊಂದರ ಒಟ್ಟು ಮೌಲ್ಯವೇ ನಾರ್ವೆಯ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕಿಂತ ಹೆಚ್ಚು. ಈ ಸಂಸ್ಥೆಗಳು ಈ ಪ್ರಮಾಣದಲ್ಲಿ ಹೇಗೆ ಬೆಳೆದವು. ಅಥವಾ ಯಾಕೆ ಬೆಳೆಯುತ್ತಿವೆ ಎಂಬುದಕ್ಕೆ ಇರುವ ಉತ್ತರ ಒಂದೇ. ನಾರ್ವೆ ತೈಲಸಂಗ್ರಹವನ್ನು ಹೊಂದಿದ್ದರೆ ಈ ನಾಲ್ಕೂ ಸಂಸ್ಥೆಗಳೂ ವರ್ತಮಾನದ ತೈಲವಾಗಿರುವ ‘ದತ್ತಾಂಶ’ ಸಂಗ್ರಹವನ್ನು ಹೊಂದಿವೆ. Data is new oil ಎಂಬುದನ್ನು ಈ ನಾಲ್ಕೂ ಸಂಸ್ಥೆಗಳೂ ಸಾಬೀತು ಮಾಡುತ್ತಿವೆ. ದತ್ತಾಂಶವೆಂಬ ಆಧುನಿಕ ತೈಲವನ್ನು ಸಂಗ್ರಹಿಸುತ್ತಲೇ ಬೆಳೆಯುತ್ತಿರುವ ಸಂಸ್ಥೆಗಳ ಪಟ್ಟಿಯಲ್ಲಿ ಇರುವುದು ಈ ನಾಲ್ಕು ಸಂಸ್ಥೆಗಳಷ್ಟೇ ಅಲ್ಲ. ಚೀನಾದ ಟೆನ್ಸೆಂಟ್, ಬೈಡೂ, ಅಲಿಬಾಬ, ಜೆಡಿ ಡಾಟ್ ಕಾಮ್‌ಗಳೂ ಇವೆ. ಟೆನ್ಸೆಂಟ್ ಚೀನಾದ ಫೇಸ್‌ಬುಕ್ ಆಗಿದ್ದರೆ ಬೈಡೂ ಚೀನೀ ಸರ್ಚ್ ಇಂಜಿನ್. ಅಲಿಬಾಬ ಮತ್ತು ಜೆಡಿ ಡಾಟ್‌ಕಾಮ್‌ಗಳು ಅಮೆಜಾನ್‌ನಂತೆ ಇ-ಕಾಮರ್ಸ್ ವ್ಯವಹಾರಗಳನ್ನು ನಡೆಸುತ್ತವೆ. ಈ ಎಲ್ಲಾ ಕಂಪೆನಿಗಳೂ ಒಂದರ್ಥದಲ್ಲಿ ಅಮೆರಿಕ ಮೂಲದ ನಾಲ್ವರು ದತ್ತಾಂಶ ದೈತ್ಯರಿಗೆ ಸ್ಪರ್ಧಿಗಳಾಗಿ ಬೆಳೆದು ನಿಂತಿವೆ.

ಪ್ರಪಂಚ ಈ ಬಗೆಯ ಬೃಹತ್ ಉದ್ಯಮಗಳ ಏಳು ಮತ್ತು ಬೀಳುಗಳೆರಡನ್ನೂ ಕಂಡಿದೆ. 1990ರ ದಶಕದ ಆರಂಭದಲ್ಲಿ ಕಂಡುಬಂದ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ತೀವ್ರಗತಿಯ ಬೆಳವಣಿಗೆಯೂ ಇಂಥದ್ದೇ ಒಂದು. ಆದರೆ ಆಗ ಹುಟ್ಟಿದ ಕಂಪೆನಿಗಳು ಅಷ್ಟೇವೇಗದಲ್ಲಿ ಕಾಣೆಯಾದವು. ಡಾಟ್ ಕಾಮ್ ಗುಳ್ಳೆ ಒಡೆದು ಹೋಯಿತು ಎಂದು ಅರ್ಥಶಾಸ್ತ್ರಜ್ಞರು ಷರಾ ಬರೆದಿದ್ದರು. ತಂತ್ರಜ್ಞಾನ ದೈತ್ಯರ ಈ ಕಾಲದ ಬೆಳವಣಿಗೆಯ ಕುರಿತೂ ಹೆಚ್ಚು ಕಡಿಮೆ ಇಂಥದ್ದೇ ನಿಲುವನ್ನು ಈಗಲೂ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. 1990ರಿಂದ 2019ರ ನಡುವಣ ಹತ್ತೊಂಬತ್ತು ವರ್ಷಗಳ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ದತ್ತಾಂಶ ದೈತ್ಯರ ಬೆಳವಣಿಗೆಯನ್ನು ಕೇವಲ ಮತ್ತೊಂದು ಗುಳ್ಳೆ ಎಂದು ತಳ್ಳಿಹಾಕಲು ಸಾಧ್ಯವಿಲ್ಲ.

ದೇಶಗಳಿಗಿಂತ ದೊಡ್ಡದಾಗಿ ಬೆಳೆಯುವ ಕಂಪೆನಿಗಳು ಸಹಜವಾಗಿಯೇ ತಮ್ಮ ವ್ಯಾಪ್ತಿಯನ್ನು ಅವು ಹುಟ್ಟಿದ ದೇಶದಾಚೆಗೆ ಅರ್ಥಾತ್ ಇಡೀ ಪ್ರಪಂಚಕ್ಕೆ ವ್ಯಾಪಿಸಿ ಕೊಳ್ಳುತ್ತವೆ. ಅಷ್ಟೇ ಅಲ್ಲ ತಮ್ಮ ವ್ಯಾಪ್ತಿಯಲ್ಲಿ ಬರುವ ದೇಶಗಳ ರಾಜಕಾರಣ ಮತ್ತು ಆರ್ಥಿಕತೆಯನ್ನು ನಿಯಂತ್ರಿಸಲೂ ಹೊರಡುತ್ತವೆ. ಇದನ್ನು ಅರ್ಥ ಮಾಡಿಕೊಳ್ಳಲು ವಸಾಹತೋತ್ತರ ಕಾಲಘಟ್ಟದಲ್ಲಿ ಅಭಿವೃದ್ಧಿಹೊಂದಿದ ದೇಶಗಳು ತೃತೀಯ ಜಗತ್ತಿನ ದೇಶಗಳ ಮಾರುಕಟ್ಟೆ ಮತ್ತು ತೈಲಸಂಪತ್ತಿನ ನಿಯಂತ್ರಣಕ್ಕೆ ನಡೆಸುತ್ತಾ ಬಂದಿರುವ ತಂತ್ರಗಳನ್ನು ಗಮನಿಸಿದರೆ ಸಾಕು. ಆಫ್ರಿಕಾ, ದಕ್ಷಿಣ ಅಮೆರಿಕ ಮತ್ತು ಏಶ್ಯದ ಹಲವು ರಾಷ್ಟ್ರಗಳು ನಿರಂತರವಾಗಿ ಸರ್ವಾಧಿಕಾರಿ ಸೇನಾಡಳಿತ ಇಲ್ಲವೇ ರಾಜಾಡಳಿತದಲ್ಲಿ ಬಳಲುತ್ತಿರುವುದಕ್ಕೆ ಮುಖ್ಯಕಾರಣವೇ ಆ ದೇಶಗಳಲ್ಲಿರುವ ಖನಿಜ ಸಂಪತ್ತು. ಈ ಸಂಪತ್ತಿನ ಮೇಲೆ ನಿಯಂತ್ರಣ ಬೇಕೆಂದು ಅಭಿವೃದ್ಧಿ ಹೊಂದಿದ ದೇಶಗಳು ಬಯಕೆಯೇ ಆ ದೇಶಗಳ ಕಷ್ಟಕ್ಕೆ ಕಾರಣವಾಗಿವೆ. ಇಲ್ಲೊಂದು ಸೂಕ್ಷ್ಮವಿದೆ. ಅಭಿವೃದ್ಧಿ ಹೊಂದಿದ ದೇಶಗಳು ತೃತೀಯ ಜಗತ್ತಿನ ಖನಿಜ/ತೈಲ ಸಂಪತ್ತಿನ ಮೇಲೆ ಏಕೆ ಒಡೆತನವನ್ನು ಬಯಸುತ್ತಿವೆ ಎಂಬ ಪ್ರಶ್ನೆಯನ್ನು ಅರ್ಥ ಮಾಡಿಕೊಂಡರೆ ಈ ಸೂಕ್ಷ್ಮವೇನೆಂದು ತಿಳಿಯುತ್ತದೆ. ಆಫ್ರಿಕಾ, ದಕ್ಷಿಣ ಅಮೆರಿಕ ಮತ್ತು ಏಶ್ಯ ಖಂಡ ತೈಲ ಸಂಗ್ರಹದ ಮೇಲಿನ ಒಡೆತನ ಬೇಕಿರುವುದು ಅಮೆರಿಕ ಸಂಯುಕ್ತ ಸಂಸ್ಥಾನಗಳೆಂದು ಕರೆಯುವ ದೇಶದ ರಾಜಕೀಯ ಪ್ರಭುತ್ವಕ್ಕೆ ಅಲ್ಲ. ಅದು ಬೇಕಿರುವುದು ಅಮೆರಿಕ ಮೂಲದ ಬಹುರಾಷ್ಟ್ರೀಯ ತೈಲ ಕಂಪೆನಿಗಳಿಗೆ. ಈ ಕಂಪೆನಿಗಳ ಹಿತವನ್ನು ಕಾಯುವುದು ಆ ದೇಶದ ರಾಜಕೀಯ ಪ್ರಭುತ್ವಕ್ಕೆ ಅನಿವಾರ್ಯವಾಗಿಬಿಟ್ಟಿರುವುದು. ಇಲ್ಲವಾದರೆ ಆಯಾ ದೇಶಗಳ ಆರ್ಥಿಕತೆಯೇ ಕುಸಿದುಬಿಡುತ್ತದೆ. ಇದು ಕೇವಲ ತೈಲೋದ್ಯಮಕ್ಕೆ ಸೀಮಿತವಾದ ವಿಚಾರವೂ ಅಲ್ಲ. ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಂಪೆನಿಗಳಿರುವ ದೇಶಗಳಲ್ಲಿಯೂ ಇದು ಸಂಭವಿಸುತ್ತದೆ. ತೃತೀಯ ಜಗತ್ತಿನಲ್ಲಿ ಸತತ ಯುದ್ಧ ನಡೆಯಬೇಕಿರುವುದು ಯೂರೋಪ್‌ನ ಕೆಲವು ದೇಶಗಳು, ಅಮೆರಿಕ ಮತ್ತು ಇಸ್ರೇಲ್‌ನ ಅನಿವಾರ್ಯತೆಯಾಗಿರುವುದೂ ಇದೇ ಕಾರಣಕ್ಕೆ.

ಇದೇನು ಇಂದು ನಿನ್ನೆಯ ವಿಚಾರವಲ್ಲ. ವಸಾಹತು ಕಾಲದಿಂದಲೂ ಹೀಗೆಯೇ ಸಂಭವಿಸುತ್ತಿದೆ. ಈಸ್ಟ್ ಇಂಡಿಯಾ ಕಂಪೆನಿಯ ಷೇರುಗಳ ಮೌಲ್ಯ ನಿರಂತರವಾಗಿ ಹೆಚ್ಚುತ್ತಲೇ ಹೋಗುವುದಕ್ಕೆ ಅದು ವ್ಯಾಪಾರದ ಜೊತೆ ಜೊತೆಯಲ್ಲಿಯೇ ರಾಜತಂತ್ರವನ್ನೂ ರೂಢಿಸಿಕೊಂಡಿತು. ಒಂದು ಹಂತದಲ್ಲಿ ವಿಕ್ಟೋರಿಯಾ ಮಹಾರಾಣಿಯ ಸರಕಾರವೇ ಮಧ್ಯಪ್ರವೇಶಿಸಿ ರಾಜತಂತ್ರವನ್ನು ತನ್ನ ಕೈಗೆತ್ತಿಕೊಂಡಿತು. ಆದರೆ ವರ್ತಮಾನದ ವಸಾಹತೀಕರಣ ಈಸ್ಟ್ ಇಂಡಿಯಾ ಕಂಪೆನಿಯ ಮಾದರಿಯಲ್ಲಿಲ್ಲ. ಕಂಪೆನಿ ಮತ್ತು ಸರಕಾರಗಳಲ್ಲಿ ಯಾರು ಯಾರನ್ನು ಯಾವಾಗ ಹೇಗೆ ನಿಯಂತ್ರಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲೇ ಆಗದಷ್ಟು ಸಂಕೀರ್ಣವಾದ ಸ್ಥಿತಿ ಇದು. ಹಾಗಾಗಿಯೇ ಯಾವ ದೇಶದ ಪ್ರಭುತ್ವ ಯಾವ ಕಂಪೆನಿಯ ಮೂಲಕ ಇನ್ನಾವ ದೇಶವನ್ನು ನಿಯಂತ್ರಿಸುತ್ತದೆ ಎಂಬುದನ್ನು ವಿವರಿಸುವುದೂ ಕಷ್ಟವಾಗುವ ಕಾಲ ನಮ್ಮದು. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಬ್ರೆಕ್ಸಿಟ್ ಮತ್ತು ಅಮೆರಿಕ ಚುನಾವಣೆಗಳ ಮೇಲೆ ನಡೆದ ಮಾಹಿತಿ ತಂತ್ರಜ್ಞಾನ ಆಧಾರಿತ ದಾಳಿ. ಕೇಂಬ್ರಿಜ್ ಅನಲಿಟಿಕಾ ಎಂಬ ಒಂದು ಸಂಸ್ಥೆಯ ಮೂಲಕ ನಡೆದ ಈ ಕಾರ್ಯಾಚರಣೆಗಳನ್ನು ಹಳೆಯ ಪರಿಭಾಷೆಯಲ್ಲಿ ವಿವರಿಸಲು ಸಾಧ್ಯವಿಲ್ಲ. ಅಮೆರಿಕದ ರಾಜಕಾರಣಿಗಳು ಟ್ರಂಪ್ ಅಧಿಕಾರಕ್ಕೇರುವುದರ ಹಿಂದೆ ರಶ್ಯದ ಕೈವಾಡವನ್ನು ಆರೋಪಿಸುತ್ತಾರೆ. ಆದರೆ ಬ್ರೆಕ್ಸಿಟ್‌ನ ವಿಚಾರದಲ್ಲಿ ಈ ಬಗೆಯ ಸ್ಪಷ್ಟ ಉದ್ದೇಶವೊಂದನ್ನು ನಿರ್ದಿಷ್ಟ ರಾಷ್ಟ್ರೀಯ ಪ್ರಭುತ್ವಕ್ಕೆ ಆರೋಪಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಕೇಂಬ್ರಿಜ್ ಅನಲಿಟಿಕಾ ಹಗರಣವೂ ‘ರಶ್ಯ ಕೈವಾಡ’ದಂಥ ವಿಚಾರಕ್ಕೆ ಸೀಮಿತವಾಗಿಯೂ ಉಳಿದಿಲ್ಲ. ಸರಳವಾಗಿ ಹೇಳುವುದಾದರೆ ಈ ತನಕ ಬಳಸುತ್ತಿದ್ದ ‘ಒಳಗಿನ ಶಕ್ತಿಗಳು’ ಮತ್ತು ‘ಹೊರಗಿನ ಶಕ್ತಿಗಳು’ ಎಂಬ ಪರಿಕಲ್ಪನೆಗಳಿಗೆ ಈಗ ಹೆಚ್ಚಿನ ಅರ್ಥ ಉಳಿದಿಲ್ಲ. ಈ ಹಿನ್ನೆಲೆಯಲ್ಲಿಯೇ ವರ್ತಮಾನದ ತೈಲವಾದ ‘ದತ್ತಾಂಶ’ದ ಮೇಲಿನ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಮೇಲಾಟವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಮಾಹಿತಿ ಮಾರಿಕೊಂಡವರು!

ಮಾಹಿತಿ ತಂತ್ರಜ್ಞಾನದ ಆವಿಷ್ಕಾರಗಳೆಲ್ಲವನ್ನೂ ನಾವೊಂದು ಸುಂದರ ಕನಸಿನಂತೆ ಅನುಭವಿಸುತ್ತಿದ್ದೇವೆ. ಮಧ್ಯಮ ವರ್ಗದವರಿಗೆ ಒಂದು ದೂರವಾಣಿ ಕರೆಯನ್ನೂ ಮಾಡುವ ಅಗತ್ಯವಿಲ್ಲದೆ ಮನೆಯೆದುರೇ ಬಂದು ನಿಲ್ಲುವ ಉಬರ್ ಅಥವಾ ಓಲಾ ಟ್ಯಾಕ್ಸಿ. ಬ್ರೌಸರ್‌ನಲ್ಲಿ ಟೈಪಿಸಿದಾಕ್ಷಣ ಕಣ್ಣೆದುರು ಅನಾವರಣಗೊಳ್ಳುವ ಮಾಹಿತಿ ಕಣಜ. ಸುಂದರ್ ಪಿಚ್ಚೈಯಂಥ ಭಾರತೀಯ ಪ್ರತಿಭಾವಂತರು ಪಡೆಯುತ್ತಿರುವ ಬೃಹತ್ ಸಂಬಳ ಕಾಣಿಸುತ್ತದೆ. ಸ್ವಲ್ಪ ರಾಜಕೀಯ ಪ್ರಜ್ಞೆಯುಳ್ಳವವರಿಗೆ ಟ್ವಿಟರ್ ಮತ್ತು ಫೇಸ್‌ಬುಕ್‌ಗಳಲ್ಲಿಯೇ ಸಾಧ್ಯವಾದ ಅರಬ್ ವಸಂತದಂಥ ಕ್ರಾಂತಿ ಗೋಚರಿಸುತ್ತದೆ. ಮತ್ತಷ್ಟು ಸೂಕ್ಷ್ಮವಾಗಿ ಚಿಂತಿಸುವವರಿಗೆ ಎಣೆಯಿಲ್ಲದೆ ಹರಿದಾಡುವ ಸುಳ್ಳು ಸುದ್ದಿಗಳನ್ನು ಪತ್ತೆ ಮಾಡಲು ಗೂಗಲ್ ಮತ್ತು ಫೇಸ್‌ಬುಕ್‌ಗಳು ರೂಪಿಸುತ್ತಿರುವ ಅಲ್ಗಾರಿದಂಗಳ ಜಾಣತನವೂ ಇನ್ನೂ ಹೆಚ್ಚು ಆಲೋಚಿಸುವವರಿಗೆ ವಿಕಿಲೀಕ್, ಪನಾಮ ಪೇಪರ್ಸ್‌ನಂಥ ಹ್ಯಾಕ್ಟಿವಿಸಂ ಮಾಹಿತಿ ತಂತ್ರಜ್ಞಾನದ ಸಾಧ್ಯತೆಯಂತೆ ಕಾಣಿಸುತ್ತದೆ.

ಮೇಲೆ ಹೇಳಿದ ಉದಾಹರಣೆಗಳಲ್ಲಿ ವಿಕಿಲೀಕ್ಸ್ ಪ್ರಕರಣವೊಂದನ್ನು ಹೊರತು ಪಡಿಸಿದರೆ ಉಳಿದೆಲ್ಲವೂ ‘ದತ್ತಾಂಶ’ ಎಂಬ ಸಂಪತ್ತಿನ ಒಡೆತನಕ್ಕಾಗಿ ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳು ನಡೆಸುತ್ತಿರುವ ಮೇಲಾಟದ ಫಲಿತಾಂಶಗಳಷ್ಟೇ. ತಂತ್ರಜ್ಞಾನದ ರಾಜಕೀಯ ಪರಿಣಾಮಗಳ ಸಂಶೋಧಕ ಯೆವ್ಗೆನಿ ಮೊರೊಜೊವ್ ಈ ಎಲ್ಲವನ್ನೂ ‘ಡೆಟಾ ಎಕ್ಸ್‌ಟ್ರ್ಯಾಕ್ಟಿವಿಸಂ’ ಎಂಬ ಹೆಸರಿನಿಂದ ಗುರುತಿಸುತ್ತಾರೆ. ಇದರ ಅರ್ಥ ಸರಳ. ದತ್ತಾಂಶ ಉತ್ಖನನ ಎಂದು ಇದನ್ನು ಕನ್ನಡಕ್ಕೆ ಅನುವಾದಿಸಿಕೊಳ್ಳಬಹುದು. ಈ ಉತ್ಖನನ ತೈಲಬಾವಿಗಳನ್ನು ಶೋಧಿಸುವ ಪ್ರಕ್ರಿಯೆಯಂತೆಯೇ ನಡೆಯುತ್ತದೆ. ಇಲ್ಲಿ ಬಳಕೆದಾರರೇ ದತ್ತಾಂಶದ ಮೂಲ. ಅವರಿಂದ ಅಗತ್ಯ ದತ್ತಾಂಶವನ್ನು ಪಡೆಯಲು ಬೇಕಾಗಿರುವ ಬುದ್ಧಿವಂತ ತಂತ್ರವೊಂದನ್ನು ರೂಪಿಸುವುದಷ್ಟೇ ತಂತ್ರಜ್ಞಾನ ಕಂಪೆನಿಗಳ ಕೆಲಸ. ಹೀಗೆ ಪಡೆದ ದತ್ತಾಂಶವನ್ನು ಈ ಕಂಪೆನಿಗಳು ಏನು ಮಾಡುತ್ತವೆ ಎಂಬ ಪ್ರಶ್ನೆ ಸಹಜ. ಗೂಗಲ್ ಎಂಬ ಸರ್ಚ್ ಇಂಜಿನ್ ಒಂದು ವ್ಯಾಪಾರವಾಗಿ ಯಶಸ್ವಿಯಾಗಬೇಕಾದರೆ ಅಂತರ್‌ಜಾಲದ ತುಂಬಾ ಇರುವ ಮಾಹಿತಿಗೆ ಜರಡಿ ಹಿಡಿದು ಬಳಕೆದಾರನ ಎದುರಿಟ್ಟರೆ ಸಾಕಾಗುವುದಿಲ್ಲ. ಇದಿಷ್ಟನ್ನೇ ಮಾಡಿದರೂ ಒಂದಷ್ಟು ಜಾಹೀರಾತುಗಳು ಅದಕ್ಕೆ ದೊರೆಯಬಹುದು. ಆದರೆ ಅದು ನೀಡುವ ಲಾಭಕ್ಕೊಂದು ಮಿತಿಯಿದೆ. ನಿರ್ದಿಷ್ಟ ಬಳಕೆದಾರನಿಗೆ ಅವನು ಬಯಸುತ್ತಿರುವ ಫಲಿತಾಂಶಗಳು ದೊರೆಯುವಂತೆ ಮಾಡಿದರೆ ಹೆಚ್ಚು ಲಾಭವಿದೆ. ಅದಕ್ಕಾಗಿ ಗೂಗಲ್ ಪ್ರತಿಯೊಬ್ಬ ಬಳಕೆದಾರನ ಆಸಕ್ತಿಯನ್ನೂ ಗುರುತಿಸಲು ಪ್ರಯತ್ನಿಸುತ್ತದೆ. ಮಾಹಿತಿಯನ್ನು ನಿರೀಕ್ಷಿಸುತ್ತಿರುವ ಬಳಕೆದಾರ ಯಾರೆಂದು ನಿಖರವಾಗಿ ಗುರುತಿಸುವಷ್ಟರ ಮಟ್ಟಿಗೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಿದೆ. ಈ ಮಟ್ಟಕ್ಕೆ ಒಮ್ಮೆ ಮಾಹಿತಿ ಸಂಗ್ರಹವಾಗಿಬಿಟ್ಟರೆ ಗೂಗಲ್‌ನ ಜಾಹೀರಾತು ವಿತರಣೆಯ ಚಾಣಾಕ್ಷತೆಯೂ ವಿಸ್ತಾರಗೊಳ್ಳುತ್ತದೆ. ಯಾವ ಜಾಹೀರಾತು ಯಾರನ್ನು ತಲುಪಿದರೆ ಹೆಚ್ಚು ಪರಿಣಾಮಕಾರಿ ಎಂಬುದನ್ನು ಅರಿತೇ ಜಾಹೀರಾತಿನ ವಿತರಣೆ ನಡೆಯುತ್ತದೆ. ಆದರೆ ಅದು ಅಷ್ಟಕ್ಕೇ ಮುಗಿಯುವುದಿಲ್ಲ. ನಿರಂತರವಾಗಿ ಬಳಕೆದಾರನಿಗೆ ಜಾಹೀರಾತುಗಳು ತಲುಪಬೇಕು. ಜಾಹೀರಾತಿಗಾಗಿ ಹೆಚ್ಚು ಹೂಡಿಕೆ ಮಾಡುವ ಕ್ಷೇತ್ರಗಳ ಮಾಹಿತಿಯನ್ನು ಬಳಕೆದಾರ ಹುಡುಕುವಂತೆ ಮಾಡಬೇಕು. ‘ಇಡೀ ಪ್ರಪಂಚದ ಮಾಹಿತಿಯನ್ನು ಸರಿಯಾಗಿ ಜೋಡಿಸಿಡುವ’ ಜವಾಬ್ದಾರಿಯನ್ನು ತನ್ನ ಮೇಲೆ ಆರೋಪಿಸಿಕೊಂಡಿರುವ ಗೂಗಲ್ ಈಗ ಯಾವ ಮಾಹಿತಿಯನ್ನು ತೋರಿಸಬೇಕು ಎಂಬುದನ್ನೂ ನಿಯಂತ್ರಿಸುತ್ತದೆ. ಇಂಟರ್ನೆಟ್‌ನ ತುಂಬಾ ತೀವ್ರ ಬಲಪಂಥೀಯ ವಾದಗಳೇ ತುಂಬಿಕೊಂಡಿರುತ್ತವೆ ಎಂಬ ದೂರನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಈ ದೂರು ನಿಜ. ಆದರೆ ಇಂಟರ್ನೆಟ್‌ನಲ್ಲಿ ಅದು ತುಂಬಿಕೊಂಡಿರುವುದಕ್ಕಿಂತ ಹೆಚ್ಚಾಗಿ ಮಾಹಿತಿಯನ್ನು ಜೋಡಿಸಿಡುವವರು ಅದು ನಮ್ಮ ಕಣ್ಣ ಮುಂದೆ ಬರುವಂತೆ ಜೋಡಿಸಿಡುತ್ತಿದ್ದಾರೆ ಎಂಬ ಅಂಶವನ್ನು ನಾವು ಗಮನಿಸುತ್ತಲೇ ಇಲ್ಲ.

ಯಾವುದನ್ನು ಹೆಚ್ಚು ಕ್ಲಿಕ್ ಮಾಡಲಾಗುತ್ತದೆಯೋ ಅದು ಕಾಣಿಸಬೇಕು ಎಂಬ ತತ್ವದಲ್ಲಿ ಇದು ನಡೆಯಬೇಕಾಗಿರುವುದು ಗೂಗಲ್‌ನಂಥ ಸಂಸ್ಥೆಗಳ ವ್ಯಾಪಾರ ಮಾದರಿಯ ಅನಿವಾರ್ಯತೆ. ಇದು ಫೇಸ್‌ಬುಕ್, ಟ್ವಿಟರ್ ಮತ್ತು ಅಮೆಜಾನ್‌ನ ವಿಷಯದಲ್ಲಿಯೂ ನಿಜವೇ. ಇವೆಲ್ಲವೂ ಈ ಕಂಪೆನಿಗಳು ನಡೆಸುವ ದತ್ತಾಂಶ ಉತ್ಖನನದ ಪರಿಣಾಮವೂ ಹೌದು. ನಿರ್ದಿಷ್ಟ ವಿಷಯದ ಬಗ್ಗೆ ಆಳವಾಗಿ ತಿಳಿದುಕೊಳ್ಳುವಂಥ ಮಾಹಿತಿಯನ್ನು ಮಾತ್ರ ಒದಗಿಸುತ್ತಾ ಹೋದರೆ ಅವರ ವ್ಯಾಪಾರ ಮಾದರಿ ಬಹುಬೇಗ ಕುಸಿಯುತ್ತದೆ. ಅದಕ್ಕೆ ಸತತವಾಗಿ ಗಮನವನ್ನು ಬೇರೆ ಬೇರೆಡೆಗೆ ಸೆಳೆಯುತ್ತಲೇ ನಮ್ಮನ್ನು ಕಂಪ್ಯೂಟರ್ ಅಥವಾ ಮೊಬೈಲ್ ಫೋನ್‌ನ ತೆರೆಗೆ ಅಂಟಿಕೊಂಡಿರುವಂತೆ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯ ಮೂಲಕ ಈ ಕಂಪೆನಿಗಳು ನಮ್ಮ ಆಲೋಚನೆಗಳ ಕ್ರಮವನ್ನೂ ಅರ್ಥ ಮಾಡಿಕೊಂಡು ಸಂಗ್ರಹಿಸಿಟ್ಟುಕೊಳ್ಳುತ್ತಲೂ ಇರುತ್ತವೆ. ಗೂಗಲ್ ಮ್ಯಾಪ್ ನಮಗೆ ನಿರ್ದಿಷ್ಟ ರೆಸ್ಟೋರೆಂಟ್‌ಗೆ ದಾರಿ ತೋರಿಸಿ ತನ್ನ ಕೆಲಸ ಮುಗಿಸುವುದಿಲ್ಲ. ಅಲ್ಲಿನ ಆಹಾರ ಹೇಗಿತ್ತೆಂದು ಕೇಳಿ ಉತ್ತರ ಪಡೆದುಕೊಳ್ಳಲು ಪ್ರಯತ್ನಿಸುತ್ತದೆ. ನೀವು ಮತ್ತೆ ಮತ್ತೆ ಅಲ್ಲಿಗೆ ಹೋಗುತ್ತೀರಾ ಎಂಬುದನ್ನೂ ಅರಿಯುತ್ತದೆ. ಇನ್ನೊಂದು ಊರಿಗೆ ಹೋದಾಗ ಅದೇ ರೆಸ್ಟೋರೆಂಟ್‌ನ ಮತ್ತೊಂದು ಶಾಖೆಯಿದ್ದರೆ ಅದನ್ನೂ ನೆನಪಿಸುತ್ತದೆ! ನಾವು ಸಂಚರಿಸಿದ ಹಾದಿ, ನಾವು ಖರೀದಿಸಿದ ಪುಸ್ತಕ, ನಾವು ಹುಡುಕಿದ ವಿಚಾರ, ನಮ್ಮ ಇ-ಮೇಲ್‌ನಲ್ಲಿ ಚರ್ಚಿಸಿದ ಸಂಗತಿ ಎಲ್ಲವುಗಳನ್ನೂ ಒಂದಕ್ಕೊಂದು ಜೋಡಿಸುತ್ತಾ ನಮ್ಮ ಭಾವಲೋಕದ ನೀಲನಕಾಶೆಯೊಂದನ್ನು ಅದು ರೂಪಿಸಿಕೊಳ್ಳುತ್ತಾ ಹೋಗುತ್ತದೆ. ಸರಳವಾಗಿ ಹೇಳುವುದಾದರೆ ನಮ್ಮ ಭಾವಲೋಕವನ್ನು ಕೊರೆದು ಕೊರೆದು ನಿರಂತರವಾಗಿ ದತ್ತಾಂಶವನ್ನು ಸೋಸುವ ಕೆಲಸ ಮಾಡುತ್ತಿರುತ್ತದೆ. ನಾವು ಈ ಮಾಹಿತಿ ತಂತ್ರಜ್ಞಾನ ಸಲಕರಣೆಗಳು ಉಚಿತವಾಗಿ ಕಲ್ಪಿಸಿಕೊಟ್ಟ ಸವಲತ್ತನ್ನು ಬಳಸಿಕೊಳ್ಳುತ್ತಲೇ ನಮ್ಮನ್ನೇ ನಾವು ಮಾರಿಕೊಳ್ಳುತ್ತಿರುತ್ತೇವೆ.

ರಾಜಕೀಯ ತಂತ್ರಜ್ಞಾನ

ಸುಳ್ಳು ಸುದ್ದಿಯ ಹರಡುವಿಕೆಗೂ ಸಾಮಾಜಿಕ ಜಾಲತಾಣಗಳಿಗೂ ಇರುವ ಸಂಬಂಧದ ಕುರಿತ ಚರ್ಚೆ ಈಗ ಹಳೆಯದು. ಇದೊಂದು ವಿಶ್ವವ್ಯಾಪಿಯಾದ ಸಮಸ್ಯೆ. ನಾಜಿಗಳು ನಡೆಸಿದ ಯಹೂದ್ಯರ ನರಮೇಧದ ನಿರಾಕರಣೆಯಿಂದ, ಜಾಗತಿಕ ತಾಪಮಾನ ಏರಿಕೆಯ ಅಲ್ಲಗಳೆಯುವಿಕೆಗಳಿಂದ ಆರಂಭಿಸಿ ಭಾರತದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ತನಕ ಅನೇಕ ಸಮಸ್ಯೆಗಳ ಹಿಂದೆ ಈ ಸುಳ್ಳು ಸುದ್ದಿಗಳಿವೆ. ಆದರೆ ಈ ವಿಷಯವನ್ನು ಚರ್ಚಿಸುವಾಗಲೆಲ್ಲಾ ‘ಸುಳ್ಳು ಸುದ್ದಿ’ ಮುಖ್ಯವಾಗುತ್ತದೆಯೇ ಹೊರತು ಅದನ್ನು ಹರಡುತ್ತಿರುವ ತಂತ್ರಜ್ಞಾನದ ವಿಷಯ ಮುಖ್ಯವಾಗುವುದಿಲ್ಲ. ಇಡೀ ಪ್ರಕ್ರಿಯೆಯಲ್ಲಿ ತಂತ್ರಜ್ಞಾನ ಒಂದು ತಟಸ್ಥ ಮಾಧ್ಯಮ ಎಂದು ಹೆಚ್ಚಿನವರು ಭಾವಿಸಿರು ವಂತೆ ಕಾಣಿಸುತ್ತದೆ. ಆದರೆ ವಾಸ್ತವ ಸಂಪೂರ್ಣ ಭಿನ್ನ.

2017ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ‘ಕಂಪ್ಯೂಟೇಶನಲ್ ಪ್ರೊಪಗ್ಯಾಂಡ ರೀಸರ್ಚ್’ ಯೋಜನೆ ತನ್ನ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿತು. ಅಮೆರಿಕ, ಚೀನಾ, ರಶ್ಯ, ಪೊಲ್ಯಾಂಡ್, ಬ್ರೆಝಿಲ್, ಕೆನಡಾ, ಜರ್ಮನಿ, ಉಕ್ರೇನ್ ಮತ್ತು ಥೈವಾನ್ ದೇಶಗಳನ್ನು ಕೇಂದ್ರವಾಗಿಟ್ಟುಕೊಂಡು ಎರಡು ವರ್ಷಗಳು ನಡೆಸಿದ ಸಾಮಾಜಿಕ ಜಾಲತಾಣ ಅಧ್ಯಯನದ ವರದಿಯಿದು. ಏಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ಲಕ್ಷಾಂತರ ಪೋಸ್ಟ್‌ಗಳನ್ನು ವಿಶ್ಲೇಷಿಸಿ ತಯಾರಾದ ಈ ವರದಿ ಸರಕಾರಗಳು ಹೇಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ತಮಗೆ ಬೇಕಿರುವ ಚರ್ಚೆಗಳನ್ನು ಹುಟ್ಟುಹಾಕುತ್ತವೆ ಎಂಬುದನ್ನು ವಿವರಿಸಿತ್ತು. ಸಾಮಾಜಿಕ ಜಾಲತಾಣಗಳ ಕಾಲದಲ್ಲಿ ಒಮ್ಮತದ ಉತ್ಪಾದನೆ ಹೇಗೆ ನಡೆಯುತ್ತದೆ ಎಂಬುದನ್ನು ವಿವರಿಸುವ ಸಂಶೋಧನೆಯಿದು.

ರಶ್ಯದಲ್ಲಿ ಪುಟಿನ್ ಆಡಳಿತದ ವಿರುದ್ಧ ಇರುವ ಅಲೆಯನ್ನು ಶಾಂತಗೊಳಿಸಲು ಕೆಲಸ ಮಾಡಿದ್ದು ರಾಜಕೀಯ ಕಾರ್ಯಕರ್ತರಲ್ಲ. ತಂತ್ರಜ್ಞಾನದ ಪರಿಭಾಷೆಯಲ್ಲಿ ‘ಬಾಟ್’ ಎಂದು ಕರೆಯುವ ತಂತ್ರಾಂಶಗಳು. ನಿರಂತರವಾಗಿ ನಾಯಕನ ಪರವಾದ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪ್ರಕ್ರಿಯೆ ಇಲ್ಲಿ ನಡೆಯಿತು. ಎಲ್ಲಿ ವಿರೋಧಿ ಧ್ವನಿಗಳು ಕೇಳಿಸುತ್ತವೆಯೋ ಅಲ್ಲೆಲ್ಲಾ ಈ ಪೋಸ್ಟ್‌ಗಳ ಪ್ರವಾಹವೇ ಹರಿಯುತ್ತಿತ್ತು. ಇದರ ಪರಿಣಾಮ ಹೇಗಿತ್ತೆಂದರೆ ವಿರೋಧಿಗಳ ಸಂಖ್ಯೆ ಅತ್ಯಲ್ಪ ಎಂಬ ಭ್ರಮೆಯನ್ನು ಹುಟ್ಟುಹಾಕಿತು. ಟ್ರಂಪ್ ವಿಷಯದಲ್ಲಿ ಸಂಭವಿಸಿದ್ದೂ ಇದುವೇ. ಕೇಂಬ್ರಿಜ್ ಅನಲಿಟಿಕಾ ಹಗರಣವೇ ಇದನ್ನು ಸ್ಪಷ್ಟವಾಗಿ ಹೇಳುತ್ತದೆ.

2014ರ ಚುನಾವಣೆಗೆ ಮುನ್ನ ಭಾರತದಲ್ಲಿಯೂ ಇದು ಸಂಭವಿಸಿತು. ಪರೊಂಜಯ್ ಗುಹಾ ಠಾಕೂರ್ತ ಮತ್ತು ಸಿರಿಲ್ ಸ್ಯಾಮ್ ಅವರು ಬರೆದಿರುವ ‘ರಿಯಲ್ ಫೇಸ್ ಆಫ್ ಫೇಸ್‌ಬುಕ್ ಇನ್ ಇಂಡಿಯಾ’ ಪುಸ್ತಕ ಈ ವಿಷಯವನ್ನು ವಿಸ್ತೃತವಾಗಿ ಚರ್ಚಿಸಿದೆ. ಫೇಸ್‌ಬುಕ್ ಹೇಗೆ ಬಿಜೆಪಿಯ ಕಾರ್ಯಕರ್ತರಿಗೆ ಸಾಮಾಜಿಕ ಜಾಲತಾಣದ ತರಬೇತಿಗಳನ್ನು ಸಂಘಟಿಸಿತ್ತು ಎಂಬ ವಿವರಗಳು ಈ ಪುಸ್ತಕದಲ್ಲಿವೆ. ಫೇಸ್‌ಬುಕ್‌ನ ಬೆಳವಣಿಗೆ ಮತ್ತು ಬಿಜೆಪಿಯ ಬೆಳವಣಿಗೆಗಳೆರಡೂ ಒಂದಕ್ಕೊಂದು ಹೇಗೆ ಹೊಂದಿಕೊಂಡಿವೆ ಎಂಬುದನ್ನು ವಿವರಿಸುವ ಲೇಖಕ ದ್ವಯರು ಈ ಸಂಬಂಧಗಳ ಆಳವನ್ನು ಶೋಧಿಸಲು ಪ್ರಯತ್ನಿಸಿದ್ದಾರೆ. 2013ರಲ್ಲಿ ನರೇಂದ್ರ ಮೋದಿ ಆಪ್ತರಾಗಿದ್ದ ಹಿರೇನ್ ಜೋಷಿ ‘ಮೆರಾ ಭರೋಸ’ ಎಂಬ ವೆಬ್‌ಸೈಟ್ ರೂಪಿಸಿದ್ದರು. ಇದರ ಹಿಂದೆ ಕೆಲಸ ಮಾಡಿದ್ದು ಎನ್‌ಡಿಟಿವಿಯಲ್ಲಿ ಪತ್ರಕರ್ತರಾಗಿದ್ದ ಶಿವನಾಥ್ ತುಕ್ರಾಲ್. ಪುಸ್ತಕದಲ್ಲಿರುವ ಮಾಹಿತಿಯಂತೆ ಶಿವನಾಥ್ ತುಕ್ರಾಲ್ ಅವರು 2014ರ ಚುನಾವಣೆಗೆ ಮೊದಲು ನರೇಂದ್ರ ಮೋದಿ ಪರವಾಗಿ ನಡೆದ ಪ್ರಚಾರಾಂದೋಲನದಲ್ಲಿ ಸಕ್ರಿಯವಾಗಿದ್ದರು. ಚುನಾವಣೆಗಳ ಹೊತ್ತಿನಲ್ಲಿ ಕಾರ್ನೆಗಿ ಸಂಸ್ಥೆ ಸೇರಿದ್ದ ಇವರು 2017ರಲ್ಲಿ ಫೇಸ್‌ಬುಕ್‌ನ ಭಾರತೀಯ ನೀತಿ ನಿರೂಪಣಾ ನಿರ್ದೇಶಕರಾಗಿ ನೇಮಕಗೊಂಡರು. ಬಿಜೆಪಿಯ ಪ್ರಚಾರಾಂದೋಲವನ್ನು ರೂಪಿಸಿದ್ದ ವ್ಯಕ್ತಿಯೇ ಫೇಸ್‌ಬುಕ್‌ನ ನೀತಿ ನಿರೂಪಣಾ ನಿರ್ದೇಶಕನಾಗುವುದು ಕೇವಲ ಕಾಕತಾಳೀಯ ಎಂದು ಭಾವಿಸಲು ಸಾಧ್ಯವೇ? ಫೇಸ್‌ಬುಕ್‌ನ ವ್ಯಾಪಾರ ಮಾದರಿಯ ದೃಷ್ಟಿಯಿಂದ ನೋಡಿದರೆ ಈ ಎಲ್ಲಾ ಬೆಳವಣಿಗೆಗಳೂ ಅದರ ‘ಅಭಿವೃದ್ಧಿ’ಗೆ ಕಾರಣವಾಗಿವೆ. ಹೆಚ್ಚು ಹೆಚ್ಚು ಬಳಕೆದಾರರನ್ನು ಹೆಚ್ಚು ಹೊತ್ತು ಇರಿಸಿಕೊಳ್ಳುವುದಕ್ಕೆ ಬೇಕಿರು�

Writer - ಎನ್.ಎ.ಎಂ. ಇಸ್ಮಾಯಿಲ್

contributor

Editor - ಎನ್.ಎ.ಎಂ. ಇಸ್ಮಾಯಿಲ್

contributor

Similar News