ಮಹಾತ್ಮಾ ಗಾಂಧಿ ಕಟ್ಟಾ ಸನಾತನ ಹಿಂದು ಆಗಿದ್ದರು:ಆರೆಸ್ಸೆಸ್ ಮುಖ್ಯಸ್ಥ ಭಾಗವತ್

Update: 2020-02-18 15:24 GMT

ಹೊಸದಿಲ್ಲಿ,ಫೆ.18: ಮಹಾತ್ಮಾ ಗಾಂಧಿಯವರು ಕಟ್ಟಾ ಸನಾತನ ಹಿಂದುವಾಗಿದ್ದರು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.

ಮಾಜಿ ಎನ್‌ಸಿಇಆರ್‌ಟಿ ಮುಖ್ಯಸ್ಥ ಜೆ.ಎಸ್.ರಾಜಪೂತ್ ಅವರ ಗಾಂಧಿ ಕುರಿತು ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್ ಅವರು,ಗಾಂಧಿ ತಾನು ಹಿಂದು ಎಂದು ಹೇಳಿಕೊಳ್ಳಲು ಅಂಜುತ್ತಿರಲಿಲ್ಲ. ಅವರು ಪಾದಯಾತ್ರೆಗಳನ್ನು,ರೈಲು ಪ್ರಯಾಣಗಳನ್ನು ಮಾಡಿ ಸಾಮಾನ್ಯ ಜನರೊಂದಿಗೆ ಸಂಪರ್ಕ ಬೆಳಸಿಕೊಂಡಿದ್ದರು ಮತ್ತು ಆಗ ಅವರು ಭಾರತೀಯತೆಯ ಬಗ್ಗೆ ಚಿಂತನೆ ನಡೆಸಿದ್ದರು. ಇದೇ ಕಾರಣದಿಂದ ಹಿಂದು ಎಂದು ಹೇಳಿಕೊಳ್ಳಲು ಅವರು ಅಳುಕುತ್ತಿರಲಿಲ್ಲ. ವಿವಿಧ ಧರ್ಮಗಳಲ್ಲಿಯ ವ್ಯತ್ಯಾಸಗಳನ್ನು ಸ್ವೀಕರಿಸುವುದು ಮತ್ತು ಸಮಾನತೆಗಳನ್ನು ಕಂಡುಕೊಳ್ಳುವುದು ಅವರ ವಿಧಾನವಾಗಿತ್ತು ಎಂದರು.

ಇನ್ನೊಂದು 20 ವರ್ಷಗಳಲ್ಲಿ ದೇಶವು ಗಾಂಧಿಯವರು ಕನಸು ಕಂಡಿದ್ದ ಭಾರತವಾಗಲಿದೆ ಎಂದ ಭಾಗವತ್, ಅವರ ಪ್ರಾಮಾಣಿಕತೆ, ದೂರದೃಷ್ಟಿ ಮತ್ತು ಸತ್ಯವಂತಿಕೆಯ ಕುರಿತೂ ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News