ಅನುಪಮ್ ಖೇರ್ 'ಹೊಗಳುಭಟ, ಕೋಡಂಗಿ': ನಾಸಿರುದ್ದೀನ್ ಶಾ

Update: 2020-01-22 13:53 GMT

ಹೊಸದಿಲ್ಲಿ: ಕೇಂದ್ರ ಸರಕಾರದ ನೀತಿಗಳನ್ನು ಸದಾ ಹೊಗಳುವ ನಟ ಅನುಪಮ್ ಖೇರ್ ಅವರನ್ನು 'ಹೊಗಳುಭಟ ಕೋಡಂಗಿ' ಎಂದು ಹಿರಿಯ ನಟ ನಾಸಿರುದ್ದೀನ್ ಶಾ ಟೀಕಿಸಿದ್ದಾರೆ. ಅದೇ ಸಮಯ ಜೆಎನ್‍ಯು ದಾಳಿಯನ್ನು ಖಂಡಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸುವ ಸಲುವಾಗಿ ವಿವಿಗೆ ಭೇಟಿ ನೀಡಿದ ನಟಿ ದೀಪಿಕಾ ಪಡುಕೋಣೆಯನ್ನು ನಾಸಿರುದ್ದೀನ್ ಶ್ಲಾಘಿಸಿದ್ದಾರೆ.

'ಆಕೆ ಧೈರ್ಯವಂತೆ' ಎಂದು ದಿ ವೈರ್ ಜತೆಗಿನ ಸಂದರ್ಶನದಲ್ಲಿ ಹೇಳಿದ ನಾಸಿರುದ್ದೀನ್ "ಚಿತ್ರರಂಗದಲ್ಲಿ ಟಾಪ್ ಸ್ಥಾನದಲ್ಲಿದ್ದುಕೊಂಡು ಇಂತಹ ಒಂದು ದಿಟ್ಟ ಕ್ರಮದಿಂದ ತನಗೆ ನಷ್ಟ ಉಂಟಾಗುವುದೆಂದು ತಿಳಿದಿದ್ದರೂ ಮುಂದಡಿಯಿಟ್ಟ ಆಕೆಯನ್ನು ಹೊಗಳಬೇಕು'' ಎಂದು ಅಭಿಪ್ರಾಯಪಟ್ಟರು.

"ಆಕೆ ಸ್ವಲ್ಪ ನಷ್ಟ ಅನುಭವಿಸಬಹುದು. ಇದರಿಂದ  ಆಕೆಯ  ಜನಪ್ರಿಯತೆ ಕುಂದುವುದೇ ? ಆಕೆಯ ಸೌಂದರ್ಯ ಈಗಿರುವುದಕ್ಕಿಂತ ಕಡಿಮೆಯಾಗುವುದೇ?'' ಎಂದು ನಾಸಿರುದ್ದೀನ್ ಪ್ರಶ್ನಿಸಿದರು. "ಚಿತ್ರರಂಗ ಆರಾಧಿಸುವ ಏಕೈಕ ದೇವರೆಂದರೆ ಹಣ'' ಎಂದೂ ಅವರು ಬಾಲಿವುಡ್ ಸೆಲೆಬ್ರಿಟಿಗಳ ಮೌನವನ್ನು ಪರೋಕ್ಷವಾಗಿ ಟೀಕಿಸಿದರು.

ಅನುಪಮ್ ಖೇರ್ ಬಗ್ಗೆ ಮಾತನಾಡಿದ ನಾಸಿರದ್ದೀನ್ ``ಅವರು ಬಹಳಷ್ಟು ಮಾತನಾಡುತ್ತಾರೆ. ಆದರೆ ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರೊಬ್ಬ ಕೋಡಂಗಿ. ಹೊಗಳುಭಟತನ ಅವರ ರಕ್ತದಲ್ಲಿದೆ ಏನನ್ನೂ ಮಾಡಲು ಸಾಧ್ಯವಿಲ್ಲ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News