×
Ad

ಕೊರೋನವೈರಸ್ ‘ಅಧಿಸೂಚಿತ ವಿಪತ್ತು’ ಎಂದು ಘೋಷಿಸಿದ ಭಾರತ

Update: 2020-03-14 20:20 IST

ಹೊಸದಿಲ್ಲಿ,ಮಾ.14: ದೇಶದಲ್ಲಿ ಕೊರೋನವೈರಸ್ ಪಿಡುಗನ್ನು ‘ಅಧಿಸೂಚಿತ ವಿಪತ್ತು ’ಎಂದು ಘೋಷಿಸಿರುವ ಕೇಂದ್ರ ಸರಕಾರವು ಇದು ಸೋಂಕುಪೀಡಿತ ವ್ಯಕ್ತಿಗಳಿಗೆ ಮತ್ತು ಸೋಂಕಿನಿಂದಾಗಿ ಮೃತರ ಕುಟುಂಬಗಳಿಗೆ ಪರಿಹಾರ ಮತ್ತು ನೆರವನ್ನು ಒದಗಿಸುವ ‘ವಿಶೇಷ ಒಂದು ಬಾರಿಯ ವ್ಯವಸ್ಥೆ ’ಯಾಗಿದೆ ಎಂದು ತಿಳಿಸಿದೆ.

ಕೊರೋನವೈರಸ್ ಸೋಂಕಿನಿಂದ ಮೃತರ ಕುಟುಂಬಗಳಿಗೆ ನಾಲ್ಕು ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು. ಚಿಕಿತ್ಸೆ ಪಡೆಯುತ್ತಿರುವ ಸೋಂಕುಪೀಡಿತರ ಆಸ್ಪತ್ರೆ ವೆಚ್ಚವನ್ನು ರಾಜ್ಯ ಸರಕಾರಗಳು ನಿಗದಿಗೊಳಿಸಿವೆ ಎಂದು ಗೃಹ ಸಚಿವಾಲಯವು ತನ್ನ ಪತ್ರದಲ್ಲಿ ತಿಳಿಸಿದೆ.

ಪ್ರತ್ಯೇಕ ನಿಗಾ ಶಿಬಿರಗಳಲ್ಲಿರುವ ರೋಗಿಗಳು ಮತ್ತು ಜನರಿಗೆ ತಾತ್ಕಾಲಿಕ ವಸತಿ ಹಾಗೂ ಆಹಾರ,ನೀರು,ಬಟ್ಟೆ ಮತ್ತು ವೈದ್ಯಕೀಯ ನೆರವು ಒದಗಿಸುವುದು ಸರಕಾರವು ವಿವರಿಸಿರುವ ಕ್ರಮಗಳಲ್ಲಿ ಸೇರಿವೆ.

  ಹೆಚ್ಚುವರಿ ಪರೀಕ್ಷಾ ಕೇಂದ್ರಗಳು, ಪೊಲೀಸರು, ಆರೋಗ್ಯ ರಕ್ಷಣೆ ಮತ್ತು ಮುನ್ಸಿಪಲ್ ಅಧಿಕಾರಿಗಳಿಗೆ ರಕ್ಷಣಾ ಉಪಕರಣಗಳು, ಸರಕಾರಿ ಆಸ್ಪತ್ರೆಗಳಿಗೆ ಥರ್ಮಲ್ ಸ್ಕಾನರ್‌ಗಳು ಮತ್ತು ಇತರ ಅಗತ್ಯ ಉಪಕರಣಗಳ ವೆಚ್ಚವನ್ನು ಪಾವತಿಸಲು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಹಣವನ್ನು ಬಳಸಿಕೊಳ್ಳಲಾಗುವುದು. ಇದಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯನ್ನು ಬಳಸಲಾಗುವುದಿಲ್ಲ. ಉಪಕರಣಗಳ ಒಟ್ಟು ವೆಚ್ಚ ನಿಧಿಯ ವಾರ್ಷಿಕ ಹಂಚಿಕೆಯ ಶೇ.10ನ್ನು ಮೀರುವಂತಿಲ್ಲ ಎಂದು ಸರಕಾರವು ತಿಳಿಸಿದೆ.

ಭಾರತದಲ್ಲಿ ಈವರೆಗೆ 80ಕ್ಕೂ ಅಧಿಕ ಕೊರೋನವೈರಸ್ ಪ್ರಕರಣಗಳು ದೃಢಪಟ್ಟಿವೆ. ಸೋಂಕಿಗೊಳಗಾಗಿದ್ದ ಕರ್ನಾಟಕದ ಕಲಬುರಗಿಯ ವೃದ್ಧರೋರ್ವರು ಗುರುವಾರ ಮತ್ತು ದಿಲ್ಲಿಯ ವೃದ್ಧೆಯೋರ್ವರು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.

ಕೊರೋನವೈರಸ್ ಬಗ್ಗೆ ಮುಂಜಾಗ್ರತೆ ವಹಿಸಿರುವ ಕರ್ನಾಟಕ, ಮಹಾರಾಷ್ಟ್ರ, ಕೇರಳ, ದಿಲ್ಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಾರ್ವಜನಿಕ ಸ್ಥಳಗಳು, ಶಾಲಾ ಕಾಲೇಜುಗಳು ಇತ್ಯಾದಿಗಳನ್ನು ಈಗಾಗಲೇ ಮುಚ್ಚಲಾಗಿದ್ದು, ಭಾರೀ ಪ್ರಮಾಣದಲ್ಲಿ ಸಮಾವೇಶಗಳನ್ನು ನಿಷೇಧಿಸಲಾಗಿದೆ. ಶನಿವಾರ ಪಶ್ಚಿಮ ಬಂಗಾಳ ಮತ್ತು ಗೋವಾ ರಾಜ್ಯಗಳೂ ಇಂತಹುದೇ ಕ್ರಮಗಳನ್ನು ಪ್ರಕಟಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News