ಎರಡಕ್ಕಿಂತ ಹೆಚ್ಚು ಮಕ್ಕಳಿದ್ದವರಿಗೆ ಶಿಕ್ಷೆ!: ರಾಜ್ಯಸಭೆಯಲ್ಲಿ ವಿಧೇಯಕ ಮಂಡನೆ
Update: 2020-02-12 15:26 GMT
ಹೊಸದಿಲ್ಲಿ,ಜ.12: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಶಿಕ್ಷೆ ನೀಡಬೇಕೆಂದು ಕೋರುವ ಖಾಸಗಿ ವಿಧೇಯಕವೊಂದನ್ನು ರಾಜ್ಯಸಭೆಯಲ್ಲಿ ಬುಧವಾರ ಮಂಡಿಸಲಾಗಿದೆ. ಶಿವಸೇನಾದ ರಾಜ್ಯಸಭಾ ಸಂಸದ ಅನಿಲ್ ದೇಸಾಯಿ ಮೇಲ್ಮನೆಯಲ್ಲಿ ಸದಸ್ಯರ ಖಾಸಗಿ ವಿಧೇಯಕವನ್ನು ಮಂಡಿಸಿದರು.
ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರಿಗೆ ಶಿಕ್ಷೆಯಾಗುವಂತೆ ಮಾಡಲು ಸಂವಿಧಾನದ 47ಎ ವಿಧಿಯಲ್ಲಿ ತಿದ್ದುಪಡಿ ಮಾಡಬೇಕಂದು ದೇಸಾಯಿ ವಿಧೇಯಕವನ್ನು ಮಂಡಿಸುತ್ತಾ ಪ್ರಸ್ತಾವ ಮಾಡಿದರು. ಪ್ರತಿ ಕುಟುಂಬದಲ್ಲಿ ಮಕ್ಕಳ ಸಂಖ್ಯೆಯನ್ನು ಎರಡಕ್ಕೆ ಸೀಮಿತಗೊಳಿಸುವುದನ್ನು ಉತ್ತೇಜಿಸುವುದಕ್ಕಾಗಿ ಪ್ರೋತ್ಸಾಹಕ್ರಮಗಳನ್ನು ಜಾರಿಗೊಳಿಸುವಂತೆಯೂ ವಿಧೇಯಕದಲ್ಲಿ ಪ್ರತಿಪಾದಿಸಲಾಗಿದೆ.
ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಗಳಿಗೆ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯಗಳು, ತೆರಿಗೆ ರಿಯಾಯಿತಿಯಿಂದ ಹೊರತುಪಡಿಸಬೇಕೆಂದು ವಿಧೇಯಕವು ಆಗ್ರಹಿಸಿದೆ.