ಮಾಲ್ಗುಡಿ ಡೇಸ್: ಮಂಜಿನಂತಹ ಪ್ರೇಮದತ್ತ ಸಂಜೆ ನೋಟ

Update: 2020-02-08 18:29 GMT

ಬರವಣಿಗೆ ನಿಲ್ಲಿಸಿದ ವೃದ್ಧ ಸಾಹಿತಿಯೊಬ್ಬನ ಬದುಕಿನಲ್ಲಿ ಏನು ನಡೆಯಬಹುದು ಎನ್ನುವುದು ಖಂಡಿತವಾಗಿ ಆಸಕ್ತಿ ತರುವ ವಿಚಾರವಲ್ಲ. ಆದರೆ ಆತನ ಫ್ಲ್ಯಾಷ್ ಬ್ಯಾಕ್ ಕತೆಯ ಮೂಲಕ ನಮ್ಮೆಲ್ಲರ ಬಾಲ್ಯದ ದಿನಗಳಿಗೆ, ಬದುಕಿನ ಸಂಭ್ರಮಗಳಿಗೆ ಗುರುತಾಗುವ, ಆಪ್ತವೆನಿಸುವ ಚಿತ್ರವೊಂದನ್ನು ನೀಡಿದ್ದಾರೆ ನಿರ್ದೇಶಕ ಕಿಶೋರ್ ಮೂಡುಬಿದಿರೆ. ಲಕ್ಷ್ಮೀನಾರಾಯಣ ಮಾಲ್ಗುಡಿ 65ವರ್ಷ ವಯಸ್ಸಿನ ಸಾಹಿತಿ. ಅವರು ಬರವಣಿಗೆಗೆ ವಿದಾಯ ಘೋಷಿಸುತ್ತಾರೆ. ಕಾಕಾತಾಳೀಯ ಎಂಬಂತೆ ಅವರ ಬರಹಗಳನ್ನೇ ಪ್ರೀತಿಸಿ ಮಡದಿಯಾಗಿ ಬಂದ ಸರೋಜಾ ಅಚಾನಕ್ಕಾಗಿ ಇಹಲೋಕ ತ್ಯಜಿಸುತ್ತಾರೆ. ಒಂಟಿಯಾದ ತಂದೆಯನ್ನು ತನ್ನೊಂದಿಗೆ ವಿದೇಶಕ್ಕೆ ಕರೆದೊಯ್ಯಲು ಮಗಳು ಮತ್ತು ಮಗ ಬರುತ್ತಾರೆ. ಆದರೆ ಅವರೊಂದಿಗೆ ವಿದೇಶಕ್ಕೆ ತೆರಳಲು ಆಸಕ್ತಿ ಇರದ ಸಾಹಿತಿ ಮನೆ ಬಿಟ್ಟು ಎಲ್ಲಾದರೂ ಹೋಗೋಣ ಎಂದು ಹೊರಟು ಬಿಡುತ್ತಾರೆ. ಇದೇ ವೇಳೆ ಐಟಿ ಉದ್ಯೋಗಿಯಾಗಿದ್ದ ಪ್ರಕೃತಿ ಎನ್ನುವ ಯುವತಿ, ತನ್ನ ಮೇಲಧಿಕಾರಿಯ ಕಿರುಕುಳದಿಂದ ಬೇಸತ್ತು ಕೆಲಸ ತೊರೆದು ಅದೇ ಮನಸ್ಥಿತಿಯಲ್ಲಿ ಮನೆ ಬಿಟ್ಟಿರುತ್ತಾಳೆ. ಇಬ್ಬರ ಭೇಟಿ, ಅವರ ಬದುಕಿನ ಫ್ಲ್ಯಾಷ್‌ಬ್ಯಾಕ್‌ಗಳ ವಿನಿಮಯಕ್ಕೆ ದಾರಿ ಮಾಡಿಕೊಡುತ್ತದೆ. ಸಾಹಿತಿಯ ಬಾಲ್ಯದ ಕತೆ ಕೇಳಿದ ಪ್ರಕೃತಿ ಅವರ ಆ ದಿನಗಳ ಬಾಲ್ಯದ ಗೆಳತಿಯ ಭೇಟಿಗಾಗಿ ಮಾಲ್ಗುಡಿಯ ಕಡೆಗೆ ತನ್ನ ಕಾರನ್ನು ತಿರುಗಿಸುತ್ತಾಳೆ. ಹಾಗೆ ಕಾರಣವಿಲ್ಲದ ಪಯಣ ಬದುಕಿನ ಸಾಕಾರವನ್ನು ನೆನಪಿಸುತ್ತಾ ಹೋಗುತ್ತದೆ. ಕೊನೆಯಲ್ಲಿ ಬಾಲ್ಯದ ಗೆಳತಿ ಸಿಗುತ್ತಾಳೆಯೇ ಎನ್ನುವುದನ್ನು ಚಿತ್ರ ನೋಡಿಯೇ ತಿಳಿಯಬೇಕಿಲ್ಲ.

ನೋಡಿದವರಲ್ಲಿ ವಿಚಾರಿಸಿದರೂ ತಿಳಿಯಬಹುದು. ಆದರೆ ಸಿನೆಮಾ ತೋರಿಸುವ ಆ ಭಾವಾನಾತ್ಮಕ ಸನ್ನಿವೇಶವನ್ನು ಯಾವ ನಿರೂಪಕನಿಂದಲೂ ವಿವರಿಸಲು ಸಾಧ್ಯವಿಲ್ಲ. ಹಾಗಾಗಿ ನೀವು ಚಿತ್ರ ನೋಡಲೇಬೇಕು. ಒಂದೊಮ್ಮೆ ಭಾವಜೀವಿ ಅಲ್ಲದವರೂ, ಚಿತ್ರ ನೋಡಿದ ಮೇಲೆ ಭಾವುಕರಾಗುತ್ತಾರೆ. ಹಳೆಯ ಪ್ರೇಮವನ್ನು ಹುಡುಕಿಕೊಂಡು ಹೋಗುವ ಅಥವಾ ಕಾಲೇಜ್ ದಿನಗಳ ಪ್ರೇಮಕತೆ ಹೇಳುವ ಚಿತ್ರಗಳು ಕೂಡ ‘ಮೈ ಆಟೋಗ್ರಾಫ್’ನಿಂದ ‘ಲವ್ ಮಾಕ್ಟೇಲ್’ ತನಕ ಕನ್ನಡದಲ್ಲಿ ಸಾಕಷ್ಟು ಬಂದಿವೆ. ಆದರೆ ಇದನ್ನು ಅವುಗಳ ಪಟ್ಟಿಗೆ ಸೇರಿಸುವಂತಿಲ್ಲ. ಸಾಹಿತಿಯದ್ದು ಪ್ರೇಮಕಾವ್ಯವಲ್ಲ. ಬಾಲ್ಯದ ಸ್ನೇಹ. ಆದರೆ ಯಾವ ಪ್ರೇಮಕಾವ್ಯಕ್ಕೂ ಕಡಿಮೆ ಇರದಷ್ಟು ಭಾವನಾತ್ಮಕ! ಮಾಲ್ಗುಡಿ ಎನ್ನುವ ಕಾಲ್ಪನಿಕ ಊರಿನಲ್ಲಿ ನಿರ್ದೇಶಕರು ತಾವು ಕಂಡ ಕರಾವಳಿಯ ಕೋಮು ದ್ವೇಷದ ಕತೆಯನ್ನು ಚೆನ್ನಾಗಿ ಹೇಳಿದ್ದಾರೆ. ಹಾಗಾಗಿ ಚಿತ್ರವು ಸಾಹಿತಿಯ ಕತೆಯಾಗಿ ಉಳಿಯುವುದಿಲ್ಲ. ಮಾಲ್ಗುಡಿಯ ಕಡೆಗಿನ ಅವರ ಪ್ರಯಾಣದಲ್ಲಿ ಗೆಳತಿಯಾಗುವ ಪ್ರಕೃತಿ ಎನ್ನುವ ಯುವತಿ ಈ ಕಾಲಘಟ್ಟದ ಹಲವಾರು ಪ್ರೇಮಿಗಳ ಪ್ರತೀಕವಾಗುತ್ತಾಳೆ. ಆಕೆಯ ಪ್ರೇಮಕತೆಗೂ ಒಂದು ಚಂದದ ಆರಂಭ ಅಂತ್ಯಗಳಿವೆ. ಪ್ರಕೃತಿ ಎನ್ನುವ ಪಾತ್ರವಷ್ಟೇ ಅಲ್ಲ, ಹಸಿರು ಪ್ರಕೃತಿಯ ಜತೆಗೆ ವರ್ಷಧಾರೆಯ ಲೀಲೆಯನ್ನು ಕೂಡ ಛಾಯಾಗ್ರಾಹಕ ಉದಯ್ ಲೀಲ ಮನಮೋಹಕವಾಗಿ ಸೆರೆ ಹಿಡಿದಿದ್ದಾರೆ. ಗಗನ್ ಬಡೇರಿಯಾ ಸಂಗೀತದಲ್ಲಿ ಹಾಡುಗಳು ಕತೆಯೊಂದಿಗೆ ಸೇರಿಕೊಂಡು ಸಾಗುತ್ತವೆ.

ವಿಜಯ್ ರಾಘವೇಂದ್ರ ಅವರು ಹಿರಿಯ ಸಾಹಿತಿಯಾಗಿ ಮತ್ತು ತುಂಟ ಶಾಲಾಬಾಲಕನಾಗಿ ಅಚ್ಚರಿ ಎನಿಸುವಂತೆ ಕಾಣಿಸಿಕೊಂಡಿದ್ದಾರೆ. ಸೂಕ್ಷ್ಮವಾಗಿ ನೋಡಿದರೆ ಎರಡೂ ಶೇಡ್‌ಗಳು ಅವರ ವಯಸ್ಸಿನದಲ್ಲ ಎನ್ನಬಹುದಾದರೂ, ಅಂತಹದೊಂದು ನೆನಪಿಗೆ ಆಸ್ಪದ ನೀಡದ ರೀತಿಯಲ್ಲಿ ದೃಶ್ಯಗಳನ್ನು ಮತ್ತು ಪೋಷಕ ಪಾತ್ರಗಳನ್ನು ನೀಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಗಂಟಲಿನ ತನಕವೂ ವಯಸ್ಸು ಗೋಚರಿಸುವ ಮಾದರಿಯಲ್ಲಿರುವ ಮೇಕಪ್, ಅವರನ್ನು ಓರ್ವ ನಿಜವಾದ ವೃದ್ಧನಂತೆ ತೋರಿಸುವಲ್ಲಿ ಗೆದ್ದಿದೆ. ಕೆಲವೊಮ್ಮೆ ಅವರನ್ನು ನೋಡುತ್ತಿದ್ದರೆ ಹಿಂದಿಯ ಜನಪ್ರಿಯ ಚಿತ್ರಸಾಹಿತಿ ಗುಲ್ಝಾರ್ ನೆನಪಾಗುತ್ತಾರೆ. ಮಡದಿ ಸರೋಜಾಳಾಗಿ ವಿದ್ಯಾಮೂರ್ತಿ ನಟಿಸಿದ್ದಾರೆ. ಬಾಲ್ಯದಲ್ಲಿ ಕಲಿಸಿದ ಸರಸ್ವತಿ ಟೀಚರ್, ಬಾಲ್ಯದ ಗೆಳತಿ ಲೆನಿಟಾಳ ವೃದ್ಧ ಪಾತ್ರಗಳಿಗೆ ನಿಜವಾದ ಹಿರಿಯ ಪಾತ್ರಗಳನ್ನು ಬಳಸಿರುವುದು ನಾಯಕನ ಪಾತ್ರಕ್ಕೆ ಚಾಲೆಂಜ್ ನೀಡುವಂತಿದೆ. ಆ ಚಾಲೆಂಜ್‌ನಲ್ಲಿ ನಮ್ಮ ನಾಯಕ ಬಹುತೇಕ ಗೆದ್ದಿದ್ದಾರೆ. ಪ್ರಕೃತಿಯಾಗಿ ಗ್ರೀಷ್ಮಾ ಶ್ರೀಧರ್ ಮತ್ತು ಆಕೆಯ ಪ್ರಿಯಕರನಾಗಿ ಅರ್ಜುನ್ ಕಾಪಿಕಾಡ್ ನಟನೆ ಯುವ ಪ್ರೇಮಿಗಳಿಗೆ ಒಂದು ಕೊಡುಗೆ ಎನ್ನಬಹುದು. ಪ್ರಕೃತಿಯ ಸ್ನೇಹಿತೆಯಾಗಿ ಶೈಲ ಶ್ರೀ, ಲೆನಿಟಾ ಪಾತ್ರದಲ್ಲಿ ತೇಜಸ್ವಿನಿ, ಆಕೆಯ ತಂದೆಯಾಗಿ ಗೋಪಿನಾಥ್ ಭಟ್, ಉಳಿದಂತೆ ಮನದೀಪ್ ರಾಯ್, ರಿಚರ್ಡ್ ಲೂಯಿಸ್, ರೂಪೇಶ್, ಬಿಗ್ ಬಾಸ್ ಖ್ಯಾತಿಯ ಧನರಾಜ್ ಮೊದಲಾದವರು ಅಭಿನಯಿಸಿದ್ದಾರೆ.

ಪ್ರೀತಿ, ಪ್ರೇಮ, ಕ್ರೈಮ್, ದೆವ್ವ ಇಷ್ಟು ವಿಷಯದ ಹೊರತು ಕನ್ನಡದಲ್ಲಿ ಸಿನೆಮಾಗಳೇ ಬರುತ್ತಿಲ್ಲ ಎಂದು ಆಪಾದಿಸುವವರಿಗೆ ಉತ್ತರವಾಗಿ ಬಂದಿರುವ ಚಿತ್ರ ಮಾಲ್ಗುಡಿ ಡೇಸ್. ಹಾಗಂತ ಇದರಲ್ಲಿ ಪ್ರೀತಿ ಪ್ರೇಮ ಇಲ್ಲವೆಂದು ಅಲ್ಲ. ಮಾಲ್ಗುಡಿ ಡೇಸ್ ಎನ್ನುವ ಹೆಸರೇ ಕನ್ನಡಿಗರ ಪಾಲಿಗೆ ಅಜರಾಮರ ಎನ್ನುವಂತೆ ಮಾಡಿದವರು ಶಂಕರ್ ನಾಗ್. ಆದರೆ ಅಂಥದ್ದೊಂದು ನಾಸ್ಟಾಲಿಜಿಕ್ ನೆನಪುಗಳು ಹಾಳಾಗದ ಹಾಗೆ ಮತ್ತೊಂದು ನೆನಪುಗಳನ್ನು ತಂದುಕೊಟ್ಟಿರುವ ನಿರ್ದೇಶಕರು ಖಂಡಿತವಾಗಿ ಅಭಿನಂದನಾರ್ಹರು.

ತಾರಾಗಣ: ವಿಜಯ್ ರಾಘವೇಂದ್ರ, ಗ್ರೀಷ್ಮಾ ಶ್ರೀಧರ್
ನಿರ್ದೇಶನ: ಕಿಶೋರ್ ಮೂಡುಬಿದಿರೆ
ನಿರ್ಮಾಣ: ರತ್ನಾಕರ ಕಾಮತ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News