ದೂರದೃಷ್ಟಿಯಿಲ್ಲದ ಕೃಷಿ ಸಾಲಮನ್ನಾಗಳು

Update: 2020-01-10 18:18 GMT

ತಳಮಟ್ಟದಲ್ಲಿ ನಡೆದ ಅಧ್ಯಯನಗಳ ಪ್ರಕಾರ ಸಾಲ ಮನ್ನಾಗಳು ತತ್‌ಕ್ಷಣದ ಗಾಯಕ್ಕೆ ಔಷಧಿಯನ್ನು ಹಚ್ಚಿದರೂ ಹೆಚ್ಚಿನ ಲಾಭವನ್ನೇನೂ ಒದಗಿಸುವುದಿಲ್ಲ. ಆದ್ದರಿಂದ ಈ ವಿಷಯದಲ್ಲಿ ಸರಿಯಾದ ಯೋಜನಾತ್ಮಕ ಅರಿವು ಮತ್ತು ನಿಖರ ಗುರಿ ಇರುವ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಅದಕ್ಕಾಗಿ ಸಾಂಸ್ಥಿಕ ಹಾಗೂ ಅನೌಪಚಾರಿಕ ಸಾಲಗಳೆಲ್ಲವನ್ನು ಒಳಗೊಳ್ಳುವ ಹಾಗೂ ಅತಿ ಸಣ್ಣ, ಸಣ್ಣ ಮಧ್ಯಮ ರೈತರೆಲ್ಲರನ್ನೂ ಸಾರ್ವತ್ರಿಕವಾಗಿ ಒಳಗೊಳ್ಳುವಂತೆ ಎಚ್ಚರಿಕೆಯಿಂದ ರೂಪಿಸಲಾದ ಯೋಜನೆಗಳ ಸರಿಯಾದ ಅನುಷ್ಠಾನದ ಅಗತ್ಯವಿದೆ.


ಭಾರತದ ಕೃಷಿ ಬಿಕ್ಕಟ್ಟು ರಾಜಕೀಯಕರಣಗೊಂಡು ಚುನಾವಣಾ ಉದ್ದೇಶಗಳೊಂದಿಗೆ ಬೆರೆತುಹೋಗಿರುವುದರಿಂದ ಕೃಷಿ ಸಾಲ ಮನ್ನಾ ಎನ್ನುವುದು ಕೃಷಿ ಬಿಕ್ಕಟ್ಟನ್ನು ಎದುರಿಸಲು ಸರಕಾರಗಳು ಕಂಡುಕೊಂಡಿರುವ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿಬಿಟ್ಟಿದೆ. ಹೆಚ್ಚುತ್ತಿರುವ ಸಾಲದ ಹೊರೆಯನ್ನು ನಿಭಾಯಿಸುವ ಸಲುವಾಗಿ ಕೃಷಿ ಸಾಲ ಮನ್ನಾವನ್ನು ಆಗ್ರಹಿಸುತ್ತಿದ್ದರೂ, ಬೆಲೆಗಳಲ್ಲಿರುವ ವೈಪರೀತ್ಯಗಳ ಕಾರಣದಿಂದ ಸಾಲದ ಕೂಪಕ್ಕೆ ಬೀಳುವ ಸಾಧ್ಯತೆ ಇನ್ನೂ ಹೆಚ್ಚಿದೆ. ಹೀಗಾಗಿ ರೈತಾಪಿಯು ಸ್ಥಿರ ಮತ್ತು ಲಾಭದಾಯಕ ಬೆಲೆಯನ್ನು ಒದಗಿಸಲು ಸೂಕ್ತವಾದ ವ್ಯವಸ್ಥೆಯನ್ನು ರೂಪಿಸಬೇಕೆಂದೂ ಆಗ್ರಹಿಸುತ್ತಾ ಬಂದಿದ್ದಾರೆ. ಈ ಪರಿಸ್ಥಿತಿಯು ಹವಾಮಾನ ವೈಪರೀತ್ಯಗಳಿಂದ ಇನ್ನಷ್ಟು ಬಿಗಡಾಯಿಸುತ್ತಿದೆ. ಮಹಾರಾಷ್ಟ್ರದ ಸರಕಾರವು 2015ರ ಮಾರ್ಚ್ 1ರಿಂದ 2019ರ ಸೆಪ್ಟಂಬರ್ 30ರ ನಡುವೆ ರೈತರು ಮಾಡಿರುವ 2 ಲಕ್ಷದ ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡುವ ಸಲುವಾಗಿ ಘೋಷಿಸಿರುವ ಮಹಾತ್ಮಾ ಜ್ಯೋತಿರಾವ್ ಫುಲೆ ಕೃಷಿ ಸಾಲ ಮನ್ನಾ ಯೋಜನೆಯು ಈ ನಿಟ್ಟಿನಲ್ಲಿ ಒಂದು ಹೊಸ ಸೇರ್ಪಡೆಯಾಗಿದೆ. ಕೇವಲ 3-6 ತಿಂಗಳೊಳಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಬಹುದೆಂದು ಮಹಾರಾಷ್ಟ್ರ ಸರಕಾರವು ನಿರೀಕ್ಷೆಯನ್ನಿಟ್ಟುಕೊಂಡಿದೆ. ಈ ಹಿಂದಿನ ಸರಕಾರವು ಸಹ ರೈತರು ರಾಜ್ಯವ್ಯಾಪಿ ಹೋರಾಟಗಳನ್ನು ನಡೆಸಿದ ನಂತರ 2017ರ ಜೂನ್‌ನಲ್ಲಿ 89 ಲಕ್ಷ ರೈತಾಪಿಗಳಿಗೆ ಪರಿಹಾರ ಕೊಡುವ ಅಂದಾಜು 34,044 ಕೋಟಿ ರೂ.ಗಳಷ್ಟು ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿತ್ತು. ಆದರೆ ಸಾಲ ಮನ್ನಾ ಪಡೆದುಕೊಳ್ಳಲು ರೂಪಿಸಲಾಗಿದ್ದ ಸಂಕೀರ್ಣ ಅರ್ಹತಾ ಮಾನದಂಡಗಳು, ತ್ರಾಸದಾಯಕ ಆನ್‌ಲೈನ್ ಪ್ರಕ್ರಿಯೆಗಳು ಮತ್ತು ಸರಕಾರದಿಂದ ಬ್ಯಾಂಕುಗಳಿಗೆ ಹಣ ಪಾವತಿ ಮಾಡುವಲ್ಲಿ ಏರ್ಪಟ್ಟ ಏರುಪೇರುಗಳಿಂದಾಗಿ ಈ ಯೋಜನೆಯ ಅನುಷ್ಠಾನದಲ್ಲಿ ತೊಡಕುಗಳುಂಟಾಯಿತು. 

ಈ ಅಂಶಗಳಿಂದಾಗಿ ಸಾಲ ಮನ್ನಾ ಸೌಲಭ್ಯವನ್ನು ಪಡೆದುಕೊಳ್ಳುವುದು ಅತ್ಯಂತ ಕಷ್ಟದಾಯಕವಾಗಿತ್ತು. ತಳಮಟ್ಟದಲ್ಲಿ ನಡೆದ ಅಧ್ಯಯನಗಳ ಪ್ರಕಾರ ಸಾಲ ಮನ್ನಾಗಳು ತತ್‌ಕ್ಷಣದ ಗಾಯಕ್ಕೆ ಔಷಧಿಯನ್ನು ಹಚ್ಚಿದರೂ ಹೆಚ್ಚಿನ ಲಾಭವನ್ನೇನೂ ಒದಗಿಸುವುದಿಲ್ಲ. ಆದ್ದರಿಂದ ಈ ವಿಷಯದಲ್ಲಿ ಸರಿಯಾದ ಯೋಜನಾತ್ಮಕ ಅರಿವು ಮತ್ತು ನಿಖರ ಗುರಿ ಇರುವ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಅದಕ್ಕಾಗಿ ಸಾಂಸ್ಥಿಕ ಹಾಗೂ ಅನೌಪಚಾರಿಕ ಸಾಲಗಳೆಲ್ಲವನ್ನು ಒಳಗೊಳ್ಳುವ ಹಾಗೂ ಅತಿ ಸಣ್ಣ, ಸಣ್ಣ ಮಧ್ಯಮ ರೈತರೆಲ್ಲರನ್ನೂ ಸಾರ್ವತ್ರಿಕವಾಗಿ ಒಳಗೊಳ್ಳುವಂತೆ ಎಚ್ಚರಿಕೆಯಿಂದ ರೂಪಿಸಲಾದ ಯೋಜನೆಗಳ ಸರಿಯಾದ ಅನುಷ್ಠಾನದ ಅಗತ್ಯವಿದೆ. 2006ರಿಂದ ಕೇರಳದಲ್ಲಿ ಚಾಲ್ತಿಯಲ್ಲಿರುವ ಕೇರಳ ರಾಜ್ಯ ರೈತರ ಸಾಲ ಮನ್ನಾ ಆಯೋಗದ ಮಾದರಿಯನ್ನು ಒಂದು ಸಮಗ್ರ ಹಾಗೂ ಒಳಗೊಳ್ಳುವ ಸಾಲ ಮನ್ನಾ ಯೋಜನೆಯನ್ನು ರೂಪಿಸಲು ಪರಿಗಣಿಸಬಹುದಾಗಿದೆ. ಕೃಷಿ ಪರಿಣಿತರು, ರೈತ ಪ್ರತಿನಿಧಿಗಳು ಮತ್ತು ಮಾಜಿ ನ್ಯಾಯಾಧೀಶರನ್ನೊಳಗೊಂಡ ಈ ಶಾಶ್ವತ ಆಯೋಗವು ರೈತ ಮತ್ತು ಅವರಿಗೆ ಸಾಲ ನೀಡಿದವರ ನಡುವಿನ ಸಾಲ ಹೊಣೆಗಾರಿಕೆಯನ್ನು ಪುನರ್ ರೂಪಿಸಲು ಪ್ರತಿಯೊಬ್ಬ ರೈತನ ಅರ್ಜಿಯನ್ನು ಪ್ರತ್ಯೇಕವಾಗಿ ಪರಿಗಣಿಸುತ್ತದೆ. ಅಂತಹ ಒಂದು ಶಾಶ್ವತ ಆಯೋಗದ ಲಾಭವೇನೆಂದರೆ ರೈತರಿಗೆ ದೊರಕುವ ಬೆಂಬಲಕ್ಕೂ ಹಾಗೂ ಚುನಾವಣಾ ವರ್ತುಲಗಳಿಗೂ ಇದ್ದ ಸಂಬಂಧ ಕಡಿಯುತ್ತದೆ. ಆದರೆ ಕೃಷಿರಂಗದಲ್ಲಿ ಸುದೀರ್ಘವಾಗಿ ಬೆಳೆಯುತ್ತಾ ಬಂದಿರುವ ಬಿಕ್ಕಟ್ಟಿನ ಪರಿಣಾಮವಾಗಿರುವ ಆಳವಾಗಿರುವ ಕೃಷಿ ಬಿಕ್ಕಟ್ಟನ್ನು ಬಗೆಹರಿಸಲು ನಿರಂತರವಾದ ಮತ್ತು ದೂರಗಾಮಿಯಾದ ಮಧ್ಯಪ್ರವೇಶಗಳ ಅಗತ್ಯವಿದೆ.

ಮೂಲಭೂತ ಬದಲಾವಣೆಗಳಾಗದಿದ್ದರೆ ಪದೇಪದೇ ಈ ಬಿಕ್ಕಟ್ಟು ಪುನರಾವರ್ತನೆಯಾಗುತ್ತಲೇ ಇರುತ್ತದೆ. ಏಕೆಂದರೆ ಸಾಲ ಮನ್ನಾಗಳು ಹೆಚ್ಚುತ್ತಿರುವ ಹೂಡಿಕಾ ವೆಚ್ಚಗಳ ಹಾಗೂ ಬೆಳೆಗಳ ಬೆಲೆ ಇಳಿಕೆಯಿಂದಾಗಿ ಕುಸಿಯುತ್ತಲೇ ಹೋಗುವ ಆದಾಯದ ಸಮಸ್ಯೆಯನ್ನೇನೂ ಬಗೆಹರಿಸುವುದಿಲ್ಲ. ವಾಸ್ತವವಾಗಿ ಕೃಷಿ ಬಿಕ್ಕಟ್ಟಿಗೆ ಪ್ರಧಾನ ಕಾರಣ ಇದೇ ಆಗಿದೆ. ತಳಮಟ್ಟದ ಅಧ್ಯಯನಗಳ ಪ್ರಕಾರ ಸಾಲ ಮನ್ನಾಗಳು ಪ್ರಧಾನವಾಗಿ ಸಾಂಸ್ಥಿಕ ಸಾಲ ಪಡೆದುಕೊಂಡವರಿಗೆ ಹಾಗೂ ಇದ್ದಿದ್ದರಲ್ಲಿ ಸುಸ್ಥಿತಿಯಲ್ಲಿರುವ ರೈತಾಪಿಗಳಿಗೆ ಹೆಚ್ಚಾಗಿ ದೊರಕುತ್ತದೆ. ಹೀಗಾಗಿ ಪದೇಪದೇ ನಡೆಯುವ ಸಾಲ ಮನ್ನಾಗಳು ಒಂದೆಡೆ ಹೆಚ್ಚು ಅಗತ್ಯವಿರುವವರಿಗೆ ದಕ್ಕದೇ ಹೋಗುವುದು ಮಾತ್ರವಲ್ಲದೆ ಗ್ರಾಮೀಣ ಸಾಲ ನೀಡಿಕೆ ವ್ಯವಸ್ಥೆಯನ್ನೇ ಏರುಪೇರುಗೊಳಿಸುತ್ತದೆ ಹಾಗೂ ಈಗಾಗಲೇ ವಾಪಸ್ ಆಗದ ಸಾಲದ ಸಮಸ್ಯೆಯಿಂದ ಹೈರಾಣಾಗಿರುವ ಬ್ಯಾಂಕುಗಳ ಮೇಲೂ ಹಾನಿಕಾರಕ ಪ್ರಭಾವವನ್ನೂ ಬೀರುತ್ತದೆ. ಮೇಲಾಗಿ ಸಾಲ ಮನ್ನಾಗಳು ಸರಕಾರದ ಹಣಕಾಸು ಸಂಪನ್ಮೂಲಗಳನ್ನು ಬರಿದಾಗಿಸಿ ಕೃಷಿಯಲ್ಲಿ ಸಾರ್ವಜನಿಕ ಹೂಡಿಕೆಯ ಪ್ರಮಾಣವನ್ನು ಕಡಿತಗೊಳಿಸುತ್ತದೆ.

ಹೀಗಾಗಿ ದೂರದೃಷ್ಟಿಯಿಂದ ನೋಡಿದರೆ ಇದು ಹೆಚ್ಚು ಕಾಲ ಮುಂದುವರಿಯಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಕೇಳಬೇಕಿರುವ ಸೂಕ್ತವಾದ ಪ್ರಶ್ನೆಯೇನೆಂದರೆ ಬರ, ಹೆಚ್ಚುತ್ತಿರುವ ಒಳಸುರಿ ವೆಚ್ಚಗಳು, ಅಸಮರ್ಪಕ ಬೆಲೆ ಮತ್ತು ಕುಸಿಯುತ್ತಿರುವ ಆದಾಯಗಳಿಂದಾಗಿ ಸೃಷ್ಟಿಯಾಗಿರುವ ಕೃಷಿ ಬಿಕ್ಕಟ್ಟನ್ನು ಸಾಲ ಮನ್ನಾಗಳು ಬಗೆಹರಿಸುತ್ತವೆಯೇ? ಹಣದುಬ್ಬರವನ್ನು ಕಡಿತಗೊಳಿಸಬೇಕೆಂಬ ಒತ್ತಿನಿಂದ ಉತ್ಪಾದಕನಿಗಿಂತ ಗ್ರಾಹಕನ ಮೇಲೆ ಹೆಚ್ಚು ಒತ್ತು ಕೊಡುವ ಹಣಕಾಸು ನೀತಿಯಿಂದಾಗಿಯೂ ಸಹ ಕೃಷಿ ಬಿಕ್ಕಟ್ಟು ಏರ್ಪಟ್ಟಿದೆ. ಕೃಷಿ ಪ್ರಕ್ರಿಯೆಗಳ ನಗದೀಕರಣ ಮತ್ತು ಯಾಂತ್ರೀಕರಣಗಳಿಂದಾಗಿ ಮತ್ತು ಹಣಕಾಸು ಹಾಗೂ ತೋಟಗಾರಿಕಾ ಬೆಳೆಗಳ ಕಡೆಗೆ ಕೃಷಿಯು ಸ್ಥಿತ್ಯಂತರವಾಗುತ್ತಿರುವುದರಿಂದ ಮಾರುಕಟ್ಟೆ ಮತ್ತು ಸಂಗ್ರಹ ವ್ಯವಸ್ಥೆಗಳ ಮೇಲೆ ಹೆಚ್ಚು ಹೂಡಿಕೆಗಳು ಆಗಬೇಕಿತ್ತು. ಆದರೆ ರೈತರು ಬೆಲೆ ಏರಿಳಿಕೆಗಳಿಗೆ ಬಲಿಯಾಗಿ ಹೆಚ್ಚೆಚ್ಚು ಸಾಲದ ಕೂಪಕ್ಕೆ ಬೀಳುತ್ತಿದ್ದಾರೆ. ಕೃಷಿ ಸರಕುಗಳ ಬೆಲೆ ಕುಸಿತ ಮತ್ತು ಹೆಚ್ಚುತ್ತಿರುವ ಬೆಲೆ ವೈಪರೀತ್ಯಗಳು ಕೃಷಿ ಬಿಕ್ಕಟ್ಟನ್ನು ಮತ್ತಷ್ಟು ಗಂಭೀರವಾಗಿಸಿವೆ.

ಆದರೆ ಒದಗಿಸಲಾಗುತ್ತಿರುವ ತುರ್ತು ಪರಿಹಾರಗಳು ಕೇವಲ ತಾತ್ಕಾಲಿಕ ಸ್ವರೂಪದ್ದಾಗಿದ್ದು ಬಿಕ್ಕಟ್ಟಿನ ಮೂಲ ಕಾರಣಗಳನ್ನು ನಿವಾರಿಸುವುದಿಲ್ಲ. ಆದಾಯಗಳಲ್ಲಿ ಸ್ಥಗಿತತೆ ಮತ್ತು ಕೃಷಿ ಉತ್ಪಾದನೆಯಲ್ಲಿ ಇಳಿಕೆಗಳು ಗ್ರಾಮೀಣ ಬಿಕ್ಕಟ್ಟಿನ ಗುಣಲಕ್ಷಣಗಳಾಗಿದ್ದು ಕೃಷಿಯೇತರ ವಲಯವನ್ನೂ ಒಳಗೊಂಡಂತೆ ಇಡೀ ಗ್ರಾಮೀಣ ಆರ್ಥಿಕತೆ ಭಾರೀ ಬೇಡಿಕೆ ಕುಸಿತದ ಪರಿಣಾಮಗಳನ್ನು ಎದುರಿಸುತ್ತಿದೆ. ಅಸಂಘಟಿತ ಕ್ಷೇತ್ರದಲ್ಲಿನ ಇಳಿಕೆಯು ಹೆಚ್ಚುತ್ತಿರುವ ನಿರುದ್ಯೋಗಳಿಗೆ ಮತ್ತು ಗ್ರಾಮೀಣ ಬೇಡಿಕೆಯ ಕುಸಿತಕ್ಕೆ ಕಾರಣವಾಗಿದೆ. ಬಿಕ್ಕಟ್ಟನ್ನು ಬಗೆಹರಿಸಬೇಕೆಂದರೆ ಉತ್ಪಾದಕತೆಯನ್ನು ಹೆಚ್ಚಿಸುವ, ಒಳಸುರಿ ವೆಚ್ಚ ಹಾಗೂ ಬೇಸಾಯ ವೆಚ್ಚವನ್ನು ಕಡಿಮೆ ಮಾಡುವ, ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಲಾಭದಾಯಕ ಬೆಲೆಗಳನ್ನು ಒದಗಿಸುವ, ಬೆಳೆದದ್ದನ್ನು ಕೊಂಡುಕೊಳ್ಳುವ ಖಾತರಿಯನ್ನು ನೀಡುವ, ಭೂ ಹಿಡುವಳಿಯ ಗಾತ್ರ ಛಿದ್ರೀಕರಣವಾಗದ, ಸಾಂಸ್ಥಿಕ ಸಾಲ ಸೌಲಭ್ಯಗಳನ್ನು ವಿಸ್ತರಿಸುವ, ಕೃಷಿ ಮೂಲ ಸೌಕರ್ಯಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವ, ಪರಿಣಾಮಕಾರಿ ಬೆಳೆ ವಿಮಾ ಯೋಜನೆಗಳನ್ನು ನೀಡುವ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ನೀತಿಗಳ ಅಗತ್ಯವಿದೆ.

ಈ ಮೂಲಭೂತವಾದ ಅಂಶಗಳನ್ನು ಎಲ್ಲಾ ಸರಕಾರಗಳೂ ಕಡೆಗಣಿಸಿವೆ. ಉತ್ತಮ ತಂತ್ರಜ್ಞಾನದ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗಿಸುವಂತಹ ಹೂಡಿಕೆಯನ್ನು ಮಾಡುವುದು, ಸಂಶೋಧನೆ ಮತ್ತು ವಿಸ್ತರಣೆ ಕಾರ್ಯಕ್ರಮಗಳು ಮತ್ತು ಸಂಗ್ರಹ ಹಾಗೂ ದಾಸ್ತಾನು ಸೌಕರ್ಯಗಳ ಅಗತ್ಯವೂ ಹೆಚ್ಚಿದೆ. ಎಲ್ಲಕ್ಕಿಂತ ಹೆಚ್ಚಾಗಿ, ರೈತಾಪಿಗಳ ಹಿತಾಸಕ್ತಿಗೆ ವಿರುದ್ಧವಾಗಿ ಮಾರುಕಟ್ಟೆ ಶಕ್ತಿಗಳು ತಮ್ಮತಮ್ಮಿಳಗೆ ಒಟ್ಟು ಒಪ್ಪಂದವನ್ನು ಮಾಡಿಕೊಳ್ಳುವುದನ್ನು ತಡೆಗಟ್ಟುವಂತಹ ಮಾರುಕಟ್ಟೆ ಸುಧಾರಣೆಗಳೂ ಹಾಗೂ ಒಂದು ಸ್ಥಿರವಾದ ರಫ್ತು-ಆಮದು ನೀತಿಗಳೂ ಸಹ ಅಗತ್ಯವಾಗಿವೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News