ದೇಶದ ಶಾಂತಿ ಕಾಪಾಡಲು ಯಾವುದೇ ಪಾತ್ರ ವಹಿಸಲು ಸಿದ್ಧ: ರಜಿನಿಕಾಂತ್

Update: 2020-03-02 16:11 GMT
Photo: PTI

ಚೆನ್ನೈ, ಮಾ. 2: ದಿಲ್ಲಿಯಲ್ಲಿ ನಡೆದ ಕೋಮು ಹಿಂಸಾಚಾರ ಖಂಡಿಸಿದ ದಿನಗಳ ಬಳಿಕ ಸೂಪರ್ ಸ್ಟಾರ್ ರಜಿನಿಕಾಂತ್, ದೇಶದಲ್ಲಿ ಶಾಂತಿ ಕಾಪಾಡಲು ಯಾವುದೇ ರೀತಿಯ ಪಾತ್ರ ನಿರ್ವಹಿಸಲು ತಾನು ಸಿದ್ಧರಿರುವುದಾಗಿ ರವಿವಾರ ತಿಳಿಸಿದ್ದಾರೆ.

ಮುಸ್ಲಿಂ ಸಂಘಟನೆಯ ಕೆಲವು ನಾಯಕರು ಇಲ್ಲಿನ ಅವರ ನಿವಾಸದಲ್ಲಿ ಭೇಟಿಯಾದ ಬಳಿಕ ರಜನಿಕಾಂತ್ ಈ ಹೇಳಿಕೆ ಟ್ವೀಟ್ ಮಾಡಿದ್ದಾರೆ.

‘‘ದೇಶದಲ್ಲಿ ಶಾಂತಿ ಕಾಪಾಡಲು ನಾನು ಯಾವುದೇ ಪಾತ್ರ ನಿರ್ವಹಿಸಲು ಸಿದ್ಧ. ದೇಶದ ಪ್ರಮುಖ ತತ್ವ ಪ್ರೀತಿ, ಒಗ್ಗಟ್ಟು ಹಾಗೂ ಶಾಂತಿ ಎಂಬ ನಿಮ್ಮ ಹೇಳಿಕೆಯನ್ನು ನಾನು ಒಪ್ಪಿಕೊಳ್ಳುತ್ತೇನೆ’’ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮುಸ್ಲಿಂ ಸಂಘಟನೆ ‘ತಮಿಳುನಾಡು ಜಮಾಅತುಲ್ ಉಲಮಾ ಸಭಾಅ ಸದಸ್ಯರು ಇಂದು ಬೆಳಗ್ಗೆ ರಜಿನಿಕಾಂತ್ ಅವರನ್ನು ಪೊಯೆಸ್ ಗಾರ್ಡನ್‌ಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು.

ಕಳೆದ ವಾರ ರಜನಿಕಾಂತ್ ಅವರು ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ಕೇಂದ್ರದ ಬಿಜೆಪಿ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಹಿಂಸಾಚಾರವನ್ನು ಕಟ್ಟುನಿಟ್ಟಾಗಿ ನಿಗ್ರಹಿಸಬೇಕು ಎಂದು ಅವರು ಹೇಳಿದ್ದರು. ಹಿಂಸಾಚಾರವನ್ನು ನಿಗ್ರಹಿಸಲು ಸಾಧ್ಯವಾಗದೇ ಇದ್ದರೆ ಅಧಿಕಾರಕ್ಕೆ ರಾಜೀನಾಮೆ ನೀಡಿ ತೆರಳಿ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News