ದಿಲ್ಲಿ: ಚರಂಡಿಯಲ್ಲಿ ಮತ್ತೆರಡು ಮೃತದೇಹಗಳು ಪತ್ತೆ
ಹೊಸದಿಲ್ಲಿ, ಫೆ.27: ಈಶಾನ್ಯ ದಿಲ್ಲಿಯ ಗಂಗಾವಿಹಾರ ಪ್ರದೇಶದ ಚರಂಡಿಯಲ್ಲಿ ಗುರುವಾರ ಮತ್ತೆ ಎರಡು ಮೃತದೇಹ ಪತ್ತೆಯಾಗಿದ್ದು, ಹೆಚ್ಚುವರಿ ಪೊಲೀಸರನ್ನು ಈ ಸ್ಥಳದಲ್ಲಿ ನಿಯೋಜಿಸಲಾಗಿದೆ.
ಇನ್ನಷ್ಟು ಮೃತದೇಹ ಪತ್ತೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಂಗಾವಿಹಾರ್-ಜೊಹ್ರಿಪುರ ವಿಸ್ತರಣಾ ಪ್ರದೇಶದಲ್ಲಿ ಎರಡು ಮೃತದೇಹ ಪತ್ತೆಯಾಗಿದೆ.
ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ 5 ಮಂದಿ ಜಿಟಿಬಿ ಆಸ್ಪತ್ರೆಯಲ್ಲಿ, ಎಲ್ಎನ್ಜೆಪಿ ಆಸ್ಪತ್ರೆಯಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದು ಇದರೊಂದಿಗೆ ಈಶಾನ್ಯ ದಿಲ್ಲಿಯ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 35ಕ್ಕೇರಿದೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಗುರುವಾರ ಈಶಾನ್ಯ ದಿಲ್ಲಿಯ ವೌಜ್ಪುರದಲ್ಲಿ ಪೊಲೀಸರು ಧ್ವಜಮೆರವಣಿಗೆ ನಡೆಸಿದ್ದಾರೆ. ಸ್ಥಳದಲ್ಲಿ ಇನ್ನೂ ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಬಿಗು ಬಂದೋಬಸ್ತ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.