ದೇಶದ ರಾಜಕೀಯ ‘ವಿಶ್ವಾಸಾರ್ಹತೆ ಬಿಕ್ಕಟ್ಟು’ ಎದುರಿಸುತ್ತಿದೆ: ರಾಜನಾಥ್ ಸಿಂಗ್
ಹೊಸದಿಲ್ಲಿ, ಫೆ. 21: ರಾಜಕಾರಣಿಗಳ ಮಾತು ಹಾಗೂ ಕೃತಿಯಲ್ಲಿ ವ್ಯತ್ಯಾಸ ಇರುವ ಕಾರಣಕ್ಕೆ ದೇಶದ ರಾಜಕೀಯ ‘ವಿಶ್ವಾಸಾರ್ಹತೆ ಬಿಕ್ಕಟ್ಟು’ ಎದುರಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
‘ರಾಜಕೀಯ’ ಪದ ಅರ್ಥ ಕಳೆದುಕೊಂಡಿದೆ ಎಂದು ಹೇಳಿದ ಅವರು, ರಾಜಕೀಯದಲ್ಲಿ ‘ವಿಶ್ವಾಸಾರ್ಹತೆ ಬಿಕ್ಕಟ್ಟು’ನ್ನು ಅಂತ್ಯಗೊಳಿಸುವುದನ್ನು ಸವಾಲಾಗಿ ಸ್ವೀಕರಿಸುವಂತೆ ಜನರಿಗೆ ಕರೆ ನೀಡಿದರು.
‘‘ಸಮಾಜವನ್ನು ಸರಿಯಾದ ಪಥದಲ್ಲಿ ಕೊಂಡೊಯ್ಯುವ ವ್ಯವಸ್ಥೆ ರಾಜಕೀಯ. ಆದರೆ, ಈಗ ಅದು ಅರ್ಥ ಹಾಗೂ ಸಾರ ಕಳೆದುಕೊಂಡಿದೆ. ಜನರು ಇದನ್ನು ದ್ವೇಷಿಸಬೇಕು’’ ಎಂದು ಕೆಂಪುಕೋಟೆಯ ಲಾನ್ನಲ್ಲಿ ಬ್ರಹ್ಮಕುಮಾರಿಯ ಶಿವರಾತ್ರಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಹೇಳಿದರು.
ರಾಜಕಾರಣಿಗಳ ಮಾತು ಹಾಗೂ ಕೃತಿಗಳಲ್ಲಿ ವ್ಯತ್ಯಾಸದ ಕಾರಣಕ್ಕೆ ರಾಜಕೀಯದಲ್ಲಿ ‘ವಿಶ್ವಾಸಾರ್ಹತೆ ಬಿಕ್ಕಟ್ಟು’ ಉದ್ಭವಿಸಿತು. ರಾಜಕೀಯದ ಈ ಬಿಕ್ಕಟ್ಟನ್ನು ಅಂತ್ಯಗೊಳಿಸಲು ನೀವು ಇದನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಅವರು ಪ್ರತಿಪಾದಿಸಿದರು. ಸಾಮಾಜಿಕ ಏಕರೂಪತೆ ಉತ್ತೇಜಿಸಲು ತಮ್ಮ ಮಾತೃ ಭಾಷೆಯ ಹೊರತಾಗಿ ಕನಿಷ್ಠ ಒಂದು ಭಾಷೆ ಕಲಿಯುವಂತೆ ಅವರು ಜನರನ್ನು ಆಗ್ರಹಿಸಿದರು.