ಕನ್ಹಯ್ಯ ಕುಮಾರ್ ಬೆಂಗಾವಲು ವಾಹನದ ಮೇಲೆ ಮತ್ತೆ ಕಲ್ಲು ತೂರಾಟ

Update: 2020-02-14 16:24 GMT

ಪಾಟ್ನಾ, ಫೆ. 14: ಸಿಪಿಐ ನಾಯಕ ಕನ್ಹಯ್ಯ ಕುಮಾರ್ ಅವರ ಬೆಂಗಾವಲು ವಾಹನ ಬಿಹಾರದಲ್ಲಿ ಮತ್ತೊಮ್ಮೆ ದಾಳಿಗೆ ತುತ್ತಾಗಿದೆ. ಕನ್ಹಯ್ಯ ಕುಮಾರ್ ಅವರು ಶುಕ್ರವಾರ ಬಕ್ಸಾರ್‌ನಿಂದ ಅರ್ರಾಹ್‌ಗೆ ತೆರಳುತ್ತಿದ್ದ ಸಂದರ್ಭ ಅವರು ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ.

 ಬಿಹಾರದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕನ್ಹಯ್ಯ ಕುಮಾರ್ ಅವರ ಬೆಂಗಾವಲು ವಾಹನದ ಮೇಲೆ ಈ ವಾರ ನಡೆಯುತ್ತಿರುವ 8ನೇ ದಾಳಿ ಇದಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕನ್ಹಯ್ಯ ಕುಮಾರ್ ಅವರು ಜನವರಿ 30ರಂದು ರಾಜ್ಯವ್ಯಾಪಿ ‘ಜಣ ಗಣ ಮನ’ ಅಭಿಯಾನ ಆರಂಭಿಸಿದ್ದರು. ಈ ಅಭಿಯಾನ ಫೆಬ್ರವರಿ 29ರಂದು ಪಾಟ್ನಾದಲ್ಲಿ ಸಮಾಪನಗೊಳ್ಳಲಿದೆ.

ಕನ್ಹಯ್ಯ ಕುಮಾರ್ ಅವರ ಮೇಲೆ ಗಯಾದಲ್ಲಿ ಮಂಗಳವಾರ ದಾಳಿ ನಡೆದಿತ್ತು. ಸಾರ್ವಜನಿಕ ಸಭೆ ನಡೆಯುವ ಸ್ಥಳಕ್ಕೆ ತಲುಪುವ ಮುನ್ನ ಕನ್ಹಯ್ಯ ಅವರ ಬೆಂಗಾವಲು ವಾಹನದ ಮೇಲೆ ಮೋಟರ್‌ಸೈಕಲ್‌ನಲ್ಲಿ ಬಂದ ಗುಂಪೊಂದು ಕಲ್ಲು ತೂರಾಟ ನಡೆಸಿತ್ತು. ಇದರಿಂದ ಕಾರುಗಳ ಕಿಟಕಿ ಗಾಜು ಪುಡಿಯಾಗಿತ್ತು. ಈ ಬಗ್ಗೆ ಕಾರ್ಯಕ್ರಮ ಆಯೋಜಕರು ಮಂಗಳವಾರ ಹೇಳಿಕೆ ನೀಡಿದ್ದರು. ‘‘ಮೋಟರ್ ಸೈಕಲ್‌ನಲ್ಲಿ ಆಗಮಿಸಿದ್ದ ವ್ಯಕ್ತಿಗಳು ಕೂಗಿದ ಘೋಷಣೆ ಅವರು ನಿರ್ದಿಷ್ಟ ಸಿದ್ಧಾಂತಕ್ಕೆ ಸೇರಿದವರು ಎಂಬುದನ್ನು ಸ್ಪಷ್ಟವಾಗಿ ಸೂಚಿಸಿದೆ’’ ಎಂದು ಹೇಳಿಕೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News