‘ನೀವು ಸುಳ್ಳು ಹೇಳುತ್ತಿದ್ದೀರಿ’: ‘ಗೋಲಿಮಾರೊ’ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಅನುರಾಗ್ ಠಾಕೂರ್

Update: 2020-03-01 14:39 GMT

ಹೊಸದಿಲ್ಲಿ,ಫೆ.1: ದಿಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವಿವಾದಾತ್ಮಕ ‘ ದೇಶ್ ಕೆ ಗದ್ದಾರೋಂ ಕೊ ಗೋಲಿಮಾರೊ' ಘೋಷಣೆಯನ್ನು ಕೂಗಿದ್ದಕ್ಕಾಗಿ ತೀವ್ರ ಖಂಡನೆಗೊಳಗಾಗಿರುವ ಕೇಂದ್ರ ಸಚಿವ ಅನುರಾಗ್‌ ಠಾಕೂರ್ ಅವರು, ತಾನು ಅಂತಹ ಘೋಷಣೆಯನ್ನು ಯಾವತ್ತೂ ಹೇಳಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

 ಹೊಸದಿಲ್ಲಿಯಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರನ್ನು ದೇಶಾದ್ಯಂತ ವ್ಯಾಪಕ ಖಂಡನೆಗೊಳಗಾದ ಈ ಘೋಷಣೆಯ ಬಗ್ಗೆ ವರದಿಗಾರರೊಬ್ಬರು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಅನುರಾಗ್ ಠಾಕೂರ್ ‘‘ ನೀವು ಸುಳ್ಳು ಹೇಳುತ್ತಿರುವಿರಿ. ಈ ಬಗ್ಗೆ ಸರಿಯಾದ ಸಂಗತಿಗಳನ್ನು ತಿಳಿದುಕೊಳ್ಳಿ. ಅರೆಬರೆ ಜ್ಞಾನವು ಅಪಾಯಕಾರಿಯಾದುದು’’ ಎಂದರು.

 ಆದರೆ ಈ ಪ್ರಶ್ನೆಗೆ ಹೆಚ್ಚು ವಿವರಣೆ ನೀಡಲು ಇಚ್ಛಿಸದ ಅವರು ಪ್ರಕರಣವು ಈಗ ನ್ಯಾಯಾಲಯದ ಅಧೀನದಲ್ಲಿದೆ ಎಂದರು.

 ಆದಾಯ ತೆರಿಗೆ ಇಲಾಖೆ ಆಯೋಜಿಸಿದ ವಿವಿ ವಾಣಿಜ್ಯ ಹಾಗೂ ಕೈಗಾರಿಕಾ ಕ್ಷೇತ್ರದ ಗಣ್ಯರ ಜೊತೆಗಿನ ಸಂವಾದ ಶಿಬಿರದಲ್ಲಿ ಪಾಲ್ಗೊಂಡ ಬಳಿಕ ಸಚಿವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಅನುರಾಗ್ ಠಾಕೂರ್ ಮಾಡಿದ್ದರೆನ್ನಲಾದ ದ್ವೇಷ ಭಾಷಣದ ಬಗ್ಗೆ ವರದಿಗಾರರು ಇನ್ನೂ ಹೆಚ್ಚಿನ ಪ್ರಶ್ನೆಗಳನ್ನು ಕೇಳತೊಡಗಿದಾಗ , ಆರ್ಥಿಕತೆಯ ಬಗ್ಗೆ ನಿಮಗೆ ಏನಾದರೂ ಪ್ರಶ್ನೆಗಳನ್ನು ಕೇಳುವುದಿದ್ದರೆ ಕೇಳಿ ಎಂದು ಕಟುವಾಗಿ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News