ಜೆಎನ್ ಯು ಭೇಟಿ: ದೀಪಿಕಾ ಪಡುಕೋಣೆ ಕೌಶಲ ಭಾರತ ಪ್ರಚಾರ ವೀಡಿಯೊ ಕೈಬಿಟ್ಟ ಸಚಿವಾಲಯ
ಹೊಸದಿಲ್ಲಿ, ಜ. 9: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ ಎರಡು ದಿನಗಳ ಬಳಿಕ ಆ್ಯಸಿಡ್ ದಾಳಿ ಸಂತ್ರಸ್ತರು ಹಾಗೂ ಕೌಶಲ ಭಾರತದ ಕುರಿತು ದೀಪಿಕಾ ಪಡುಕೋಣೆ ಮಾತನಾಡಿದ ಪ್ರಚಾರ ವೀಡಿಯೊವನ್ನು ನರೇಂದ್ರ ಮೋದಿ ಸರಕಾರದ ಕೌಶಲ ಭಾರತ ಸಚಿವಾಲಯ ಕೈಬಿಟ್ಟಿದೆ. ‘‘ದೀಪಿಕಾ ಪಡುಕೋಣೆ ಒಳಗೊಂಡಿರುವ ಕೌಶಲ ಭಾರತದ ಪ್ರಚಾರ ವೀಡಿಯೊ ಬುಧವಾರ ಬಿಡುಗಡೆಯಾಗಲಿತ್ತು. ಇದನ್ನು ಶ್ರಮ ಶಕ್ತಿ ಭವನದಲ್ಲಿ ಕೂಡ ಪ್ರಚಾರ ಮಾಡಲಾಗುತ್ತಿತ್ತು. ಆದರೆ, ಮಂಗಳವಾರದ ಸರಣಿ ಘಟನೆಯ ಹಿನ್ನೆಲೆಯಲ್ಲಿ ವೀಡಿಯೊ ಬಿಡುಗಡೆಯನ್ನು ಕೈಬಿಡಲಾಗಿದೆ’’ ಎಂದು ಸಚಿವಾಲಯ ಹಿರಿಯ ಅಧಿಕಾರಿ ‘ದಿ ಪ್ರಿಂಟ್’ಗೆ ಬುಧವಾರ ತಿಳಿಸಿದ್ದಾರೆ.
ತಾನು ವೀಡಿಯೊವನ್ನು ಮೌಲ್ಯಮಾಪನ ಮಾತ್ರ ಮಾಡುವುದು ಎಂದು ಸಚಿವಾಲಯ ತಿಳಿಸಿದೆ. ಕೌಶಲ ಭಾರತದ ಕುರಿತ 45 ಸೆಕೆಂಡ್ಗಳ ಈ ಪ್ರಚಾರ ವೀಡಿಯೊದಲ್ಲಿ ದೇಶದಲ್ಲಿ ಎಲ್ಲ ಪ್ರಜೆಗಳಿರುವ ಸಮಾನ ಅವಕಾಶಗಳು ಹಾಗೂ ಶುಕ್ರವಾರ ಬಿಡುಗಡೆಯಾಗಲಿರುವ ಆ್ಯಸಿಡ್ ದಾಳಿ ಸಂತ್ರಸ್ತರ ಕುರಿತು ಜೀವನಚರಿತ್ರೆ ‘ಚಪಾಕ್’ ಬಗ್ಗೆ ಮಾತನಾಡಿದ್ದಾರೆ. ವೀಡಿಯೊ ಚಿತ್ರೀಕರಣ ನಡೆಸುವ ಮುನ್ನ ಆ್ಯಸಿಡ್ ದಾಳಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಲು ದೀಪಿಕಾ ಪಡುಕೋಣೆ ಅವರಿಗೆ ಕೌಶಲ ಸಚಿವಾಲಯ ಅವಕಾಶ ಮಾಡಿ ಕೊಟ್ಟಿತ್ತು. ಈ ಕುರಿತ ‘ದಿ ಪ್ರಿಂಟ್’ನ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ, ಸಚಿವಾಲಯ ಪಡುಕೋಣೆ ಅವರೊಂದಿಗೆ ಔಪಚಾರಿಕವಾಗಿ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ. ಕೌಶಲ ಭಾರತಕ್ಕಾಗಿ ಪ್ರಚಾರ ಹಾಗೂ ಸಂವಹನ ಅಡಿಯ ನಿರಂತರ ಪ್ರಕ್ರಿಯೆ ಒಂದು ಭಾಗವಾಗಿ ಪರಸ್ಪರರನ್ನು ಪ್ರಚಾರ ಮಾಡಲು ಮಾಧ್ಯಮ ಸಂಸ್ಥೆ ಹಾಗೂ ಸಂಘಟನೆಗಳಿಂದ ಚಿಂತನೆಗಳನ್ನು ತಂಡ ಸ್ವೀಕರಿಸುತ್ತದೆ. ‘ಚಪಾಕ್’ ನಿರ್ಮಾಣ ತಂಡ ಚಿತ್ರದ ವಿಷಯವನ್ನು ಪ್ರಚಾರ ಮಾಡಲು ಕೌಶಲ ಭಾರತವನ್ನು ಸಂಪರ್ಕಿಸಿತ್ತು ಎಂದು ಸಚಿವಾಲಯ ಹೇಳಿದೆ.